ಬೆಂಗಳೂರು, ಜು.14 www.bengaluruwire.com : ಯುಜಿಸಿಇಟಿ-25 ಆಪ್ಷನ್ ಎಂಟ್ರಿ ಪ್ರಕ್ರಿಯೆಯಲ್ಲಿ ಎದುರಾದ ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA- ಕೆಇಎ) ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಆಪ್ಷನ್ ಎಂಟ್ರಿ ದಿನಾಂಕವನ್ನು ಜುಲೈ 15ರಿಂದ ಜುಲೈ 18ರವರೆಗೆ ವಿಸ್ತರಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಐಎಎಸ್ ತಿಳಿಸಿದ್ದಾರೆ.
ಸರ್ವರ್ ಸಮಸ್ಯೆಯಿಂದಾಗಿ ಲಾಗಿನ್ ಆಗಿ ಆಪ್ಷನ್ ಎಂಟ್ರಿ ಮಾಡಲು ಕೊಂಚ ವಿಳಂಬವಾಗುತ್ತಿದ್ದುದನ್ನು ಪರಿಗಣಿಸಿ ಈ ವಿಸ್ತರಣೆ ಮಾಡಲಾಗಿದೆ. ಇಂಜಿನಿಯರಿಂಗ್, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ, ಬಿ.ಪಿ.ಟಿ. ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳಿಗೆ ಸೀಟು ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೆ ಈ ವಿಸ್ತರಿತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಸನ್ನ ಮನವಿ ಮಾಡಿದ್ದಾರೆ.
ಆಯ್ಕೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳಿ
ಅಭ್ಯರ್ಥಿಗಳು, ಕಾಲೇಜುಗಳು ಮತ್ತು ಕೋರ್ಸುಗಳ ಪಟ್ಟಿಯನ್ನು ಆದ್ಯತೆಯ ಕ್ರಮದಲ್ಲಿ (ಕಾಲೇಜು ಕೋಡ್ ಮತ್ತು ಕೋರ್ಸ್ ಕೋಡ್) ಬಿಳಿ ಕಾಗದದಲ್ಲಿ ಮುಂಚಿತವಾಗಿಯೇ ಬರೆದು ಸಿದ್ಧಪಡಿಸಿಕೊಂಡು ನಂತರ ಪೋರ್ಟಲ್ನಲ್ಲಿ ಆಪ್ಷನ್ ಎಂಟ್ರಿ ನಮೂದಿಸಬೇಕು. ಹೀಗೆ ಮಾಡುವುದರಿಂದ ಏಕಕಾಲದಲ್ಲಿ ಅಧಿಕ ಸಂಖ್ಯೆಯ ಅಭ್ಯರ್ಥಿಗಳು ಪೋರ್ಟಲ್ ಅನ್ನು ದೀರ್ಘ ಸಮಯದವರೆಗೆ ಸಕ್ರಿಯ ಅವಸ್ಥೆಯಲ್ಲಿ ಇರಿಸುವುದು ತಪ್ಪುತ್ತದೆ; ಇದು ಇತರ ಅಭ್ಯರ್ಥಿಗಳಿಗೆ ಪೋರ್ಟಲ್ ಲಭ್ಯತೆಯನ್ನು ಸುಲಭಗೊಳಿಸುತ್ತದೆ ಎಂದು ಕೆಇಎ ತಿಳಿಸಿದೆ.

ಆಯ್ಕೆ ನಮೂದು ಪೋರ್ಟಲ್ ಪುನರಾರಂಭದ ಬಗ್ಗೆ ಎಲ್ಲ ಅಭ್ಯರ್ಥಿಗಳಿಗೆ ಜ್ಞಾಪನ ಸಂದೇಶ ಕಳುಹಿಸಲಾಗುವುದು. ಮೊದಲ ಸುತ್ತಿನ ಸೀಟು ಹಂಚಿಕೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದು, ಜುಲೈ 21ರಂದು ಅಣಕು ಸೀಟು ಹಂಚಿಕೆ ಫಲಿತಾಂಶ ಹಾಗೂ ಜುಲೈ 28ರಂದು ಅಂತಿಮ ಫಲಿತಾಂಶ ಹೊರಬೀಳಲಿದೆ ಎಂದು ಕೆಇಎ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ವಿವರಿಸಿದೆ.
ವೈದ್ಯಕೀಯ ಕೋರ್ಸ್ಗಳಿಗೆ ದಾಖಲೆ ಪರಿಶೀಲನೆ ಜುಲೈ 17ರಿಂದ :
ಜುಲೈ 7ರ ನಂತರ ಯುಜಿನೀಟ್ -2025ಕ್ಕೆ ನೋಂದಣಿ ಮತ್ತು ಆನ್ಲೈನ್ ಅರ್ಜಿ ಭರ್ತಿ ಮಾಡಿ, ಶುಲ್ಕ ಪಾವತಿಸಿರುವ (‘ಎ’ಯಿಂದ ‘ಒ’ವರೆಗೆ ಹಾಗೂ ‘ಝಡ್’ ಕ್ಲಾಸ್ನಡಿ ಸೀಟು ಕ್ಲೇಮು ಮಾಡಿರುವವರು) ಅಭ್ಯರ್ಥಿಗಳು, ವೈದ್ಯಕೀಯ/ದಂತ ವೈದ್ಯಕೀಯ/ಆರ್ಯುವೇದ/ಹೋಮಿಯೋಪತಿ/ಯುನಾನಿ ಕೋರ್ಸುಗಳ ಪ್ರವೇಶಾತಿಗಾಗಿ ಎಲ್ಲಾ ಅಗತ್ಯ ಮೂಲ ದಾಖಲೆಗಳ ಪರಿಶೀಲನೆಗೆ ಕೆಇಎ ಕಚೇರಿಗೆ ಜುಲೈ 17ರಿಂದ 19ರೊಳಗೆ ಹಾಜರಾಗಬೇಕು.
ವಿಶೇಷ ಪ್ರವರ್ಗಗಳಡಿ ಅರ್ಜಿ ಸಲ್ಲಿಕೆ ಮಾಡಿರುವವರು, ವಿಶೇಷ ಚೇತನ ಅಭ್ಯರ್ಥಿಗಳು, ‘ಎ’ಯಿಂದ ‘ಒ’ ಹಾಗೂ ‘ಝಡ್’ ಕ್ಲಾಸ್ನಡಿ ಕ್ಲೇಮು ಮಾಡಿರುವವರು ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಕುರಿತಾದ ವೇಳಾಪಟ್ಟಿಯನ್ನು ಕೆಇಎ ವೆಬ್ಸೈಟಿನಲ್ಲಿ ಪ್ರಕಟಿಸಲಾಗಿದ್ದು, ಆ ಪ್ರಕಾರ ಹಾಜರಾಗಬೇಕು. ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳನ್ನು ಯುಜಿಸಿಇಟಿ ಸಂದರ್ಭದಲ್ಲಿಯೇ ನೀಡಲಾಗಿದೆ. ಅಭ್ಯರ್ಥಿಗಳು ಅದನ್ನು ಓದಿಕೊಳ್ಳಬೇಕು ಎಂದು ಕೆಇಎ ಸ್ಪಷ್ಟಪಡಿಸಿದೆ.
ಹೊರನಾಡು ಮತ್ತು ಗಡಿನಾಡು ಕನ್ನಡ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ :
ಹೊಸದಾಗಿ ನೋಂದಣಿ ಮಾಡಿರುವ ಹೊರನಾಡು ಮತ್ತು ಗಡಿನಾಡು ಕನ್ನಡ ಅಭ್ಯರ್ಥಿಗಳಿಗೆ ಜುಲೈ 17ರಂದು ಮಧ್ಯಾಹ್ನ 3.30ರಿಂದ ಸಂಜೆ 4.30ರವರೆಗೆ ಬೆಂಗಳೂರು ಕೇಂದ್ರದಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.






















