ಬೆಂಗಳೂರು, ಮೇ.27 www.bengaluruwire.com : ಮಾಧ್ಯಮ ಕ್ಷೇತ್ರಕ್ಕೆ ಕೊಡಲಿ ಪೆಟ್ಟು ನೀಡಲಿರುವ ಡಿಜಿಟಲ್ ವೈಯುಕ್ತಿಕ ದತ್ತಾಂಶ ಸಂರಕ್ಷಣಾ ಕಾಯಿದೆಯನ್ನು ಕೈಬಿಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ- ಕೆಯುಡಬ್ಲೂೃಜೆ) ಒತ್ತಾಯಿಸಿದೆ.
ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಿಗೆ ಈ ಬಗ್ಗೆ ಪತ್ರ ಬರೆದಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಈ ಕಾಯಿದೆಯಿಂದ ಪತ್ರಕರ್ತರ ಸ್ವಾತಂತ್ರಕ್ಕೆ ದಕ್ಕೆಯಾಗಲಿದೆ ಎಂದು ಹೇಳಿದ್ದಾರೆ.
ಸಂವಿಧಾನದ ನಾಲ್ಕನೇ ಅಂಗ ಎಂದು ಬಣ್ಣಿಸಲ್ಪಡುತ್ತಿರುವ ಮಾಧ್ಯಮ ರಂಗ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಮಾಧ್ಯಮ ಕ್ಷೇತ್ರ ನಿಸ್ಪಕ್ಷಪಾತ ಮತ್ತು ನಿರ್ಭೀತಿಯಿಂದ ಕೆಲಸ ಮಾಡಬೇಕು ಎನ್ನುವುದು ಸಂವಿಧಾನದ ಪ್ರಮುಖ ಆಶಯವಾಗಿದ್ದು, ಅದೇ ರೀತಿಯಲ್ಲಿ ಮಾಧ್ಯಮ ಕೆಲಸ ಮಾಡುತ್ತಾ ಬಂದಿದೆ ಎಂದು ಹೇಳಿದ್ದಾರೆ.
ಈಗ ಕೇಂದ್ರ ಸರ್ಕಾರ ರೂಪಿಸಿರುವ ಡಿಜಿಟಲ್ ವೈಯುಕ್ತಿಕ ದತ್ತಾಂಶ ಸಂರಕ್ಷಣಾ ಕಾಯಿದೆ (Digital Personal Data Protection Act 2023) ಮಾಧ್ಯಮ ಸ್ವಾತಂತ್ರ್ಯಕ್ಕೆ ಕೊಡಲಿ ಪೆಟ್ಟು ನೀಡಲಿದೆ ಎಂಬ ಆತಂಕ ಮೂಡಿಸಿದೆ.

ಈ ಕಾಯಿದೆ ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆಗೊಂಡಿದ್ದು, ಜನವರಿ 3, 2025ರ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಇದರಲ್ಲಿ ನಿಯಮಗಳನ್ನು ರೂಪಿಸುವ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಈ ಆಕ್ಷೇಪಣೆಗಳನ್ನು ಕೇಳುವ ಸಂಬಂಧ ಹೊರಡಿಸಲಾಗಿರುವ ಹಲವಾರು ನಿಯಮಾವಳಿಗಳು ಮಾಧ್ಯಮ ಕ್ಷೇತ್ರದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸದ್ಯ ಕೇಂದ್ರ ಸರ್ಕಾರ ಕರಡಿನ ರೂಪದಲ್ಲಿ ಪ್ರಕಟಗೊಂಡಿರುವ ನಿಯಮಗಳು ಕಾನೂನಿನ ಸ್ವರೂಪ ಪಡೆದುಕೊಂಡು ಜಾರಿಗೆ ಬಂದಿದ್ದೆ ಆದಲ್ಲಿ ಮಾಧ್ಯಮ ಕ್ಷೇತ್ರ ನಿರ್ಭೀತಿ ಮತ್ತು ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶವೇ ಇಲ್ಲದಂತೆ ಆಗುತ್ತದೆ ಈ ಹಿನ್ನೆಲೆಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಗಂಡಾಂತರಕ್ಕಾಗಿ ಪರಿಣಮಿಸಿರುವ ನಿಯಮಗಳನ್ನು ರದ್ದು ಪಡಿಸಬೇಕು ಎಂದು ತಗಡೂರು ಆಗ್ರಹಿಸಿದ್ದಾರೆ.