ಬೆಂಗಳೂರು, ಸೆ.12 www.bengaluruwire.com : ರಾಜಧಾನಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆಗಳನ್ನು ನಿರ್ಬಂಧಿಸಿರುವ ಆದೇಶವನ್ನು ಸೆ.15 ರ ಒಳಗಾಗಿ (ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ) ಮುಖ್ಯಮಂತ್ರಿಗಳು ಹಿಂಪಡೆಯಬೇಕು ಎಂದು ವಿವಿಧ ಸಂಘಟನೆಗಳ ಸದಸ್ಯರ ‘ಹೋರಾಟದ ಹಕ್ಕಿಗಾಗಿ ಜನಾಂದೋಲನ’ವು ಒತ್ತಾಯಿಸಿದೆ.
ಈ ಬಗ್ಗೆ ಗುರುವಾರ ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಹಾಗು ಇತಿಹಾಸ ತಜ್ಞರಾದ ರಾಮಚಂದ್ರ ಗುಹಾ ರವರು ಮಾತನಾಡಿ “ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದೇ ಹೋರಾಟಗಳ ಮೂಲಕ. ಟ್ರಾಫಿಕ್ ಸಮಸ್ಯೆ ಆಗುತ್ತೆ ಎನ್ನುವ ನೆಪದಲ್ಲಿ ಮೂಲಭೂತ ಹಕ್ಕಾದ ಹೋರಾಟದ ಹಕ್ಕನ್ನು ಹತ್ತಿಕ್ಕುವುದು ಸರಿಯಲ್ಲ. ಈ ಹಿಂದೆ ಟೌನ್ ಹಾಲ್, ಮೈಸೂರು ವೃತ್ತ, ಆನಂದ್ ರಾವ್ ವೃತ್ತ ಇಲ್ಲೆಲ್ಲ ಪ್ರತಿಭಟನೆ ಮಾಡಿದ್ದೇವೆ, ಆಗೆಲ್ಲ ಯಾವ ಟ್ರಾಫಿಕ್ ಸಮಸ್ಯೆ ಸಹ ಆಗಿಲ್ಲ” ಎಂದು ಹೇಳಿದರು.
“ಈಗ ನಮ್ಮನ್ನು ‘Unfreedom Park’ ಅಥವಾ ‘Freedom-Hidden-Away Park’ ಗೆ ಬಂಧಿಸಿದ್ದಾರೆ” ಎಂದು ಸರ್ಕಾರದ ನಡೆಯನ್ನು ಖಂಡಿಸಿದರು.
ಎಐಎಲ್ ಎಜೆ ಸಂಸ್ಥೆಯ ವಕೀಲರಾದ ಮೈತ್ರೇಯಿ ಕೆ ಪತ್ರಿಕಾಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಖ್ಯಮಂತ್ರಿಗಳಿಗೆ ನೀಡುತ್ತಿರುವ ಬಹಿರಂಗ ಪತ್ರಕ್ಕೆ ಈಗಾಗಲೇ 565 ನಾಗರೀಕರು ಮತ್ತು ಕಾರ್ಯಕರ್ತರ ಸಹಿ ಮಾಡಿದ್ದಾರೆ ಎಂದು ತಿಳಿಸಿದರು.
‘ಫ್ರೀಡಂ ಪಾರ್ಕನಲ್ಲಿ ಪ್ರತಿಭಟನೆಗಳನ್ನು ನಿರ್ಬಂಧಿಸಿರುವುದಷ್ಟೇ ಅಲ್ಲ, ಪೋಲೀಸರು ತಮ್ಮ ಅಧಿಕಾರವನ್ನು ಅನೇಕ ಬಾರಿ ದುರುಪಯೋಗಪಡಿಸಿಕೊಂಡು, ಕರಪತ್ರವನ್ನು ಹಂಚುವ, ಮುಂಬತ್ತಿ ಹಚ್ಚಿಕೂರುವ, ಸಾಮಾಜಿಕ ಸಮಸ್ಯೆಗಳ ಕುರಿತು ಇರುವ ಯಾವುದೇ ಸಾಕ್ಷ್ಯ ಚಿತ್ರಗಳ ಪ್ರದರ್ಶನ ಮಾಡುವ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್ ಐ ಆರ್ ಗಳನ್ನು ಹಿಂಪಡೆಯಬೇಕು ಮತ್ತು ಪೊಲೀಸ್ ಹಿಂಸಾಚಾರದ ಘಟನೆಗಳ ಬಗ್ಗೆ ಕೂಡಲೇ ತನಿಖೆ ನಡೆಸಬೇಕೆಂದು ಮೈತ್ರೇಯಿ ಒತ್ತಾಯಿಸಿದರು.
ಹಿರಿಯ ಸಾಹಿತಿಗಳಾದ ಡಾ.ವಿಜಯಮ್ಮ, ಕೆ. ಮರುಳಸಿದ್ದಪ್ಪ, ರಾಮಚಂದ್ರ ಗುಹಾ; ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾದ ಜೆ.ಎಂ.ವೀರಸಂಗಯ್ಯ; ಹಿರಿಯ ಹೋರಾಟಗಾರರಾದ ಮೀನಾಕ್ಷಿ ಬಾಳಿ, ನಗರಗೆರೆ ರಮೇಶ್, ಕೆ.ಎಲ್. ಅಶೋಕ್ ಹಾಗು ಹಿರಿಯ ಪತ್ರಕರ್ತರಾದ ಶಿವಸುಂದರ ಈ ಪತ್ರಕ್ಕೆ ಸಹಿ ಹಾಕಿದ್ದವರಲ್ಲಿ ಪ್ರಮುಖರಾಗಿದ್ದಾರೆ ಎಂದು ಅವರು ಹೇಳಿದರು.
ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷರಾದ ಕೆ.ಎಸ್. ವಿಮಲಾ ರವರು ಮಾತನಾಡಿ, “ಪ್ರಜಾಪ್ರಭುತ್ವ ಕೇವಲ ಮತ ಹಾಕುವುದಕ್ಕೆ ಸೀಮಿತವಾಗಿಲ್ಲ. ನಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಡುವುದು ಹಾಗು ಮೂಲಭೂತ ಕರ್ತವ್ಯಗಳನ್ನು ಪೂರೈಸುವುದು ಸಹ ಪ್ರಜಾಪ್ರಭುತ್ವದ ಭಾಗವೇ ಆಗಿದೆ. ಸ್ವಾತಂತ್ರ್ಯ ಉದ್ಯಾನವನ ಹಿಂದೆ ಜೈಲ್ ಆಗಿತ್ತು, ಇಂದು ನಮ್ಮ ಪ್ರತಿಭಟನೆಗಳನ್ನು ಅಲ್ಲಿ ಬಂಧಿಸಲಾಗಿದೆ ಎಂದು ಸಹ ಹೇಳಿದರು. ಹಾಗೆಯೇ ಇಂದು, ದಶಕಗಳಿಂದ ಹೋರಾಟ ಮಾಡಿಕೊಂಡು ಬಂದ ನಾನಾಗಲಿ ನನ್ನ ಸಂಘಟನೆಯಾಗಲಿ, ಎಲ್ಲಿ ಪ್ರತಿಭಟಿಸಬೇಕೆಂದು ತೀರ್ಮಾನಿಸಲು ಆಗುತ್ತಿಲ್ಲ , ಅದನ್ನು ಪೊಲೀಸರೇ ತೀರ್ಮಾನಿಸ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಡಾ. ಮೋಹನ್ ರಾಜ್ ಅವರು ಮಾತನಾಡುತ್ತಾ “ಈ ಹಿಂದೆ ಮುಖ್ಯ ಮಂತ್ರಿಗಳೇ ಫ್ರೀಡಮ್ ಪಾರ್ಕಿನಲ್ಲಿ ಪ್ರತಿಭಟನೆಯ ನಿರ್ಬಂಧವನ್ನು ತೆಗೆಯೆಲಾಗುವುದು ಎಂದು ಘೋಷಿಸಿದ್ದರು. ಸಾರ್ವಜನಿಕ ಸಭೆಯೊಂದರಲ್ಲಿ, ಸ್ವತಃ ಮುಖ್ಯಮಂತ್ರಿಗಳೇ ಈ ವಿಷಯವಾಗಿ ಅಡ್ವೊಕೇಟ್ ಜನರಲ್, ಅವರ ಜೊತೆ ಮಾತನಾಡುತ್ತಾರೆ ಎಂದು ಮರಳುಸಿದ್ದಪ್ಪ ಅವರಿಗೆ ಹೇಳಿದ್ದರು. ಈ ಮಾತು ಹೇಳಿ ಈಗ ಒಂದು ವರ್ಷವಾಗಿದೆ” ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಒಕ್ಕೂಟದ ಸಂಚಾಲಕರಾದ ಕೆ.ವಿ.ಭಟ್, ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಮಲ್ಲಮ್ಮ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.