ಬೆಂಗಳೂರು, ಫೆ.04 www.bengaluruwire.com : ನಗರದ ಆಪ್ ಆಧಾರಿದ ಟ್ಯಾಕ್ಸಿ ಆಗ್ರಿಗೇಟರ್ ಗಳ ಹಗಲು ದರೋಡೆಗೆ ಲಂಗು ಲಗಾಮು ಇಲ್ಲದಂತಾಗಿತ್ತು. ಮನಸ್ಸಿಗೆ ಬಂದಂತೆ ದರ ಏರಿಕೆ ಮಾಡಿ ಜನರಿಂದ ನಿರಂತರ ಸುಲಿಗೆ ಮಾಡುತ್ತಿದ್ದ ಕಾರ್ಯಕ್ಕೆ ಇತಿಶ್ರೀ ಹಾಡಲು ಸಾರಿಗೆ ಇಲಾಖೆ (Transport Department) ಹೊಸದೊಂದು ಅಸ್ತ್ರ ಪ್ರಯೋಗಕ್ಕೆ ಕೈಹಾಕಿದೆ.
ದಟ್ಟಣೆ ಅವಧಿಯಲ್ಲಿ ಒಂದಕ್ಕೆ ಎರಡರಷ್ಟು ಬಾಡಿಗೆ, ಮಳೆ ಬಂದರೆ ಬೇಕಾಬಿಟ್ಟಿ ದರ ಏರಿಕೆ, ಈಗಿದ್ದ ದರವು ಮರು ಕ್ಷಣದಲ್ಲಿ ದುಪ್ಪಟಾಗುತ್ತಿತ್ತು. ಬೆಂಗಳೂರಿನ ಓಲಾ-ಊಬರ್, ರ್ಯಾಪಿಡೋ ಸೇರಿದಂತೆ ಹಲವು ಟ್ಯಾಕ್ಸಿ ಆಪ್ ಗಳಲ್ಲಿ ಈ ರೀತಿ ಅನ್ಯಾಯ ಸರ್ವೇ ಸಾಮಾನ್ಯವಾಗಿತ್ತು.
ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ಟ್ಯಾಕ್ಸಿ ಪ್ರಯಾಣ ಮತ್ತು ಸಾಗಾಣಿಕೆ ದರಗಳನ್ನು ಪರಿಷ್ಕರಣೆ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ವಾಹನ ಮೌಲ್ಯದ ಆಧಾರದ ಮೇಲೆ ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ ಒಂದೇ ಮಾದರಿಯ ದರ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಆದೇಶ ತಕ್ಷಣದಲ್ಲೇ ಅನ್ವಯವಾಗುವಂತೆ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ಆದೇಶ ಹೊರಡಿಸಿದ್ದಾರೆ.
ದರ ಪರಿಷ್ಕರಿಸಿ ಸಾರಿಗೆ ಇಲಾಖೆ ಆದೇಶ :

10 ಲಕ್ಷ ಕ್ಕಿಂತ ಕಡಿಮೆ ಇರುವ ವಾಹನಗಳಿಗೆ ಕನಿಷ್ಠ ದರ 100ರೂ, ಪ್ರತಿ ಕಿ.ಮೀಟರ್ ಗೆ 24 ರೂ. 10 ಲಕ್ಷದಿಂದ 15 ಲಕ್ಷದವರಿಗೆ ಕನಿಷ್ಠ ದರ 115 ರೂ ಪ್ರತಿ ಕಿ.ಮೀಟರ್ ಗೆ 28 ರೂ ನಿಗದಿ ಮಾಡಲಾಗಿದೆ. 15 ಲಕ್ಷ ಮೇಲ್ಪಟ್ಟ ವಾಹನಗಳಿಗೆ ಕನಿಷ್ಠ ದರ 130, ಪ್ರತಿ ಕಿ.ಮೀಟರ್ ಗೆ 32 ರೂ ನಿಗದಿ ಮಾಡಲಾಗಿದೆ. ಲಗೇಜ್ ದರ ಮೊದಲಿನ 120 ಕೆಜಿ ವರೆಗೆ ಉಚಿತ ನಂತರ 30 ಗ್ರಾಂಗೆ 7 ರೂ ನಿಗದಿ ಮಾಡಲಾಗಿದೆ.

ಕಾಯುವಿಕೆ ದರ ಮೊದಲು 5 ನಿಮಿಷ ಉಚಿತ. ನಂತರ ಪ್ರತಿ ನಿಮಿಷಕ್ಕೆ 1 ರೂ. ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಂಚಾರ ಮಾಡುವ ಟ್ಯಾಕ್ಸಿ ಗಳ ಮೇಲೆ 10 ರಷ್ಟು ಹೆಚ್ಚುವರಿ ಜಿಎಸ್ಟಿ ಟೋಲ್ ಶುಲ್ಕವನ್ನ ಪ್ರಯಾಣಿಕರಿಂದ ವಸೂಲಿ ಮಾಡಬಹುದು. ಇನ್ನು ಮುಂದೆ ಸಮಯದ ಆಧಾರದ ಮೇಲೆ ಪ್ರಯಾಣಿಕರಿಂದ ವಸೂಲಿ ಮಾಡುವಂತಿಲ್ಲ. ಸರ್ಕಾರ ನಿಗದಿಪಡಿಸಿರೋ ದರಗಳನ್ನು ಮಾತ್ರ ಪಡೆಯಬೇಕು. ಇಲ್ಲವಾದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
2021ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರ ವಾಹನಗಳ ಮೌಲ್ಯ ಆಧರಿಸಿ ದರ ನಿಗದಿ ಮಾಡಿತ್ತು. ಸಿಟಿ ಟ್ಯಾಕ್ಸಿ ಸೇವೆಯನ್ನು ಎ, ಬಿ, ಸಿ, ಡಿ ಎಂದು ವರ್ಗೀಕರಿಸಿ 2021ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ನಿಗದಿ ಮಾಡಿತ್ತು. ಆದರೂ ಟ್ಯಾಕ್ಸಿ ಸಂಸ್ಥೆಗಳು ಪ್ರಾಧಿಕಾರ ನಿಗದಿಪಡಿಸಿರುವ ದರಕ್ಕಿಂತ 3-4 ಪಟ್ಟು ಹೆಚ್ಚು ಹಣ ವಸೂಲಿ ಮಾಡುತ್ತಿದ್ದವು. ಸಿಟಿ ಟ್ಯಾಕ್ಸಿ ಸೇವೆಯಲ್ಲಿ ನಡೆಯುತ್ತಿರುವ ಹಗಲು ದರೋಡೆ ಸಂಬಂಧ ಜನರಿಂದ ವ್ಯಾಪಕ ದೂರುಗಳು ಬಂದಿತ್ತು. ಹೀಗಾಗಿ ಅಗ್ರಿಗೇಟರ್ ಕಂಪನಿ ಹಾಗೂ ಇತರೆ ಟ್ಯಾಕ್ಸಿ ಚಾಲಕರ ಸುಲಿಗೆಗೆ ಬ್ರೇಕ್ ಹಾಕಲು ಏಕರೂಪದ ದರ ನಿಗದಿಪಡಿಸಿ ಸಾರಿಗೆ ಇಲಾಖೆ ಈ ಆದೇಶ ಹೊರಡಿಸಿದೆ.