ಬೆಂಗಳೂರು, ಆ.19 www.bengaluruwire.com: ನಗರದಲ್ಲಿ ಸಂಚಾರ ದಟ್ಟಣೆ, ಮಾಲಿನ್ಯ ಹಾಗೂ ರಸ್ತೆ ಅಪಘಾತ ಅಪಾಯಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಪೆಟ್ರೋಲಿಯಂ ಟ್ಯಾಂಕರ್ಗಳ ಸಂಚಾರ ಮಾರ್ಗವನ್ನು ವೈಜ್ಞಾನಿಕವಾಗಿ ನಿಗಧಿಪಡಿಸಲು ನಮ್ಮ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ (NIPDA) ನಗರ ಸಂಚಾರ ವಿಭಾಗದ ಪೊಲೀಸರಿಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದೆ.
ಬೆಂಗಳೂರು ಹೊರವಲಯದ ಜಿಲ್ಲೆಗಳಿಗೆ ತೆರಳುವ ಪೆಟ್ರೋಲಿಯಂ ಟ್ಯಾಂಕರ್ಗಳನ್ನು ನಗರದ ಒಳಗೆ ಪ್ರವೇಶಿಸಲು ಬಿಡದೆ, ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR), ನೈಸ್ ರಸ್ತೆ ಹಾಗೂ ಹೊಸೂರು ರಸ್ತೆಯಂತಹ ಹೊರವಲಯದ ಕಾರಿಡಾರ್ಗಳ ಮೂಲಕ ತಿರುಗಿಸುವುದರಿಂದ ನಗರದ ಟ್ರಾಫಿಕ್ಗೆ ಗಣನೀಯ ಮುಕ್ತಿ ಸಿಗಲಿದೆ ಎಂದು ಸಂಘಟನೆ ಪ್ರತಿಪಾದಿಸಿದೆ.
ನಗರದ ರಸ್ತೆಗಳಲ್ಲಿ ಭಾರೀ ವಾಹನಗಳ ದಟ್ಟಣೆ:
ಪ್ರತಿದಿನ IOCL ದೇವನಗೊಂಡಿ ಸೇರಿದಂತೆ ವಿವಿಧ ತೈಲ ಟರ್ಮಿನಲ್ಗಳಿಂದ ತುಮಕೂರು, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ ಮೊದಲಾದ ಜಿಲ್ಲೆಗಳಿಗೆ ನೂರಾರು ಟ್ಯಾಂಕರ್ಗಳು ಸಂಚರಿಸುತ್ತವೆ. ಹೊರ ಜಿಲ್ಲೆಗಳಿಗೆ ತೆರಳುವ 400 ರಿಂದ 600 ಟ್ಯಾಂಕರ್ಗಳು ಅನಿವಾರ್ಯವಾಗಿ ಕೆ.ಆರ್. ಪುರಂ, ಟಿನ್ ಫ್ಯಾಕ್ಟರಿ, ಹೆಬ್ಬಾಳ, ಯಶವಂತಪುರ ಹಾಗೂ ಮೈಸೂರು ರಸ್ತೆಗಳಂತಹ ದಟ್ಟಣೆಯ ನಗರ ಮಾರ್ಗಗಳನ್ನು ಹಾದುಹೋಗುತ್ತಿವೆ. ಇದರಿಂದ ಪೀಕ್ ಅವರ್ಗಳಲ್ಲಿ ಸಂಚಾರ ದಟ್ಟಣೆ ಉಲ್ಬಣಗೊಳ್ಳುತ್ತಿದ್ದು, ಅಪಘಾತದ ಅಪಾಯವೂ ಹೆಚ್ಚುತ್ತಿದೆ.

ಪ್ರಮುಖ ಪ್ರಯೋಜನಗಳು ಮತ್ತು ಅಂದಾಜು ಲೆಕ್ಕಾಚಾರ:
STRR ಮತ್ತು NICE ರಸ್ತೆಗಳ ಮೂಲಕ ಪರ್ಯಾಯ ಮಾರ್ಗ ರೂಪಿಸುವುದರಿಂದ ಹಲವು ಮಹತ್ವದ ಪ್ರಯೋಜನಗಳು ಲಭ್ಯವಾಗಲಿವೆ:
ಟ್ರಾಫಿಕ್ ದಟ್ಟಣೆ ಇಳಿಕೆ: ಪ್ರಮುಖ ನಗರ ಮಾರ್ಗಗಳಲ್ಲಿ ಭಾರೀ ವಾಹನಗಳ ಸಂಚಾರ ಶೇ. 8 ರಿಂದ 12 ರಷ್ಟು ಇಳಿಕೆಯಾಗಲಿದ್ದು, ಪೀಕ್ ಅವರ್ ಪ್ರಯಾಣದ ಸಮಯ ಶೇ. 5 ರಿಂದ 10 ರಷ್ಟು ಉಳಿತಾಯವಾಗಲಿದೆ.
ಇಂಧನ ಉಳಿತಾಯ: ಟ್ಯಾಂಕರ್ಗಳ ಐಡ್ಲಿಂಗ್ ಸಮಯ ಕಡಿಮೆಯಾಗುವುದರಿಂದ ಪ್ರತಿದಿನ 2,500 ರಿಂದ 5,000 ಲೀಟರ್ ಡೀಸೆಲ್ ಉಳಿತಾಯವಾಗಲಿದೆ (ವಾರ್ಷಿಕ 9 ರಿಂದ 18 ಲಕ್ಷ ಲೀಟರ್).
ಪರಿಸರ ರಕ್ಷಣೆ: ವಾರ್ಷಿಕವಾಗಿ 2,500 ರಿಂದ 5,000 ಟನ್ ಇಂಗಾಲದ ಡೈಆಕ್ಸೈಡ್ (CO₂) ಉತ್ಸರ್ಜನೆ ತಗ್ಗಲಿದ್ದು, ವಾಯು ಗುಣಮಟ್ಟ ಸುಧಾರಿಸಲಿದೆ.
ಸ್ಥಳೀಯ ಪೂರೈಕೆಗೆ ಧಕ್ಕೆ ಇಲ್ಲ: ನಗರದ ವ್ಯಾಪ್ತಿಯಲ್ಲಿರುವ ಪೆಟ್ರೋಲ್ ಬಂಕ್ಗಳಿಗೆ ಇಂಧನ ಸರಬರಾಜು ಮಾಡುವ ವಾಹನಗಳ ಮುಕ್ತ ಸಂಚಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ.
ಜಂಟಿ ಕಾರ್ಯಪಡೆ ರಚನೆಗೆ ಆಗ್ರಹ:
ವೈಜ್ಞಾನಿಕವಾಗಿ ಮಾರ್ಗ ಬದಲಾವಣೆ ಜಾರಿಗೊಳಿಸಲು ಬೆಂಗಳೂರು ಸಂಚಾರ ಪೊಲೀಸ್, NHAI, ತೈಲ ಕಂಪನಿಗಳು (IOCL, BPCL, HPCL) ಹಾಗೂ ಸಾರಿಗೆ ಇಲಾಖೆಯನ್ನೊಳಗೊಂಡ ಜಂಟಿ ಕಾರ್ಯಪಡೆ (Joint Task Force) ರಚಿಸಿ, GPS ಮತ್ತು GIS ಆಧಾರಿತ ಅಧ್ಯಯನ ನಡೆಸಿ ಪ್ರಾಯೋಗಿಕ ಯೋಜನೆ ಜಾರಿಗೊಳಿಸುವಂತೆ ಎನ್ ಐಪಿಡಿಎ ಮನವಿ ಮಾಡಿದೆ.


















