ಬೆಂಗಳೂರು, ಆ.18 www.bengaluruwire.com: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೊಠಡಿಯಲ್ಲಿ ಮೊಬೈಲ್ ಫೋನ್ ಮತ್ತು ಪೆನ್ಡ್ರೈವ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಜೈಲು ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಅವರು ವಿಧಾನಸಭೆಯ ನಿಯಮ 59 (ಎ) ರ ಮೇರೆಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗೆ ಗೃಹ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.
ಸಿಸಿಬಿ ದಾಳಿ ವೇಳೆ ನಿಷೇಧಿತ ವಸ್ತುಗಳು ವಶಕ್ಕೆ:
ಆ.11 ರಂದು ಬೆಂಗಳೂರು ಕೇಂದ್ರ ಕಾರಾಗೃಹದ ಮೇಲೆ ನಗರ ಅಪರಾಧ ವಿಭಾಗದ (CCB) ಪೊಲೀಸರು ಅನಿರೀಕ್ಷಿತ ದಾಳಿ ನಡೆಸಿ ತಪಾಸಣೆ ನಡೆಸಿದ್ದರು. ಈ ವೇಳೆ ಗರಿಷ್ಠ ಭದ್ರತಾ ವಿಭಾಗ-3ರ ಹಿಂಭಾಗದ ಕೊಠಡಿ ಸಂಖ್ಯೆ 4ರಲ್ಲಿ ಇದ್ದ ಶಿಕ್ಷಾ ಬಂದಿ ಸಂಖ್ಯೆ 1528, ಪ್ರಜ್ವಲ್ ರೇವಣ್ಣ ಬಳಿ:

1 ರೆಡ್ಮಿ ಸ್ಮಾರ್ಟ್ಫೋನ್ (ಸಿಮ್ ಕಾರ್ಡ್ ಸಹಿತ),
1 ಮೊಬೈಲ್ ಚಾರ್ಜರ್, 1 ಡೈರಿ, 1 ಕಪ್ಪು ಬಣ್ಣದ ಸ್ಯಾನ್ಡಿಸ್ಕ್ ಪೆನ್ಡ್ರೈವ್ ಇವುಗಳು ಪತ್ತೆಯಾಗಿದ್ದು, ಅಧಿಕಾರಿಗಳು ಇವುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 319/2026 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜೈಲಿನಲ್ಲಿ ವಿವಿಐಪಿ ಸಂಸ್ಕೃತಿ ಇಲ್ಲ: ಸರ್ಕಾರದ ಸ್ಪಷ್ಟನೆ:
ಕಾರಾಗೃಹದಲ್ಲಿ ಯಾವುದೇ ಬಂದಿಗಳಿಗೆ ವಿವಿಐಪಿ ಟ್ರೀಟ್ಮೆಂಟ್ ನೀಡುತ್ತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಜೈಲಿನಲ್ಲಿರುವ ಎಲ್ಲ ವಿಚಾರಣಾ ಮತ್ತು ಸಜಾ ಬಂದಿಗಳನ್ನು ಅಕ್ಷರಮಾಲೆ (Alphabetic) ಮಾದರಿಯಲ್ಲಿ ಕೊಠಡಿಗಳಿಗೆ ಹಂಚಿಕೆ ಮಾಡಲಾಗುತ್ತದೆಯೇ ಹೊರತು, ವಿಐಪಿ ಅಥವಾ ಸಾಮಾನ್ಯ ಬಂದಿಗಳು ಎಂದು ಪ್ರತ್ಯೇಕಿಸುವ ಪದ್ಧತಿ ಇಲ್ಲ. ಎಲ್ಲರಿಗೂ ಕರ್ನಾಟಕ ಕಾರಾಗೃಹ ನಿಯಮಾವಳಿಗಳಂತೆಯೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಮೂವರು ಅಧಿಕಾರಿಗಳ ಸಸ್ಪೆಂಡ್, ಐಪಿಎಸ್ ಅಧಿಕಾರಿಯಿಂದ ತನಿಖೆ:
ಜೈಲಿನೊಳಗೆ ನಿಷೇಧಿತ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಡಿ:
ಈರಣ್ಣ ರಂಗಾಪುರ (ಸಹಾಯಕ ಅಧೀಕ್ಷಕರು), ರಾಜೇಶ್ ಧರ್ಮಟ್ಟಿ (ಜೈಲರ್), ಮಹೇಶ್ ಸಜ್ಜನ (ವೀಕ್ಷಕರು) ಇವರನ್ನು ಕರ್ತವ್ಯದಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಲ್ಲದೆ, ಇಡೀ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಪೊಲೀಸ್ ಉಪಮಹಾನಿರೀಕ್ಷಕರಾದ (DIG) ಜಿನೇಂದ್ರ ಖನಗಾವಿ (IPS) ಅವರಿಗೆ ಸೂಚಿಸಲಾಗಿದ್ದು, ವಿಚಾರಣಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದುಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದ್ದಾರೆ.

















