ನವದೆಹಲಿ, ಮಾ.14 www.bengaluruwire.com: ಪಶ್ಚಿಮ ಏಷ್ಯಾದಲ್ಲಿ (West Asia) ಯುದ್ಧದ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಸಿಲುಕಿರುವ ವಿದೇಶಿ ಪ್ರಜೆಗಳಿಗೆ ಕೇಂದ್ರ ಸರ್ಕಾರವು ಮಹತ್ವದ ರಿಯಾಯಿತಿ ಘೋಷಿಸಿದೆ.
ಇರಾನ್ ಮತ್ತು ಇಸ್ರೇಲ್/ಅಮೆರಿಕ ನಡುವಿನ ಸಂಘರ್ಷದಿಂದಾಗಿ ವಿಮಾನಯಾನ ವ್ಯತ್ಯಯಗೊಂಡಿರುವ ಕಾರಣ, ವಿದೇಶಿಯರಿಗೆ 30 ದಿನಗಳ ವೀಸಾ ವಿಸ್ತರಣೆ ನೀಡಲಾಗಿದೆ. ವಿಶೇಷವೆಂದರೆ, ವೀಸಾ ಅವಧಿ ಮುಗಿದಿದ್ದರೂ ಅವರಿಗೆ ಯಾವುದೇ ‘ಓವರ್ಸ್ಟೇ’ ದಂಡವನ್ನು ವಿಧಿಸಲಾಗುವುದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.
ಖಾರ್ಗ್ ದ್ವೀಪದ ಮೇಲೆ ಅಮೆರಿಕದ ದಾಳಿ:
ಇಂದು (ಮಾರ್ಚ್ 14) ಅಮೆರಿಕದ ಪಡೆಗಳು ಇರಾನ್ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿವೆ. ಇರಾನ್ನ ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯಲ್ಲಿ ನೌಕಾ ನೆಲೆ, ವಾಯು ರಕ್ಷಣಾ ವ್ಯವಸ್ಥೆ ಮತ್ತು ಹೆಲಿಕಾಪ್ಟರ್ ಹ್ಯಾಂಗರ್ಗಳು ಧ್ವಂಸಗೊಂಡಿವೆ ಎಂದು ವರದಿಯಾಗಿದೆ. ದ್ವೀಪದಾದ್ಯಂತ 15ಕ್ಕೂ ಹೆಚ್ಚು ಸ್ಫೋಟಗಳು ಸಂಭವಿಸಿದ್ದು, ಎಲ್ಲೆಡೆ ದಟ್ಟವಾದ ಹೊಗೆ ಆವರಿಸಿದೆ. (Sattalite Image Credit : NASA)

ತೈಲ ಮೂಲಸೌಕರ್ಯ ಸುರಕ್ಷಿತ:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೂಚನೆಯಂತೆ ನಡೆದ ಈ ದಾಳಿಯಲ್ಲಿ ತೈಲ ಸಂಸ್ಕರಣಾ ಘಟಕಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಇರಾನ್ನ ಫಾರ್ಸ್ ಸುದ್ದಿ ಸಂಸ್ಥೆ ದೃಢಪಡಿಸಿದೆ. ಆದಾಗ್ಯೂ, ತನ್ನ ಇಂಧನ ಕೇಂದ್ರಗಳ ಮೇಲೆ ದಾಳಿಯಾದರೆ ಪ್ರಾದೇಶಿಕವಾಗಿ ಅಮೆರಿಕದ ಮಿತ್ರರಾಷ್ಟ್ರಗಳ ತೈಲ ಮತ್ತು ಅನಿಲ ಮೂಲಸೌಕರ್ಯಗಳ ಮೇಲೆ ಪ್ರತಿದಾಳಿ ನಡೆಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.
ಭಾರತದ ನಿರ್ಧಾರ ಏಕೆ?:
ಯುದ್ಧ ಪೀಡಿತ ಪ್ರದೇಶಗಳಿಗೆ ವಿಮಾನ ಸಂಚಾರ ಸ್ಥಗಿತಗೊಂಡಿರುವುದರಿಂದ ಅಥವಾ ವಿಳಂಬವಾಗುತ್ತಿರುವುದರಿಂದ ಪ್ರವಾಸಿಗರು ಮತ್ತು ಉದ್ಯೋಗದ ನಿಮಿತ್ತ ಭಾರತದಲ್ಲಿರುವ ವಿದೇಶಿಗರು ತವರಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಈ ಮಾನವೀಯ ನೆಲಗಟ್ಟಿನಲ್ಲಿ ಭಾರತ ಸರ್ಕಾರವು ವೀಸಾ ನಿಯಮಗಳನ್ನು ಸಡಿಲಗೊಳಿಸಿದೆ.




















