ಬೆಂಗಳೂರು, ಮಾ.14 www.bengaluruwire.com: ನಗರದ ಹಸಿತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮತ್ತು ಅದರಿಂದ ಇಂಧನ ಉತ್ಪಾದಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ (BSWML) ವಿಶೇಷ ಒತ್ತು ನೀಡುತ್ತಿದೆ.
ಈ ನಿಟ್ಟಿನಲ್ಲಿ ಕೋರಮಂಗಲದ ‘ಕಸ-ರಸ’ ಆವರಣದಲ್ಲಿರುವ ಜೈವಿಕ ಅನಿಲ (Bio Gas) ಘಟಕಕ್ಕೆ ಶನಿವಾರ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಹಾಗೂ ಬಿಎಸ್ ಡಬ್ಲ್ಯುಎಂಎಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಕರೀಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಸಿತ್ಯಾಜ್ಯದಿಂದ ಆದಾಯದ ಹಾದಿ:
ಪ್ರಸ್ತುತ ನಗರದ ವಿವಿಧೆಡೆ ಇರುವ 12 ಬಯೋಗ್ಯಾಸ್ ಘಟಕಗಳ ಪೈಕಿ 6 ಘಟಕಗಳು ಸಕ್ರಿಯವಾಗಿದ್ದು, ಪ್ರತಿದಿನ 30 ಟನ್ ಹಸಿತ್ಯಾಜ್ಯದಿಂದ ಅನಿಲ ಉತ್ಪಾದಿಸಲಾಗುತ್ತಿದೆ. ವಿಶೇಷವಾಗಿ ವಾರ್ಡ್ ಸಂಖ್ಯೆ 151ರಲ್ಲಿರುವ 8.5 ಟನ್ ಸಾಮರ್ಥ್ಯದ ಘಟಕದಿಂದ ಹತ್ತಿರದ ಹೋಟೆಲ್ಗಳಿಗೆ ನೇರವಾಗಿ ಗ್ಯಾಸ್ ಪೂರೈಸಲಾಗುತ್ತಿದೆ. ಇದರಿಂದ ಪ್ರತಿದಿನ ಸುಮಾರು 8,400 ರೂ. ಆದಾಯ ಬರುತ್ತಿರುವುದು ಪರಿಸರ ರಕ್ಷಣೆಯೊಂದಿಗೆ ಆರ್ಥಿಕ ಲಾಭಕ್ಕೂ ದಾರಿಯಾಗಿದೆ. ಉಳಿದ 6 ಘಟಕಗಳ ನವೀಕರಣ ಕಾರ್ಯ ನಡೆಯುತ್ತಿದೆ.

ಉಳಿದಂತೆ ಹೊಸದಾಗಿ ನಾಲ್ಕು ವಿಕೇಂದ್ರಿಕೃತ ಹಸಿತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸುವ ಘಟಕಗಳ ಪೈಕಿ ಎರಡು ಘಟಕಗಳ (ವಾರ್ಡ್ ನಂ.151 ಹಾಗೂ 27) ಕಾರ್ಯಾರಂಭ ಮಾಡಿವೆ. ಉಳಿದ ಎರಡು ಘಟಕಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಬೃಹತ್ ಯೋಜನೆಗಳ ಜಾರಿ:
ಗೇಲ್ ಗ್ಯಾಸ್ ಸಹಯೋಗ: ಪ್ರತಿದಿನ 300 ಟನ್ ಸಾಮರ್ಥ್ಯದ ಹೊಸ ಘಟಕ ನಿರ್ಮಾಣಕ್ಕೆ ಚಾಲನೆ.
ಕನ್ನಹಳ್ಳಿ ಘಟಕ: ದಿನಕ್ಕೆ 1000 ಟನ್ ಹಸಿತ್ಯಾಜ್ಯ ಸಂಸ್ಕರಿಸಿ ಬಯೋಗ್ಯಾಸ್ ಉತ್ಪಾದಿಸಲು ಒಪ್ಪಿಗೆ.
ಮನೆ ಮನೆಗೆ ಪೈಪ್ಲೈನ್: ಹೇರೋಹಳ್ಳಿ ಘಟಕದ ಮೂಲಕ ಉತ್ಪತ್ತಿಯಾಗುವ ಸಂಕುಚಿತಗೊಳಿಸಿದ ಜೈವಿಕ ಅನಿಲವನ್ನು (CBG) ಪೈಪ್ಲೈನ್ ಮೂಲಕ ಮನೆಗಳಿಗೆ ತಲುಪಿಸುವ ಯೋಜನೆ ಪ್ರಗತಿಯಲ್ಲಿದೆ.
ಸಾರ್ವಜನಿಕರಿಗೆ ಕರೆ:
“ಹಸಿತ್ಯಾಜ್ಯದಿಂದ ಕೇವಲ ಅನಿಲ ಮಾತ್ರವಲ್ಲದೆ, ಅದರಿಂದ ಹೊರಬರುವ ಸ್ಲಡ್ಜ್ ಅನ್ನು ರೈತರು ದ್ರವ ಗೊಬ್ಬರವಾಗಿ ಬಳಸಬಹುದು. ಕೇವಲ 20,000 ರೂ. ವೆಚ್ಚದಲ್ಲಿ ಮನೆಗಳ ಹಂತದಲ್ಲೂ ಇಂತಹ ಘಟಕ ಸ್ಥಾಪಿಸಿ ಅಡುಗೆ ಇಂಧನ ಪಡೆಯಬಹುದು,” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಹಾಗೂ ಹೋಟೆಲ್ ಮಾಲೀಕರು ತಮ್ಮ ಆವರಣದಲ್ಲೇ ವಿಕೇಂದ್ರೀಕೃತ ಬಯೋಗ್ಯಾಸ್ ಘಟಕಗಳನ್ನು ನಿರ್ಮಿಸಿಕೊಳ್ಳುವಂತೆ ಬಿಎಸ್ಡಬ್ಲ್ಯೂಎಂಎಲ್ ಮನವಿ ಮಾಡಿದೆ.




















