ಬೆಂಗಳೂರು, ಮಾ.12 www.bengaluruwire.com: ನಗರದಲ್ಲಿ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಉದ್ದಿಮೆಗಳ ವಿರುದ್ಧ ಬೆಂಗಳೂರು ದಕ್ಷಿಣ ನಗರ ಪಾಲಿಕೆ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ಗೊಟ್ಟಿಗೆರೆ ವಾರ್ಡ್ನ ಪಿಲ್ಲಗಾನಹಳ್ಳಿ ಮುಖ್ಯರಸ್ತೆಯಲ್ಲಿ ನಿಯಮ ಉಲ್ಲಂಘಿಸಿ ನಡೆಯುತ್ತಿದ್ದ 7 ಪ್ರಮುಖ ಉದ್ದಿಮೆಗಳಿಗೆ ಬುಧವಾರ ಪಾಲಿಕೆ ಅಧಿಕಾರಿಗಳು ಬೀಗ ಮುದ್ರೆ ಹಾಕಿದ್ದಾರೆ.
ನೋಟಿಸ್ ನೀಡಿದರೂ ಕ್ಯಾರೆ ಎನ್ನದ ಮಾಲೀಕರು:
ಪಾಲಿಕೆಯ ಅಧಿಕಾರಿಗಳ ತಂಡವು ಪಿಲ್ಲಗಾನಹಳ್ಳಿ ರಸ್ತೆಯಲ್ಲಿ ಸಮೀಕ್ಷೆ ನಡೆಸಿದಾಗ, ಹಲವು ಉದ್ದಿಮೆಗಳು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 145 ಉದ್ದಿಮೆಗಳಿಗೆ ಈ ಹಿಂದೆಯೇ ಸೂಚನಾ ಪತ್ರ (ನೋಟಿಸ್) ನೀಡಲಾಗಿತ್ತು. “ಸ್ವಯಂಪ್ರೇರಿತರಾಗಿ ಉದ್ದಿಮೆಗಳನ್ನು ಮುಚ್ಚಿ ಅಥವಾ ಪರವಾನಿಗೆ ಪಡೆದುಕೊಳ್ಳಿ” ಎಂದು ಗಡುವು ನೀಡಲಾಗಿತ್ತು. ಆದರೆ, ಈ ಗಡುವನ್ನು ನಿರ್ಲಕ್ಷಿಸಿದ ಉದ್ದಿಮೆಗಳ ವಿರುದ್ಧ ಈಗ ಶಿಸ್ತುಕ್ರಮ ಜರುಗಿಸಲಾಗಿದೆ.

ಬೀಗ ಬಿದ್ದ ಉದ್ದಿಮೆ/ಆಂಗಡಿಗಳ ಪಟ್ಟಿ:
ಪಾಲಿಕೆಯ ಅಧಿಕಾರಿ ಕೆ.ಎನ್. ರಮೇಶ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಈ ಕೆಳಗಿನ 7 ಸಂಸ್ಥೆಗಳನ್ನು ಸೀಲ್ ಮಾಡಲಾಗಿದೆ:
* ಗ್ರಾನೈಟ್ ಫ್ಯಾಕ್ಟರಿ / ಗೋಡೌನ್
* ಎಫ್.ಎಸ್. ಕೇಟರಿಂಗ್
* ಎಸ್.ಕೆ ಮೆಟಲ್ ಫ್ಯಾಬ್ರಿಕೇಟರ್ಸ್
* ಬೈಕ್ ಝೋನ್ ಗ್ಯಾರೇಜ್
* ಝ.ಎಸ್. ಆಟೋಗ್ಲಾಸ್ ಮತ್ತು ಪ್ರೈವುಡ್
* ಆರ್.ಕೆ. ಸ್ಟೀಲ್ ಟ್ರೇಡರ್ಸ್ ಫ್ಯಾಬ್ರಿಕೇಟರ್ಸ್
* ಪ್ರಿಯದರ್ಶಿನಿ ಎಂಟರ್ಪ್ರೈಸಸ್
“ಅನಧಿಕೃತ ಉದ್ದಿಮೆಗಳ ವಿರುದ್ಧದ ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ. ನಿಯಮ ಪಾಲಿಸದ ಉದ್ದಿಮೆದಾರರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ” ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.




















