ಬೆಂಗಳೂರು, ಮಾ.11 www.bengaluruwire.com: ನಾಡಪ್ರಭು ಕೆಂಪೇಗೌಡ ಬಡಾವಣೆಯ ಹಂಚಿಕೆದಾರರಿಗೆ ಕರ್ನಾಟಕ ರಿಯಲ್ ಎಸ್ಟೇಟ್ ಅಪೀಲೇಟ್ ಟ್ರಿಬ್ಯೂನಲ್ ದೊಡ್ಡ ಮಟ್ಟದ ಸಮಾಧಾನ ತಂದಿದೆ.
“ಬಿಡಿಎ ಕೂಡ ಒಂದು ಪ್ರವರ್ತಕ (Promoter) ಸಂಸ್ಥೆಯಾಗಿದ್ದು, ಅದು ರೆರಾ ಕಾಯ್ದೆಯ ವ್ಯಾಪ್ತಿಯಿಂದ ಹೊರತಾಗಿಲ್ಲ” ಎಂದು ಟ್ರಿಬ್ಯೂನಲ್ ಸ್ಪಷ್ಟಪಡಿಸಿದೆ. ಇದರಿಂದಾಗಿ ಬಡಾವಣೆಯ ವಿಳಂಬ ಮತ್ತು ಇತರ ಸೌಲಭ್ಯಗಳ ವಿಚಾರದಲ್ಲಿ ಬಿಡಿಎ ಇನ್ನು ಮುಂದೆ ರೆರಾ ನಿಯಮಗಳಿಗೆ ಉತ್ತರದಾಯಿಯಾಗಬೇಕಿದೆ.
ಏನಿದು ಪ್ರಕರಣ?:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ನಾಡಪ್ರಭು ಕೆಂಪೇಗೌಡ ಬಡಾವಣೆಯ ವಿಚಾರದಲ್ಲಿ ತಾನು ರೆರಾ (RERA) ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿತ್ತು. ಈ ಸಂಬಂಧ ರೆರಾ ಪ್ರಾಧಿಕಾರ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಬಿಡಿಎ ಮೇಲ್ಮನವಿ ಸಲ್ಲಿಸಿತ್ತು. ಬಡಾವಣೆ ಅಭಿವೃದ್ಧಿಯು ಒಂದು ಶಾಸನಬದ್ಧ ಕಾರ್ಯವಾಗಿದ್ದು, ಇದನ್ನು ರಿಯಲ್ ಎಸ್ಟೇಟ್ ಯೋಜನೆ ಎಂದು ಪರಿಗಣಿಸಬಾರದು ಎಂಬುದು ಬಿಡಿಎ ವಾದವಾಗಿತ್ತು.

ಟ್ರಿಬ್ಯೂನಲ್ ನೀಡಿದ ತೀರ್ಪು:
ಮಾರ್ಚ್ 3 ರಂದು ನ್ಯಾಯಾಂಗ ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ ಎನ್ ಹಾಗೂ ಆಡಳಿತಾತ್ಮಕ ಸದಸ್ಯರಾದ ಮಹೇಂದ್ರ ಜೈನ್ ಅವರಿದ್ದ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ. ಬಿಡಿಎ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ಟ್ರಿಬ್ಯೂನಲ್, ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ:
– ರೆರಾ ವ್ಯಾಪ್ತಿ: ರೆರಾ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಬಿಡಿಎ ತನ್ನ ಯೋಜನೆಗಳನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
– ಸೆಕ್ಷನ್ 18 ಮತ್ತು 19 ರ ಅಡಿಯಲ್ಲಿ ಹಂಚಿಕೆದಾರರಿಗೆ ಇರುವ ಎಲ್ಲಾ ಹಕ್ಕುಗಳು ಈ ಬಡಾವಣೆಗೂ ಅನ್ವಯಿಸುತ್ತವೆ.
– ಖಾಸಗಿ ಬಿಲ್ಡರ್ಗಳಂತೆ ಬಿಡಿಎ ಕೂಡ ಗ್ರಾಹಕರಿಗೆ ಅಥವಾ ಹಂಚಿಕೆದಾರರಿಗೆ ಸಕಾಲದಲ್ಲಿ ಸೌಲಭ್ಯ ನೀಡಲು ಬದ್ಧವಾಗಿದೆ.
ಹಂಚಿಕೆದಾರರಿಗೆ ಜಯ:
ಈ ಆದೇಶದಿಂದಾಗಿ ಬಡಾವಣೆಯಲ್ಲಿ ಮೂಲಸೌಕರ್ಯ ವಿಳಂಬವಾಗುತ್ತಿರುವುದರ ವಿರುದ್ಧ ಹೋರಾಡುತ್ತಿರುವ ನೂರಾರು ಹಂಚಿಕೆದಾರರಿಗೆ ಕಾನೂನು ಬಲ ಸಿಕ್ಕಂತಾಗಿದೆ. ಬಿಡಿಎ ಇನ್ನು ಮುಂದೆ ವಿಳಂಬಕ್ಕೆ ದಂಡ ಅಥವಾ ಪರಿಹಾರ ನೀಡಬೇಕಾದ ಪರಿಸ್ಥಿತಿ ಎದುರಾಗಬಹುದು.




















