ಬೆಂಗಳೂರು, ಮಾ.04 www.bengaluruwire.com: ರಾಜ್ಯದ ಪತ್ರಕರ್ತರ ಹಿತರಕ್ಷಣೆ ಮತ್ತು ವೃತ್ತಿ ಬದುಕಿನ ಭದ್ರತೆಗಾಗಿ ಮುಂಬರುವ ಬಜೆಟ್(2026-27)ನಲ್ಲಿ ‘ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ’ಗೆ 100 ಕೋಟಿ ರೂ. ಅನುದಾನವನ್ನು ಮೀಸಲಿಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಸಂಬಂಧ ಸುದೀರ್ಘ ಮನವಿ ಸಲ್ಲಿಸಿದರು. ಪತ್ರಕರ್ತರ ಕುಟುಂಬಗಳ ಆರೋಗ್ಯ ರಕ್ಷಣೆಗಾಗಿ ಜಾರಿಯಲ್ಲಿರುವ ‘ಮುಖ್ಯಮಂತ್ರಿಗಳ ಮಾಧ್ಯಮ ಆರೋಗ್ಯ ಸಂಜೀವಿನಿ’ ಯೋಜನೆಯನ್ನು ರಾಜ್ಯದ ಎಲ್ಲಾ ಪತ್ರಕರ್ತರಿಗೂ ವಿಸ್ತರಿಸಬೇಕು ಎನ್ನುವುದು ಸಂಘದ ಪ್ರಮುಖ ಬೇಡಿಕೆಯಾಗಿದೆ.
ಮುಖ್ಯಮಂತ್ರಿಗಳಲ್ಲಿ ಪ್ರಮುಖ ಬೇಡಿಕೆಗಳ ಪಟ್ಟಿ:
* ಆರ್ಥಿಕ ನೆರವು: ಜಿಲ್ಲಾ ಪತ್ರಕರ್ತರ ಸಂಘಗಳ ಕ್ಷೇಮಾಭಿವೃದ್ಧಿ ನಿಧಿಗೆ ತಲಾ 25 ಲಕ್ಷ ರೂ. ಹಾಗೂ ತಾಲೂಕು ಪತ್ರಿಕಾ ಭವನಗಳ ಅಭಿವೃದ್ಧಿಗೆ ತಲಾ 10 ಲಕ್ಷ ರೂ. ಒದಗಿಸಬೇಕು.

ಮೃತ ಪತ್ರಕರ್ತರ ಕುಟುಂಬಕ್ಕೆ ಪರಿಹಾರ: ಕೋವಿಡ್ ಅವಧಿಯಲ್ಲಿ ನೀಡಿದ ಮಾದರಿಯಲ್ಲೇ, ಕರ್ತವ್ಯನಿರತ ಪತ್ರಕರ್ತರು ಅಕಾಲಿಕ ಮರಣಕ್ಕೀಡಾದರೆ ಅವರ ಕುಟುಂಬಕ್ಕೆ 5 ಲಕ್ಷ ರೂ.ಗಳ ಆರ್ಥಿಕ ಪರಿಹಾರ ಘೋಷಿಸಬೇಕು.
ವಸತಿ ಸೌಲಭ್ಯ: ವಿವಿಧ ಪ್ರಾಧಿಕಾರಗಳು ಮತ್ತು ವಸತಿ ಮಂಡಳಿಗಳ ವತಿಯಿಂದ ಹಂಚಿಕೆಯಾಗುವ ನಿವೇಶನ ಹಾಗೂ ಮನೆಗಳಲ್ಲಿ ಪತ್ರಕರ್ತರಿಗೆ ಶೇ. 5ರಷ್ಟು ಮೀಸಲಾತಿ ನೀಡಬೇಕು.
ಡಿವಿಜಿ ಶತಮಾನೋತ್ಸವ ಸಂಭ್ರಮ:
ಮಂಕುತಿಮ್ಮನ ಕಗ್ಗದ ಕರ್ತೃ ಡಿ.ವಿ.ಗುಂಡಪ್ಪ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನೆರವಿನೊಂದಿಗೆ ಸ್ಥಾಪಿಸಿದ ಈ ಸಂಘವು ಈಗ ಶತಮಾನೋತ್ಸವದ ಹೊಸ್ತಿಲಲ್ಲಿದೆ. ಈ ಐತಿಹಾಸಿಕ ಸಂದರ್ಭದ ಸವಿನೆನಪಿಗಾಗಿ ಪ್ರತಿ ಜಿಲ್ಲೆಯಲ್ಲೂ ಸರ್ಕಾರದಿಂದ ‘ಡಿವಿಜಿ ಶತಮಾನ ಸಂಭ್ರಮ’ ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಈಗಾಗಲೇ ಕಳೆದ ಎರಡು ಬಜೆಟ್ಗಳಲ್ಲಿ ಪತ್ರಕರ್ತರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಈ ಬಾರಿಯೂ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಶಿವಾನಂದ ತಗಡೂರು ತಿಳಿಸಿದ್ದಾರೆ.






















