ಬೆಂಗಳೂರು, ಮಾ.01 www.bengaluruwire.com : ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆಯಾದ “ವಿಕಾಸ” ತನ್ನ 8 ವರ್ಷಗಳ ಯಶಸ್ವಿ ಪಯಣ ಮುಗಿಸಿ 9ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಅಂಗವಾಗಿ ಭಾನುವಾರ ನಗರದಲ್ಲಿ ಡಿಜಿಟಲ್ ಮೀಡಿಯಾ ಕಾರ್ಯಾಗಾರ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿತ್ತು.
ಬ್ರಾಹ್ಮಣ ಸಮುದಾಯದ ರಕ್ಷಣೆ ಅನಿವಾರ್ಯ:
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಅವರು, “ದೇಶದ ಅಭಿವೃದ್ಧಿಯಲ್ಲಿ ಬ್ರಾಹ್ಮಣರ ಪಾತ್ರ ಅನನ್ಯ. ಆದರೆ ಇಂದು ನಮ್ಮ ಸಮುದಾಯದ ಯುವಜನತೆ ಸಂಕಷ್ಟದಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ ಸಮುದಾಯವನ್ನು ದೂಷಿಸುವ ಪಿತೂರಿ ನಡೆಯುತ್ತಿದೆ. ಬುದ್ಧಿವಂತಿಕೆ ಮತ್ತು ಸಜ್ಜನಿಕೆಗೆ ಹೆಸರಾದ ನಾವು, ಋಣಾತ್ಮಕ ಅಂಶಗಳನ್ನು ಮೆಟ್ಟಿ ನಿಂತು ಧನಾತ್ಮಕವಾಗಿ ಸಂಘಟಿತರಾಗಬೇಕಿದೆ,” ಎಂದು ತಿಳಿಸಿದರು. ಮಂಡಳಿಯ ಅನುದಾನವನ್ನು ಸಮುದಾಯದ ವಿವಿಧ ಕಲ್ಯಾಣ ಯೋಜನೆಗಳಿಗೆ ಸದುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದೂ ಅವರು ವಿವರಿಸಿದರು.
ಸೇವೆ ಮತ್ತು ಸ್ವಾಭಿಮಾನ:

ವೇದಿಕೆಯ ಹಿರಿಯ ಉಪಾಧ್ಯಕ್ಷ ಬಿ.ಎಲ್. ಹನುಮಂತರಾವ್ ಮಾತನಾಡಿ, ಕೊರೊನಾ ಕಾಲದ ಸಂಕಷ್ಟಗಳನ್ನು ಸ್ಮರಿಸಿದರು. “ಆ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ನೆರವಾಗಲು ಮುಂದಾದಾಗ, ಅನೇಕರು ಸ್ವಾಭಿಮಾನದಿಂದ ಸಹಾಯ ಪಡೆಯಲು ಹಿಂಜರಿದರು. ಅಂತಹವರಿಗೆ ಮನೆ ಮನೆಗೆ ತೆರಳಿ ಆಹಾರ ಕಿಟ್ಗಳನ್ನು ತಲುಪಿಸಲಾಯಿತು. ಸಮುದಾಯದ ಕೆಲಸಗಳು ನಿರಂತರ ಪ್ರಯತ್ನದಿಂದ ಮಾತ್ರ ಸಾಧ್ಯ,” ಎಂದರು.
ಆರೋಗ್ಯ ಮತ್ತು ಭಾಷಾ ರಕ್ಷಣೆ:
ವಿಶೇಷ ಸನ್ಮಾನ ಸ್ವೀಕರಿಸಿದ ವೆಂಕಟೇಶ್ ದ್ವಾರಕನಾಥ್ ಅವರು, ಬ್ರಾಹ್ಮಣ ಸಮುದಾಯದವರಿಗೆ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಮೊತ್ತದ ಆರೋಗ್ಯ ವಿಮೆ ಸೌಲಭ್ಯ ಒದಗಿಸುವ ಕುರಿತು ಮತ್ತು ಮಾಧ್ಯಮ ಮಿತ್ರರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು. ಇದೇ ವೇಳೆ ಹಿರಿಯ ಸಾಹಿತಿ ಜ್ಯೋತಿಶ್ವರ ಅವರು ಮಾತನಾಡಿ, “ತಂತ್ರಜ್ಞಾನದ ಜೊತೆಗೆ ಕನ್ನಡ ಭಾಷೆಯ ಬಳಕೆಯನ್ನು ಉಳಿಸಿಕೊಳ್ಳದಿದ್ದರೆ ಮುಂದಿನ ಹತ್ತು ವರ್ಷಗಳಲ್ಲಿ ಭಾಷೆ ನಾಶವಾಗುವ ಭೀತಿಯಿದೆ. ಬ್ರಾಹ್ಮಣರು ಕ್ಷಾತ್ರತೇಜದಿಂದ ಸಂಘಟಿತರಾಗಬೇಕು,” ಎಂದು ಕರೆ ನೀಡಿದರು.
ಗಣ್ಯರಿಗೆ ಸನ್ಮಾನ:
ಇದೇ ಸಂದರ್ಭದಲ್ಲಿ ಕೆಯುಡಬ್ಲ್ಯುಜೆ ಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ನೂತನವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಪರಿಮಳ ಎಚ್.ಎಸ್, ಕಾರ್ಯದರ್ಶಿ ಸ್ಥಾನಕ್ಕೆ ಗೋದಾವರಿ ಡಿ.ಎಸ್, ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಆಯ್ಕೆಯಾದ ಬೆಂಗಳೂರು ವೈರ್ ಸಂಪಾದಕರಾದ ಶ್ಯಾಮ್.ಎಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಹರೀಶ್ ಅವರನ್ನು “ವಿಕಾಸ” ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಿರಿಯ ಉಪಾಧ್ಯಕ್ಷಕರಾದ ಆರ್.ಲಕ್ಷ್ಮಿಕಾಂತ, ಸಂಘಟನಾ ಕಾರ್ಯದರ್ಶಿ ಅನಿಲ್ ಕುಮಾರ್, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಬಿ.ಎನ್.ಮಹೇಶ್ ಕುಮಾರ್, ವಿಕಾಸದ ಅಧ್ಯಕ್ಷರಾದ ಶ್ರೀನಾಥ್ ಜೋಶಿ, ಪ್ರಧಾನ ಕಾರ್ಯದರ್ಶಿ ಹನುಮೇಶ್ ಯಾವಗಲ್, ತ್ರಿಮತಸ್ಥ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಾ.ಪಂಡಿತ ಪ್ರಸನ್ನಾಚಾರ್ಯ, ಹಿರಿಯ ಪತ್ರಕರ್ತರಾದ ಆಶಾ ಕೃಷ್ಣಮೂರ್ತಿ, ಅರುಣ್, ಡಿಜಿಟಲ್ ಮಾಧ್ಯಮ ಪರಿಣತರಾದ ಚೈತನ್ಯ ಬೇಲಿ, ಗುರುರಾಜ ಪೋಶಟ್ಟಿಹಳ್ಳಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.























