ಬೆಂಗಳೂರು, ಫೆ.28 www.bengaluruwire.com : ಸಿಲಿಕಾನ್ ಸಿಟಿಯ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸೌಂದರ್ಯೀಕರಣಕ್ಕೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪೂರ್ವ, ಕೇಂದ್ರ ಮತ್ತು ಉತ್ತರ ನಗರ ಪಾಲಿಕೆಗಳು ಹೊಸ ವೇಗ ನೀಡಿವೆ. ಸಂಚಾರ ದಟ್ಟಣೆ ನಿವಾರಣೆಗಾಗಿ ರಸ್ತೆ ಅಗಲೀಕರಣ, ಮಳೆಗಾಲದ ಸಿದ್ಧತೆಗಾಗಿ ರಾಜಕಾಲುವೆ ಹೂಳೆತ್ತುವಿಕೆ ಹಾಗೂ ನಗರವನ್ನು ಕಸಮುಕ್ತಗೊಳಿಸಲು ಬೃಹತ್ ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳಲಾಗಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರ ನೇತೃತ್ವದಲ್ಲಿ ಹೊರ ವರ್ತುಲ ರಸ್ತೆ (ORR) ಮತ್ತು ಪೆರಿಫೆರಲ್ ರಿಂಗ್ ರೋಡ್ (PRR) ನಡುವಿನ ಸಂಪರ್ಕ ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ಪೂರ್ವ: 24 ಮೀಟರ್ ರಸ್ತೆ ಅಗಲೀಕರಣಕ್ಕೆ ಚಾಲನೆ:

ಪರಿಷ್ಕೃತ ಮಹಾಯೋಜನೆ (RMP)-2015ರ ಅನ್ವಯ, 24 ಮೀಟರ್ ಅಗಲದ ರಸ್ತೆ ನಿರ್ಮಾಣಕ್ಕಾಗಿ ಹೊರವರ್ತುಲ ರಸ್ತೆ ಹಾಗೂ ಪೆರಿಫೀರಿಯಲ್ ರಸ್ತೆಗೆ ಸಂಪರ್ಕ ಕಲ್ಪಿಸುವ, ಬ್ರಿಗೇಡ್ ಲೇಕ್ ಫ್ರಂಟ್ ಬಳಿ ಇದ್ದ ಸುಮಾರು 2 ಎಕರೆ (8,067 ಚ.ಮೀ) ಜಾಗವನ್ನು ಪಾಲಿಕೆ ವಶಕ್ಕೆ ಪಡೆದಿದೆ. ಈ ಜಾಗವನ್ನು ವಸತಿ ಸಮುಚ್ಚಯವು ಉದ್ಯಾನವನವಾಗಿ ಬಳಸುತ್ತಿತ್ತು. ಹೆಚ್ಚುವರಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ನೇತೃತ್ವದ ಜಾರಿ ತಂಡವು ಈ ಕಾರ್ಯಾಚರಣೆ ನಡೆಸಿದ್ದು, ಸಂಚಾರ ಸುಗಮಗೊಳಿಸಲು ಹಂತ-ಹಂತವಾಗಿ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಮಳೆಹಾನಿ ತಡೆಗೆ ರಾಜಕಾಲುವೆ ಕಾಮಗಾರಿ ಚುರುಕು:
ಮಳೆಗಾಲದಲ್ಲಿ ಜಲಾವೃತ ಸಮಸ್ಯೆ ತಡೆಯಲು ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆ ತಡೆಗೋಡೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಗೆದ್ದಲಹಳ್ಳಿ ರೈಲ್ವೆ ವೆಂಟ್, ಬಳಗೆರೆ ಎಸ್ಟಿಪಿ ಪ್ಲಾಂಟ್ ಮತ್ತು ಸಿದ್ದಾಪುರ ಕೆರೆ ಕಾಲುವೆ ಸೇರಿದಂತೆ ಪ್ರಮುಖ ಸ್ಥಳಗಳನ್ನು ಆಯುಕ್ತರು ಪರಿಶೀಲಿಸಿದ್ದಾರೆ. ಗೆದ್ದಲಹಳ್ಳಿ ಬಾಕ್ಸ್ ಪುಷಿಂಗ್ ಕಾರ್ಯವನ್ನು ಏಪ್ರಿಲ್ ಅಂತ್ಯದೊಳಗೆ ಮತ್ತು ಬಳಗೆರೆ ರಾಜಕಾಲುವೆ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.
ಬೆಂಗಳೂರು ಕೇಂದ್ರ: 20 ‘ಬ್ಲ್ಯಾಕ್ ಸ್ಪಾಟ್’ಗಳ ಮುಕ್ತಿ:
ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರ ನೇತೃತ್ವದಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ. 108 ಪೌರಕಾರ್ಮಿಕರು, 35 ಟ್ರಾಕ್ಟರ್ ಹಾಗೂ 7 ಜೆಸಿಬಿಗಳ ನೆರವಿನಿಂದ 5.6 ಕಿ.ಮೀ ವ್ಯಾಪ್ತಿಯಲ್ಲಿ 55 ಲೋಡ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಚಾಮರಾಜಪೇಟೆ, ಚಿಕ್ಕಪೇಟೆ, ಶಿವಾಜಿನಗರ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ 20 ಕಸ ಹಾಕುವ ಸ್ಥಳಗಳನ್ನು (Black Spots) ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ.
ಬೆಂಗಳೂರು ಉತ್ತರ: ‘ಸ್ವಚ್ಛ ಸರ್ವೇಕ್ಷಣ 2025-26’ ಸಿದ್ಧತೆ:
ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಮಾರ್ಚ್ 1 ರಿಂದ 6 ರವರೆಗೆ 44 ವಾರ್ಡ್ಗಳಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಘೋಷಿಸಿದ್ದಾರೆ.
ಮಾರ್ಚ್ 7: ಪುಲಿಕೇಶಿನಗರದ ರಿಚರ್ಡ್ ಪಾರ್ಕ್ನಲ್ಲಿ ‘ಕಾಂಪೋಸ್ಟ್ ಸಂತೆ’.
ಮಾರ್ಚ್ 8: ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಯಲಹಂಕ ಕೆರೆ ಬಳಿ ‘ವಾಕ್ಥಾನ್’. ಸಾರ್ವಜನಿಕರು ಅಭಿಯಾನದಲ್ಲಿ ಭಾಗವಹಿಸಲು ಗೂಗಲ್ ಲಿಂಕ್ ಮೂಲಕ ಹೆಸರು ನೋಂದಾಯಿಸಿಕೊಳ್ಳಲು ನಗರಪಾಲಿಕೆ ಆಯುಕ್ತರು ಕೋರಿದ್ದಾರೆ.























