ಬೆಂಗಳೂರು, ಫೆ.19 www.bengaluruwire.com : ರಾಜ್ಯದ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಅಧಿನಿಯಮ 2025’ರ ಹೊಸ ನಿಯಮದನ್ವಯ ಕೆರೆಗಳ ಬಫರ್ ವಲಯದಲ್ಲಿ (Buffer Zone) ಯಾವುದೇ ರೀತಿಯ ವಾಣಿಜ್ಯ, ಮನರಂಜನೆ ಹಾಗೂ ಕೈಗಾರಿಕಾ ಚಟುವಟಿಕೆಗಳನ್ನು ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಹೊಸ ತಿದ್ದುಪಡಿ ಕಾಯ್ದೆಯ ಪ್ರಕಾರ, ಕೆರೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ವಲಯವನ್ನು ನಿಗದಿಪಡಿಸಲಾಗಿದೆ. ಈ ನಿರ್ದಿಷ್ಟ ವ್ಯಾಪ್ತಿಯೊಳಗೆ ಕಟ್ಟಡ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ ಅಥವಾ ಯಾವುದೇ ವಾಣಿಜ್ಯ ಉದ್ದೇಶದ ಕಾಮಗಾರಿಗಳನ್ನು ಕೈಗೊಳ್ಳುವಂತಿಲ್ಲ. ಕೆರೆಯ ನೈಸರ್ಗಿಕ ಹರಿವಿಗೆ ಅಡ್ಡಿಪಡಿಸುವ ಅಥವಾ ಮಾಲಿನ್ಯಕ್ಕೆ ಕಾರಣವಾಗುವ ಯಾವುದೇ ಚಟುವಟಿಕೆಗಳಿಗೆ ಇನ್ನು ಮುಂದೆ ಅವಕಾಶವಿರುವುದಿಲ್ಲ.
ಬಫರ್ ವಲಯದ ಅಳತೆಗೋಲು ಹೀಗಿದೆ:
ಪ್ರಾಧಿಕಾರವು ಕೆರೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ವಲಯದ ಮೀಟರ್ಗಳನ್ನು ಈ ಕೆಳಗಿನಂತೆ ನಿಗದಿಪಡಿಸಿದೆ:

0.05 ಎಕರೆವರೆಗೆ: 0 ಮೀಟರ್ ಬಫರ್ ವಲಯ.
0.05 ರಿಂದ 0.10 ಎಕರೆ: 1.00 ಮೀಟರ್.
0.10 ರಿಂದ 1.00 ಎಕರೆ: 3.00 ಮೀಟರ್.
1.00 ರಿಂದ 10.00 ಎಕರೆ: 6.00 ಮೀಟರ್.
10.00 ರಿಂದ 25.00 ಎಕರೆ: 12.00 ಮೀಟರ್.
25.00 ರಿಂದ 100.00 ಎಕರೆ: 24.00 ಮೀಟರ್.
100.00 ಎಕರೆಗಿಂತ ಮೇಲ್ಪಟ್ಟು: 30.00 ಮೀಟರ್ ಬಫರ್ ವಲಯ ಕಡ್ಡಾಯ.
ವಿನಾಯಿತಿ ಯಾವುದಕ್ಕೆ?
ರಸ್ತೆಗಳು, ಸೇತುವೆಗಳು, ಕುಡಿಯುವ ನೀರು ಸರಬರಾಜು ಮಾರ್ಗಗಳು, ವಿದ್ಯುತ್ ಮಾರ್ಗಗಳು ಮತ್ತು ಎಸ್ಟಿಪಿ (STP) ಘಟಕಗಳಂತಹ ಸಾರ್ವಜನಿಕ ಹಿತಾಸಕ್ತಿಯ ಅತ್ಯಗತ್ಯ ಕಾಮಗಾರಿಗಳಿಗೆ ಮಾತ್ರ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಅನುಮತಿ ನೀಡಲಾಗುತ್ತದೆ. ಆದರೆ, ಈ ಕಾಮಗಾರಿಗಳು ಕೆರೆಯ ನೈಸರ್ಗಿಕ ನೀರಿನ ಹರಿವಿಗೆ ಯಾವುದೇ ಅಡ್ಡಿ ಉಂಟುಮಾಡಬಾರದು ಎಂಬ ಷರತ್ತನ್ನು ವಿಧಿಸಲಾಗಿದೆ.
ಈ ತಿದ್ದುಪಡಿಯು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.























