ಬೆಂಗಳೂರು, ಫೆ.17 www.bengaluruwire.com : ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಕೆ.ಆರ್. ಮಾರುಕಟ್ಟೆಗೆ (ಕೃಷ್ಣರಾಜೇಂದ್ರ ಮಾರುಕಟ್ಟೆ) ಬರುವ ಗ್ರಾಹಕರು ಮತ್ತು ವ್ಯಾಪಾರಿಗಳ ಪಾರ್ಕಿಂಗ್ ಸಂಕಷ್ಟಕ್ಕೆ ಶೀಘ್ರವೇ ಮುಕ್ತಿ ಸಿಗಲಿದೆ.
ಮಾರುಕಟ್ಟೆಯ ತಳಮಹಡಿಯಲ್ಲಿ ನಿರ್ಮಾಣವಾಗುತ್ತಿರುವ “ಅತ್ಯಾಧುನಿಕ ಪಾರ್ಕಿಂಗ್ ತಂತ್ರಜ್ಞಾನ” ವ್ಯವಸ್ಥೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಂಗಳವಾರ ಅಧಿಕಾರಿಗಳ ತಂಡದೊಂದಿಗೆ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬಾಕಿ ಇರುವ ಶೇ. 10 ರಷ್ಟು ಕೆಲಸಗಳನ್ನು ಯುದ್ಧೋಪಾದಿಯಲ್ಲಿ ಮುಗಿಸಲು ಆದೇಶಿಸಿದರು.
ಏನಿದು ಅತ್ಯಾಧುನಿಕ ಪಾರ್ಕಿಂಗ್ ವ್ಯವಸ್ಥೆ?:

ಕೆ.ಆರ್. ಮಾರುಕಟ್ಟೆಯ ಪಾರ್ಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುತ್ತಿದೆ.
‘ರೈಟ್ ಪಾರ್ಕಿಂಗ್’ ಸಂಸ್ಥೆಯ ಸಹಯೋಗದೊಂದಿಗೆ ಈ ಕೆಳಗಿನ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ:
ಎಐ ಕ್ಯಾಮೆರಾಗಳ ಕಣ್ಗಾವಲು: ಪಾರ್ಕಿಂಗ್ ಪ್ರದೇಶದಲ್ಲಿ ಒಟ್ಟು 67 ಎಐ (Artificial Intelligence) ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಇವು ವಾಹನಗಳ ಪ್ರವೇಶ ಮತ್ತು ನಿರ್ಗಮನದ ನಿಖರ ಮಾಹಿತಿ ದಾಖಲಿಸಲಿವೆ.
ವಾಹನ ಸಾಮರ್ಥ್ಯ: ಇಲ್ಲಿ ಏಕಕಾಲಕ್ಕೆ 400 ದ್ವಿಚಕ್ರ ವಾಹನಗಳು ಮತ್ತು 200 ಕಾರುಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.
ಸುರಕ್ಷತೆ: ತುರ್ತು ಸಂದರ್ಭಗಳಿಗಾಗಿ 12 ಹೈ-ಟೆಕ್ ಅಲಾರಂ ವ್ಯವಸ್ಥೆ ಹಾಗೂ ಅಗ್ನಿಶಾಮಕ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ.
ಮೂಲಸೌಕರ್ಯ: ಮಳೆನೀರು ನಿಲ್ಲದಂತೆ ಚರಂಡಿ ವ್ಯವಸ್ಥೆ ಮತ್ತು ಸುಸಜ್ಜಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಸ್ವಚ್ಛತೆಗೆ ಆದ್ಯತೆ – ಅಧಿಕಾರಿಗಳ ಸಮನ್ವಯ ಸಭೆಗೆ ಸೂಚನೆ.
ಮಾರುಕಟ್ಟೆಯ ಮೊದಲ ಮಹಡಿಯಲ್ಲಿ ಬಳಕೆಯಿಲ್ಲದ ಶೌಚಾಲಯಗಳನ್ನು ಕೂಡಲೇ ದುರಸ್ತಿಗೊಳಿಸಿ ನಾಗರಿಕರಿಗೆ ಲಭ್ಯವಾಗುವಂತೆ ಮಾಡಲು ಆಯುಕ್ತರು ತಿಳಿಸಿದರು. ಮಾರುಕಟ್ಟೆ ಆವರಣದಲ್ಲಿ ನಿರಂತರ ಸ್ವಚ್ಛತೆ ಕಾಪಾಡಲು ಮತ್ತು ಮಳಿಗೆಗಳಿಂದ ಕಂದಾಯ ವಸೂಲಿ ಮಾಡಲು ಇಂಜಿನಿಯರಿಂಗ್, ಪೊಲೀಸ್ ಮತ್ತು ಕಂದಾಯ ವಿಭಾಗದ ಅಧಿಕಾರಿಗಳು ಪ್ರತಿ ವಾರ ಸಮನ್ವಯ ಸಭೆ ನಡೆಸುವಂತೆ ಜಿಬಿಎ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ, ಹಿರಿಯ ಅಧಿಕಾರಿಗಳಾದ, ದಲ್ಜಿತ್ ಕುಮಾರ್, ಹೇಮಂತ್ ಶರಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.























