ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಿದ್ದರಾಮಯ್ಯ ಎಂಬ ಹೆಸರು ಕೇವಲ ಒಬ್ಬ ವ್ಯಕ್ತಿಯದ್ದಲ್ಲ, ಅದೊಂದು ಶಕ್ತಿ. 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗಿನಿಂದ ಇಂದಿನವರೆಗೆ ಸತತ ಒಂಬತ್ತು ಬಾರಿ ಜನಪ್ರತಿನಿಧಿಯಾಗಿ, ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಿದ್ದರಾಮಯ್ಯನವರು, ಇದೇ ಫೆಬ್ರವರಿ 14ಕ್ಕೆ ತಮ್ಮ ಎರಡನೇ ಅವಧಿಯ 1000 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಬಡ ರೈತ ಕುಟುಂಬದಲ್ಲಿ ಹುಟ್ಟಿ ಹಸಿವಿನ ನೋವನ್ನುಂಡ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ 24 ಗಂಟೆಗಳಲ್ಲಿ ಜಾರಿಗೆ ತಂದ ‘ಅನ್ನಭಾಗ್ಯ’ ಯೋಜನೆ ಇಂದು ದೇಶಕ್ಕೇ ಮಾದರಿ. ಇಂದು ರಾಜ್ಯದ 4.4 ಕೋಟಿ ಫಲಾನುಭವಿಗಳು ಈ ಯೋಜನೆಯಡಿ ಹಸಿವು ಮುಕ್ತ ಜೀವನ ನಡೆಸುತ್ತಿದ್ದಾರೆ. ಮುಂದಿನ ತಿಂಗಳಿಂದ ಅಕ್ಕಿಯ ಜೊತೆಗೆ ಬೇಳೆ, ಸಕ್ಕರೆ, ಉಪ್ಪು ಮತ್ತು ಎಣ್ಣೆಯನ್ನೊಳಗೊಂಡ ಪೌಷ್ಟಿಕ ಕಿಟ್ ನೀಡುವ ನಿರ್ಧಾರ ಅವರ ಜನಪರ ಕಾಳಜಿಗೆ ಸಾಕ್ಷಿ.
ಪಂಚ ಗ್ಯಾರಂಟಿಗಳ ಕ್ರಾಂತಿ: ಅಂಕಿ-ಅಂಶಗಳ ನೋಟ
ಕೇವಲ ಭರವಸೆಗಳನ್ನು ನೀಡದೆ, ನುಡಿದಂತೆ ನಡೆದ ಸರ್ಕಾರವಿದು. ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದ ಪ್ರತಿ ಮನೆಯ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲಾಗಿದೆ:
ಗೃಹಲಕ್ಷ್ಮಿ: 1.25 ಕೋಟಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ರೂ. 2,000 ತಲುಪುತ್ತಿದೆ. ಇದುವರೆಗೆ ಬರೋಬ್ಬರಿ ರೂ. 47,773 ಕೋಟಿ ವೆಚ್ಚ ಮಾಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಭಾಷ್ಯ ಬರೆಯಲಾಗಿದೆ. ಹಾವೇರಿ ಜಿಲ್ಲೆಯೊಂದರಲ್ಲೇ 3,85,631 ಫಲಾನುಭವಿಗಳಿಗೆ ರೂ. 1,864.47 ಕೋಟಿ ತಲುಪಿದೆ.

ಗೃಹಜ್ಯೋತಿ: 1.68 ಕೋಟಿ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ರೂ. 18,900 ಕೋಟಿ ವೆಚ್ಚ ಮಾಡಲಾಗಿದೆ. ಹಾವೇರಿಯಲ್ಲಿ 3,94,550 ಜನ ಇದರ ಲಾಭ ಪಡೆಯುತ್ತಿದ್ದಾರೆ.
ಶಕ್ತಿ ಯೋಜನೆ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಈ ಯೋಜನೆ ‘ಗಿನ್ನಿಸ್ ವರ್ಲ್ಡ್ ರೆಕಾರ್ಡ್’ ಸೇರಿದೆ. 680 ಕೋಟಿಗೂ ಹೆಚ್ಚು ಬಾರಿ ಮಹಿಳೆಯರು ಪ್ರಯಾಣಿಸಿದ್ದು, ರೂ. 8,815 ಕೋಟಿ ವೆಚ್ಚ ಭರಿಸಲಾಗಿದೆ.
ಯುವನಿಧಿ: ನಿರುದ್ಯೋಗಿ ಪದವೀಧರರಿಗೆ ಆಸರೆಯಾಗಿರುವ ಈ ಯೋಜನೆಯಡಿ 3.7 ಲಕ್ಷ ಯುವಕರಿಗೆ ರೂ. 4,375 ಕೋಟಿ ನೆರವು ನೀಡಲಾಗಿದೆ.
ಅನ್ನಭಾಗ್ಯ (DBT ಸೇರಿ): ಆಹಾರ ಭದ್ರತೆಗಾಗಿ ಹಾವೇರಿಯಲ್ಲಿ 2.29 ಕೋಟಿ ಫಲಾನುಭವಿಗಳಿಗೆ ಹಾಗೂ ರಾಜ್ಯಾದ್ಯಂತ ಒಟ್ಟು ರೂ. 17,495.72 ಕೋಟಿ (ನಗದು ಮತ್ತು ಧಾನ್ಯ ಸೇರಿ) ವ್ಯಯಿಸಲಾಗಿದೆ.
‘ಭೂ ಗ್ಯಾರಂಟಿ’: ಅಸ್ತಿತ್ವದ ರಕ್ಷಣೆ:
ದಾಖಲೆಗಳಿಗಾಗಿ ಕಚೇರಿ ಅಲೆಯುತ್ತಿದ್ದ ಕಾಲಕ್ಕೆ ವಿದಾಯ ಹಾಡಿರುವ ಸರ್ಕಾರ, 67 ಕೋಟಿ ಪುಟಗಳ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದೆ. ‘ಲ್ಯಾಂಡ್ ಬೀಟ್’ ತಂತ್ರಜ್ಞಾನದ ಮೂಲಕ 13.5 ಲಕ್ಷ ಎಕರೆ ಸರ್ಕಾರಿ ಜಮೀನು ರಕ್ಷಿಸಲಾಗಿದೆ. ಲಂಬಾಣಿ ತಾಂಡಾ, ಹಟ್ಟಿಗಳ ನಿವಾಸಿಗಳಿಗೆ 3 ಲಕ್ಷಕ್ಕೂ ಅಧಿಕ ಹಕ್ಕುಪತ್ರ ನೀಡಿರುವುದು ಸಾಮಾಜಿಕ ನ್ಯಾಯದ ದೊಡ್ಡ ಗೆಲುವು.
ಆರ್ಥಿಕ ಶಿಸ್ತು ಮತ್ತು ಅಭಿವೃದ್ಧಿ;
16 ಬಜೆಟ್ ಮಂಡಿಸಿ ದಾಖಲೆ ಬರೆದಿರುವ ಸಿದ್ದರಾಮಯ್ಯನವರು, ರಾಜ್ಯದ ತಲಾ ಆದಾಯವನ್ನು ರೂ. 2,04,605 ಕ್ಕೆ ಏರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರ ಸರ್ಕಾರದ ಅಸಹಕಾರ ಮತ್ತು ಅನುದಾನದ ಕೊರತೆಯ ನಡುವೆಯೂ, ಭದ್ರಾ ಮೇಲ್ದಂಡೆ ಮತ್ತು ಕೃಷ್ಣ ಮೇಲ್ದಂಡೆ ಯೋಜನೆಗಳಿಗೆ ಐತಿಹಾಸಿಕ ಮೊತ್ತದ ಪರಿಹಾರ ಘೋಷಿಸಿದ್ದಾರೆ. ಕೆಎಂಎಫ್ ಉತ್ತೇಜನಕ್ಕೆ ಹಾಲಿನ ಪ್ರೋತ್ಸಾಹಧನ ಹೆಚ್ಚಿಸಿರುವುದು ರೈತರಿಗೆ ವರದಾನವಾಗಿದೆ.
ಬಸವ ಪಥದಲ್ಲಿ ಆಡಳಿತ:
ವಿಶ್ವಗುರು ಬಸವಣ್ಣನವರನ್ನು ‘ರಾಜ್ಯ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿ, ವಿಧಾನಸೌಧದಲ್ಲಿ ಅವರ ಭಾವಚಿತ್ರ ಅನಾವರಣಗೊಳಿಸಿದ್ದು ಇವರ ಕಾಲದ ಮೈಲಿಗಲ್ಲು. “ಇವ ನಮ್ಮವ” ಎಂಬ ತತ್ವದಡಿ ಎಲ್ಲ ಜಾತಿ, ಧರ್ಮಗಳ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವ ಸಿದ್ದರಾಮಯ್ಯನವರ 1000 ದಿನಗಳ ಆಡಳಿತವು ಕರ್ನಾಟಕವನ್ನು ‘ಸರ್ವಜನಾಂಗದ ಶಾಂತಿಯ ತೋಟ’ವಾಗಿ ಮುನ್ನಡೆಸುತ್ತಿದೆ.
ಆಡಳಿತದಲ್ಲಿ ನಿರಂತರ ಆರ್ಥಿಕ ಶಿಸ್ತು:
“2013ರಿಂದ 2018ರವರೆಗೆ ಹಾಗೂ 2023ರಿಂದ ಇಂದಿನವರೆಗೆ ಆಡಳಿತದಲ್ಲಿ ಸಿದ್ದರಾಮಯ್ಯ ಅವರು, ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬಡವರ, ಮಹಿಳೆಯರ, ದೀನದುರ್ಬಲರ, ರೈತರ ಹಾಗೂ ಯುವಕರ ಧ್ವನಿಯಾಗಿ ರಾಜ್ಯವನ್ನು ಮುನ್ನಡೆಸುತ್ತಿರುವುದು ಹೆಮ್ಮೆಯ ವಿಷಯ”
– ಬಸವರಾಜ ರಾಯರಡ್ಡಿ,
ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು























