ಬೆಂಗಳೂರು, ಫೆ.11 www.bengaluruwire.com : ನಗರದ 40 ಅಡಿಗಿಂತ ಕಡಿಮೆ ಅಗಲದ ರಸ್ತೆಗಳಿರುವ ಪ್ರದೇಶಗಳಲ್ಲಿ ಉದ್ದಿಮೆ ಪರವಾನಗಿ (Trade License) ನೀಡದಂತೆ ಹೊರಡಿಸಿರುವ ಆದೇಶವು ‘ಅಂತಃಕರಣವಿಲ್ಲದ’ ನಿರ್ಧಾರ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಈ ಕೂಡಲೇ ಈ ಸುತ್ತೋಲೆಯನ್ನು ವಾಪಸ್ ಪಡೆದು ಬಡ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳ ಹಿತ ಕಾಯಬೇಕು ಎಂದು ಅವರು ಜಿಬಿಎ (GBA) ಮುಖ್ಯ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಲಕ್ಷಾಂತರ ಜನರ ಬದುಕು ಅತಂತ್ರ:
ಜನವರಿ 31ರಂದು ಜಿಬಿಎ ಹೊರಡಿಸಿರುವ ಈ ಸುತ್ತೋಲೆಯು ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ಕಿರಾಣಿ ಅಂಗಡಿ ನಂಬಿಕೊಂಡಿರುವ ಕುಟುಂಬಗಳನ್ನು ಅಕ್ಷರಶಃ ಬೀದಿಗೆ ತಳ್ಳುತ್ತದೆ ಎಂದು ಸುರೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. “ನಗರದ ಹಲವು ಕಡೆ ಅವೈಜ್ಞಾನಿಕ ಯೋಜನೆಗಳಿಂದಾಗಿ 40 ಅಡಿ ರಸ್ತೆಗಳಿಲ್ಲ. ಅಂದು ಬಿಡಿಎ ಮತ್ತು ಬಿಬಿಎಂಪಿ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದರ ಪರಿಣಾಮ ಇಂದು ಬಡ ವ್ಯಾಪಾರಿಗಳು ಅನುಭವಿಸುವಂತಾಗಿದೆ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವ್ಯಾಪಾರಿಗಳ ಚಿತ್ರಣ:
ಶಾಸಕರು ಒದಗಿ ದತ್ತಾಂಶದ ಪ್ರಕಾರ, ಜಿಬಿಎ ವ್ಯಾಪ್ತಿಯಲ್ಲಿ ಈ ನಿಯಮದಿಂದ ಉಂಟಾಗುವ ಪರಿಣಾಮ ಹೀಗಿದೆ:
* ಬೀದಿ ಬದಿ ವ್ಯಾಪಾರಿಗಳು: ಅಂದಾಜು 3 ಲಕ್ಷ.
* ಕಿರಾಣಿ ಅಂಗಡಿಗಳು: ಅಂದಾಜು 1.8 ಲಕ್ಷ.
* ಪರವಾನಗಿ ಹೊಂದಿರುವವರು: 1.3 ಲಕ್ಷ.
* ಒಟ್ಟು ಅವಲಂಬಿತರು: ಸುಮಾರು 20 ಲಕ್ಷ ಮಂದಿ.
ಗ್ರಾಹಕರಿಗೂ ಸಂಕಷ್ಟ:
ಕೇವಲ ವ್ಯಾಪಾರಿಗಳಷ್ಟೇ ಅಲ್ಲದೆ, ಸಾರ್ವಜನಿಕರೂ ಈ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹಾಲು, ತರಕಾರಿ, ಔಷಧಿಯಂತಹ ದೈನಂದಿನ ಅಗತ್ಯಗಳಿಗಾಗಿ ಜನರು 40 ಅಡಿ ಅಗಲದ ರಸ್ತೆಗಳನ್ನೇ ಹುಡುಕಿಕೊಂಡು ಹೋಗುವುದು ಪ್ರಾಯೋಗಿಕವಾಗಿ ಅಸಾಧ್ಯ. ಈ ಸುತ್ತೋಲೆಯು ಸೂಕ್ಷ್ಮ ಸಂವೇದನೆ ರಹಿತವಾಗಿದ್ದು, ಶೋಷಿತರನ್ನು ಮತ್ತಷ್ಟು ಬಡತನಕ್ಕೆ ತಳ್ಳುತ್ತದೆ. ಆದ್ದರಿಂದ ತಕ್ಷಣವೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.























