ಬೆಂಗಳೂರು, ಫೆ.06 www.bengaluruwire.com : ರಾಜ್ಯದ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಇತ್ತೀಚೆಗೆ ಇಹಲೋಕ ತ್ಯಜಿಸಿದ ಹಿರಿಯ ಪತ್ರಕರ್ತರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ಗುರುವಾರ ನಗರದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂತಾಪ ಸೂಚಕ ಸಭೆಯಲ್ಲಿ, ಅಗಲಿದ ಹಿರಿಯ ಜೀವಗಳ ಪತ್ರಿಕೋದ್ಯಮದ ಸೇವೆ ಮತ್ತು ಅವರು ನಡೆದು ಬಂದ ಹಾದಿಯನ್ನು ಸ್ಮರಿಸಲಾಯಿತು.
ಅಗಲಿದ ಚೇತನಗಳು:
ಇತ್ತೀಚೆಗೆ ನಿಧನರಾದ ಕೋಲಾರದ ‘ಹೊನ್ನುಡಿ’ ಪತ್ರಿಕೆಯ ಎಂ.ಜಿ. ಪ್ರಭಾಕರ, ಬೀದರ್ನ ನಾಗಶೆಟ್ಟಿ ಧರಂಪುರ, ಬೆಂಗಳೂರಿನ ‘ಸಂಜೆವಾಣಿ’ ಪತ್ರಿಕೆಯ ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ, ಹುಬ್ಬಳ್ಳಿಯ ‘ಸಂಯುಕ್ತ ಕರ್ನಾಟಕ’ದ ಭೀಮಸೇನ ಪದಕಿ, ಬೆಳಗಾವಿಯ ಎಂ.ಎನ್. ಪಾಟೀಲ, ಸಕಲೇಶಪುರದ ಶಿವಕುಮಾರ್, ಕಲಬುರಗಿ ‘ವಿಜಯ ಕರ್ನಾಟಕ’ದ ಪ್ರಭುಲಿಂಗ ನೀಲೂರೆ, ಮೈಸೂರಿನ ಸೂರಜ್ ಹಾಗೂ ರಾಯಚೂರಿನ ನಹೀಮ್ ಅಶ್ರಫ್ ಅವರಿಗೆ ಸಭೆಯಲ್ಲಿ ಮೌನಾಚರಣೆಯ ಮೂಲಕ ನುಡಿನಮನ ಸಲ್ಲಿಸಲಾಯಿತು.

ವ್ಯಕ್ತಿತ್ವ ಸ್ಮರಣೆ:
ಸಭೆಯಲ್ಲಿ ಮಾತನಾಡಿದ ಕೋಲಾರವಾಣಿ ಪತ್ರಿಕೆಯ ಸಂಪಾದಕರಾದ ಮುರುಳಿ ಅವರು, ಕೋಲಾರದ ಎಂ.ಜಿ. ಪ್ರಭಾಕರ ಅವರ ವ್ಯಕ್ತಿತ್ವವನ್ನು ಕೊಂಡಾಡಿದರು. “ಪ್ರಭಾಕರ ಅವರು ಕೇವಲ ಪತ್ರಕರ್ತರಾಗಿರದೆ, ಅಪಾರ ಜೀವನ ಪ್ರೀತಿ ಹೊಂದಿದ್ದ ವ್ಯಕ್ತಿಯಾಗಿದ್ದರು. ಅವರ ಕಾರ್ಯವೈಖರಿ ಯುವ ಪತ್ರಕರ್ತರಿಗೆ ಮಾದರಿ,” ಎಂದು ಸ್ಮರಿಸಿದರು.
ಕೆಯುಡಬ್ಲ್ಯೂಜೆ ಮಾಜಿ ಅಧ್ಯಕ್ಷ ವಿ. ವೆಂಕಟೇಶ್ ಅವರು ಸಂಜೆವಾಣಿ ಪತ್ರಿಕೆಯ ದೊಡ್ಡಬೊಮ್ಮಯ್ಯ ಅವರನ್ನು ನೆನೆದರು. “ದೊಡ್ಡಬೊಮ್ಮಯ್ಯ ಅವರು ಗಟ್ಟಿ ಮಾತಿನ ಮನುಷ್ಯರಾಗಿದ್ದರೂ, ಅಷ್ಟೇ ಮೃದು ಸ್ವಭಾವದವರು. ಅವರ ಬರಹಗಳಲ್ಲಿ ತೀಕ್ಷ್ಣತೆ ಇರುತ್ತಿತ್ತು. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಅವರ ಅಗಲಿಕೆ ವೈಯಕ್ತಿಕವಾಗಿ ನೋವು ತಂದಿದೆ,” ಎಂದು ವಿಷಾದ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಘವು ಸದಾ ಪತ್ರಕರ್ತರ ಕುಟುಂಬಗಳ ಜೊತೆಗಿರುತ್ತದೆ ಎಂದರು.
ಸಭೆಯಲ್ಲಿ ಮಾಜಿ ಶಾಸಕರಾದ ಎಚ್.ಎಂ. ವಿಶ್ವನಾಥ್, ಸಂಘದ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ಬಿಯುಡಬ್ಲ್ಯುಜೆ ಮಾಜಿ ಖಜಾಂಚಿ ಶಿವರಾಜ್, ಹಿರಿಯ ಪತ್ರಕರ್ತರಾದ ಧ್ಯಾನ್ ಪೂಣಚ್ಚ, ಬೋಪಯ್ಯ ಮತ್ತಿತರ ಪತ್ರಕರ್ತರು, ಅಗಲಿದ ಪತ್ರಕರ್ತರ ಕೆಲವು ಕುಟುಂಬಸ್ಥರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.






















