ಬೆಂಗಳೂರು, ಫೆ.01 www.bengaluruwire.com : ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಮುಂಬರುವ ಆಯವ್ಯಯದಲ್ಲಿ (ಬಜೆಟ್) ಜನರ ಅಭಿಪ್ರಾಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದು, ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಮಾಲ್ ಜಂಕ್ಷನ್ನಲ್ಲಿ ಸಾರ್ವಜನಿಕರ ಕೋರಿಕೆಯ ಮೇರೆಗೆ ಸ್ಕೈವಾಕ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಘೋಷಿಸಿದರು.
ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬಜೆಟ್ ಸಿದ್ಧತೆ ಕುರಿತು ಭಾನುವಾರ ನಡೆದ ವಸತಿ ಕ್ಷೇಮಾಭಿವೃದ್ಧಿ ಸಂಘಗಳ (RWA) ಹಾಗೂ ಸ್ಥಳೀಯ ನಿವಾಸಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ನಗರದ ಸಮಗ್ರ ಅಭಿವೃದ್ಧಿಗೆ ನಾಗರಿಕರ ಪಾಲ್ಗೊಳ್ಳುವಿಕೆ ಅತ್ಯಗತ್ಯವಾಗಿದ್ದು, ಅನುದಾನದ ಲಭ್ಯತೆಗೆ ಅನುಗುಣವಾಗಿ ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಟ್ರಾಫಿಕ್ ಮತ್ತು ರಸ್ತೆ ಸಮಸ್ಯೆಗಳ ಅನಾವರಣ:
ಸಭೆಯಲ್ಲಿ ವಾಜರಹಳ್ಳಿ, ಗೊಟ್ಟಿಗೆರೆ, ಕಸವನಹಳ್ಳಿ, ಎಚ್.ಎಸ್.ಆರ್ ಮತ್ತು ಬಿ.ಟಿ.ಎಂ ಲೇಔಟ್ ಭಾಗದ ನಿವಾಸಿಗಳು ರಸ್ತೆ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ತಲಘಟ್ಟಪುರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಹಾಗೂ ಕನಕಪುರ ರಸ್ತೆಯ ರಜತಗಿರಿ ಜಂಕ್ಷನ್ನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ವಿಶೇಷ ಒತ್ತು ನೀಡುವಂತೆ ಮನವಿ ಮಾಡಲಾಯಿತು.

ಕಸವನಹಳ್ಳಿಯ ಕೈಕೊಂಡ್ರಹಳ್ಳಿ ಜಂಕ್ಷನ್ ಸುಧಾರಣೆಗಾಗಿ ೬ ಮನೆಗಳ ಸ್ಥಳಾಂತರ ಮತ್ತು ಚೂಡಸಂದ್ರದವರೆಗಿನ 3 ಕಿ.ಮೀ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ನಾಗರಿಕರು ಒತ್ತಾಯಿಸಿದರು. ಆಕಾಶನಗರದಿಂದ ಡಿ.ಎಲ್.ಎಫ್ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗೆ ವಿಶೇಷ ಯೋಜನೆ ರೂಪಿಸುವಂತೆ ಕೋರಲಾಯಿತು.
ಮಡಿವಾಳ ಕೆರೆ ಬಯೋಡೈವರ್ಸಿಟಿ ಪಾರ್ಕ್?:
ಪರಿಸರ ಸಂರಕ್ಷಣೆ ಕುರಿತು ಚರ್ಚಿಸುವಾಗ, ಮಡಿವಾಳ ಕೆರೆಯನ್ನು ಜೀವವೈವಿಧ್ಯ ಉದ್ಯಾನವನವನ್ನಾಗಿ (Biodiversity Park) ಪರಿವರ್ತಿಸಿದರೆ ವಲಸೆ ಹಕ್ಕಿಗಳಿಗೆ ಅನುಕೂಲವಾಗಲಿದೆ ಎಂಬ ಸಲಹೆ ವ್ಯಕ್ತವಾಯಿತು. ಇದೇ ವೇಳೆ, ಕಸವನಹಳ್ಳಿ ಮತ್ತು ಎಲೆನಹಳ್ಳಿ ಕೆರೆಗಳ ಒತ್ತುವರಿ ತೆರವುಗೊಳಿಸಿ, ಒಳಚರಂಡಿ ನೀರು ಕೆರೆಗೆ ಸೇರದಂತೆ ತಡೆಯಲು ಯುಜಿಡಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯ ಕೇಳಿಬಂತು.
ತ್ಯಾಜ್ಯ ನಿರ್ವಹಣೆ ಮತ್ತು ಸುರಕ್ಷತೆ:
ಸಾರಿಗೆ ವೆಚ್ಚ ಉಳಿಸಲು ವಾರ್ಡ್ ಮಟ್ಟದಲ್ಲೇ ಹಸಿ ಕಸ ಸಂಸ್ಕರಣೆ ಮಾಡಬೇಕು ಎಂದು ಆರ್ಬಿಐ ಲೇಔಟ್ ನಿವಾಸಿಗಳು ಸಲಹೆ ನೀಡಿದರು. ಬ್ಲಾಕ್ಸ್ಪಾಟ್ಗಳನ್ನು ಗುರುತಿಸಿ ‘ಕಸದ ಕಿಯೋಸ್ಕ್’ ಸ್ಥಾಪನೆ ಹಾಗೂ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಆಗ್ರಹಿಸಲಾಯಿತು. ರಾತ್ರಿ ವೇಳೆ ಸಂಚರಿಸಲು ಭಯವಾಗುವ ಡಾರ್ಕ್ ಸ್ಪಾಟ್ಸ್ಗಳಲ್ಲಿ ಬೀದಿ ದೀಪ ಹಾಗೂ ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಮನವಿ ಮಾಡಲಾಯಿತು. 110 ಹಳ್ಳಿಗಳ ವ್ಯಾಪ್ತಿಯಲ್ಲಿ ಹೊಸದಾಗಿ ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ಎಚ್.ಎಸ್.ಆರ್ ಲೇಔಟ್ನಲ್ಲಿ ಅಸ್ತಿತ್ವದಲ್ಲಿರುವ ಫುಟ್ಪಾತ್ಗಳ ಉನ್ನತೀಕರಣಕ್ಕೆ ಬೇಡಿಕೆ ಇಡಲಾಯಿತು.
ದತ್ತು ನೀತಿ ಜಾರಿಗೆ ನಿರ್ಧಾರ:
ಶೀಘ್ರದಲ್ಲೇ ಟೌನ್ಹಾಲ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ‘ಬೀದಿಗಳು, ಜಂಕ್ಷನ್ಗಳು ಮತ್ತು ಉದ್ಯಾನವನಗಳ ದತ್ತು ನೀತಿ’ಯನ್ನು ಬಿಡುಗಡೆ ಮಾಡಲಾಗುವುದು. ಆಸಕ್ತರು ಸಿಎಸ್ಆರ್ ನಿಧಿಯಡಿ ನಗರದ ಸೌಂದರ್ಯೀಕರಣಕ್ಕೆ ಕೈಜೋಡಿಸಬಹುದು ಎಂದು ಆಯುಕ್ತರು ಕರೆ ನೀಡಿದರು. ಸಭೆಯಲ್ಲಿ ಮುಖ್ಯ ಅಭಿಯಂತರರಾದ ಬಸವರಾಜ ಕಬಾಡೆ, ಕೆ.ವಿ. ರವಿ ಸೇರಿದಂತೆ ಪಾಲಿಕೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






















