ಬೆಂಗಳೂರು, ಜ.31 www.bengaluruwire.com : ಜೈಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ‘ಹೊಂದಿಸಿ ಬರೆಯಿರಿ’ ಖ್ಯಾತಿಯ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾರಥ್ಯದ ‘ತೀರ್ಥರೂಪ ತಂದೆಯವರಿಗೆ’ ಚಿತ್ರವು 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ (BIFFes) ಪ್ರೇಕ್ಷಕರ ಮನ ಗೆದ್ದಿದೆ.
ಚಿತ್ರೋತ್ಸವದ ಕನ್ನಡ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡ ಈ ಚಿತ್ರಕ್ಕೆ ಸಿನಿಪ್ರಿಯರು ಹಾಗೂ ವಿಮರ್ಶಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಹೊಸವರ್ಷದ ಆರಂಭದಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ, ಚಿತ್ರೋತ್ಸವದ ವೇದಿಕೆಯಲ್ಲಿ ಮತ್ತೊಮ್ಮೆ ಗಮನ ಸೆಳೆದಿದೆ. ಪ್ರದರ್ಶನದ ಬಳಿಕ ಮಾತನಾಡಿದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್, “ನಮ್ಮ ಚಿತ್ರವು ಪ್ರತಿಷ್ಠಿತ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.
ಬಹುದಿನಗಳ ನಂತರ ಒಂದು ಉತ್ತಮ ಕೌಟುಂಬಿಕ ಚಿತ್ರವನ್ನು ನೋಡಿದ ಅನುಭವವಾಯಿತು ಎಂದು ಪ್ರೇಕ್ಷಕರು ಹೇಳಿದ ಮಾತುಗಳು ನಮಗೆ ಪ್ರಶಸ್ತಿಗಿಂತಲೂ ದೊಡ್ಡದು,” ಎಂದು ಸಂತಸ ಹಂಚಿಕೊಂಡರು.

ಚಿತ್ರದಲ್ಲಿ ನಿಹಾರ್ ನಾಯಕನಾಗಿ ಮತ್ತು ರಚನಾ ಇಂದರ್ ನಾಯಕಿಯಾಗಿ ನಟಿಸಿದ್ದಾರೆ. ವಿಶೇಷವೆಂದರೆ, ಹಿರಿಯ ನಟಿ ಸಿತಾರಾ ಅವರು ದೀರ್ಘಾವಧಿಯ ನಂತರ ಈ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಮರಳಿದ್ದಾರೆ. ಅಜಿತ್ ಹಂದೆ ಮತ್ತು ರಾಜೇಶ್ ನಟರಂಗ ಅವರಂತಹ ಅನುಭವಿ ಕಲಾವಿದರು ತಾರಾಬಳಗಕ್ಕೆ ಮೆರುಗು ನೀಡಿದ್ದಾರೆ.
ತಮ್ಮ ಮೊದಲ ಚಿತ್ರವೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದಕ್ಕೆ ನಾಯಕ ನಿಹಾರ್ ಮುಖೇಶ್ ಹರ್ಷ ವ್ಯಕ್ತಪಡಿಸಿದರು. ಇನ್ನು ನಾಯಕಿ ರಚನಾ ಇಂದರ್ ಮಾತನಾಡಿ, “ಈ ಬಾರಿ ನನ್ನ ಅಭಿನಯದ ಎರಡು ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನವಾಗುತ್ತಿರುವುದು ಖುಷಿ ತಂದಿದೆ,” ಎಂದರು.
ಚಿತ್ರವು ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿದಿರುವುದರಿಂದಲೇ ಚಿತ್ರೋತ್ಸವದಂತಹ ವೇದಿಕೆಗೆ ಆಯ್ಕೆಯಾಗಿದೆ ಎಂದು ನಟ ಅಜಿತ್ ಹಂದೆ ಅಭಿಪ್ರಾಯಪಟ್ಟರು. ಒಟ್ಟಿನಲ್ಲಿ, ಭಾವನಾತ್ಮಕ ಕಥಾಹಂದರ ಹೊಂದಿರುವ ‘ತೀರ್ಥರೂಪ ತಂದೆಯವರಿಗೆ’ ಚಿತ್ರೋತ್ಸವದಲ್ಲಿ ಸಕಾರಾತ್ಮಕ ಅಲೆ ಎಬ್ಬಿಸಿದೆ.






















