ಬೆಂಗಳೂರು, ಜ.29 www.bengaluruwire.com : ಸಿನಿಮಾ ಎಂಬುದು ಕೇವಲ ಮೂರು ತಾಸಿನ ಮನರಂಜನೆಯ ಸರಕಾಗಬಾರದು. ಅದು ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ವಾಸ್ತವ ಸ್ಥಿತಿಯನ್ನು ಎತ್ತಿ ಹಿಡಿಯುವ ಮತ್ತು ಅಸಮಾನತೆಯ ವಿರುದ್ಧ ದನಿ ಎತ್ತುವ ಪ್ರಬಲ ಮಾಧ್ಯಮವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ನಗರದ ವಿಧಾನಸೌಧದ ಮುಂಭಾಗದ ಭವ್ಯ ಮೆಟ್ಟಿಲುಗಳ ಮೇಲೆ ಗುರುವಾರ ಸಂಜೆ ಆಯೋಜಿಸಲಾಗಿದ್ದ ’17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ವನ್ನು (BIFFes) ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿರುವ ಬಡತನ, ದಲಿತರು, ಹಿಂದುಳಿದವರು, ಮಹಿಳೆಯರು ಮತ್ತು ರೈತರ ಬದುಕಿನ ನೈಜ ಚಿತ್ರಣವನ್ನು ಸಿನಿಮಾಗಳು ಕಟ್ಟಿಕೊಡಬೇಕು. ಹಿಂದೆ ಡಾ. ರಾಜ್ಕುಮಾರ್ ಅವರ ಸಿನಿಮಾಗಳಲ್ಲಿ ಇಂತಹ ಸಾಮಾಜಿಕ ಕಳಕಳಿಯನ್ನು ನಾವು ಕಾಣಬಹುದಿತ್ತು. ಅಂತಹ ಮೌಲ್ಯಾಧಾರಿತ ಚಿತ್ರಗಳು ಹೆಚ್ಚು ಬರಬೇಕು. ಬೇರೆ ದೇಶಗಳ ಚಿತ್ರಗಳನ್ನು ನೋಡುವ ಮೂಲಕ ಅಲ್ಲಿನ ಸಂಸ್ಕೃತಿ, ರಾಜಕೀಯ ಮತ್ತು ಜೀವನವನ್ನು ಅರ್ಥಮಾಡಿಕೊಳ್ಳಲು ಚಿತ್ರೋತ್ಸವಗಳು ಸುವರ್ಣಾವಕಾಶ ಕಲ್ಪಿಸುತ್ತವೆ ಎಂದು ಸಿಎಂ ಅಭಿಪ್ರಾಯಪಟ್ಟರು.
ಮಹಿಳೆಯರಿಗೆ ಚಿತ್ರೋತ್ಸವ ಅರ್ಪಣೆ:

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಮಾತನಾಡಿ, “ಫೆಬ್ರವರಿ 6ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ 70 ದೇಶಗಳ ಸುಮಾರು 255 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ವಿಶೇಷವೆಂದರೆ, ಇದರಲ್ಲಿ 65 ಮಹಿಳಾ ನಿರ್ದೇಶಕರ ಚಿತ್ರಗಳಿವೆ. ಹೀಗಾಗಿ ಈ ಬಾರಿಯ ಚಿತ್ರೋತ್ಸವವನ್ನು ಮಹಿಳೆಯರಿಗೆ ಅರ್ಪಿಸಲಾಗಿದೆ. ಮೈಸೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆ ಹಾಗೂ ಅಕಾಡೆಮಿ ಕಟ್ಟಡದಲ್ಲಿ ಮಲ್ಟಿಪ್ಲೆಕ್ಸ್ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಿದೆ,” ಎಂದು ಮಾಹಿತಿ ನೀಡಿದರು.
ರಾಜಕೀಯ ಪ್ರವೇಶಕ್ಕೆ ಪ್ರಕಾಶ್ ರೈ ಆಕ್ಷೇಪ:
ಚಿತ್ರೋತ್ಸವದ ರಾಯಭಾರಿ ಹಾಗೂ ಹಿರಿಯ ನಟ ಪ್ರಕಾಶ್ ರೈ ಮಾತನಾಡಿ, “ಚಿತ್ರೋತ್ಸವಗಳು ರಂಗನತಿಟ್ಟು ಪಕ್ಷಿಧಾಮವಿದ್ದಂತೆ. ಇಲ್ಲಿ ದೇಶ-ವಿದೇಶದ ಸಿನಿಮಾ ಪಕ್ಷಿಗಳು ಒಂದಾಗುತ್ತವೆ. ಇಂತಹ ಸಾಂಸ್ಕೃತಿಕ ವೇದಿಕೆಗಳಲ್ಲಿ ರಾಜಕೀಯ ಬೆರೆಸುವುದು ದುರಂತ. ಕೆಲವು ದೇಶಗಳ ಸಿನಿಮಾಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ತಡೆ ಒಡ್ಡಿರುವುದನ್ನು ರಾಜ್ಯ ಸರ್ಕಾರ ವಿರೋಧಿಸಬೇಕು,” ಎಂದು ಮನವಿ ಮಾಡಿದರು. ಅಲ್ಲದೆ, ಪ್ಯಾಲೇಸ್ತೀನಿ ಸಿನಿಮಾಗಳಿಗೆ ಬೆಂಬಲ ಸೂಚಿಸಿ ಕವನ ವಾಚಿಸಿದರು.
ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಟಿವಿ ಮತ್ತು ಮೊಬೈಲ್ ಹಾವಳಿಯ ನಡುವೆಯೂ ಸಿನಿಮಾ ತನ್ನ ಮಹತ್ವ ಉಳಿಸಿಕೊಂಡಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಿಜ್ವಾನ್ ಅರ್ಷದ್, ನಟಿ ರುಕ್ಮಿಣಿ ವಸಂತ, ವಾರ್ತಾ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ನೆದರ್ಲ್ಯಾಂಡ್ ದೇಶದ ‘ಪೋರ್ಟ್ ಬ್ಯಾಗೇಜ್’ ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಂಡಿತು.
ಕಾರ್ಯಕ್ರಮದಲ್ಲಿ ಹಿರಿಯ ನಟಿ ಹಾಗೂ ಮಾಜಿ ಸಚಿವರಾದ ಉಮಾಶ್ರೀ ಹಾಗೂ ಹಿರಿಯ ನಟಿ ಡಾ. ಜಯಮಾಲ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ ನಿಂಬಾಳ್ಕರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ವಿನೋದ್ ಚಂದ್ರ, ಅಕಾಡೆಮಿ ಸದಸ್ಯ ಚಿದಾನಂದ ಪಟೇಲ್, ವಾರ್ತಾ ಇಲಾಖೆಯ ಚಲನಚಿತ್ರ ಶಾಖೆಯ ಜಂಟಿ ನಿರ್ದೇಶಕ ಮಂಜುನಾಥ್ ಡೊಳ್ಳಿನ್ , ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ನರಸಿಂಹಲು, ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಮುಖ್ಯಮಂತ್ರಿ ಚಂದ್ರು, ಚೇತನ್ ಅಹಿಂಸ, ಪೂಜಾ ಗಾಂಧಿ, ಶ್ರೀನಗರ ಕಿಟ್ಟಿ, ಶರತ್ ಲೋಹಿತಾಶ್ವ, ಅನು ಪ್ರಭಾಕರ್, ರಘು ಮುಖರ್ಜಿ, ರಾಕ್ಲೈನ್ ವೆಂಕಟೇಶ್, ಸುಂದರ್ ರಾಜ್ ಮುಂತಾದವರು ಹಾಜರಿದ್ದರು.
17ನೇ ಚಿತ್ರೋತ್ಸವದ ವಿಶೇಷತೆಗಳೇನು?:
* ಲುಲು ಮಾಲ್ ಆವರಣದಲ್ಲಿ ಪ್ರತಿದಿನ ಸಂಜೆ 7ಕ್ಕೆ ‘ಓಪನ್ ಏರ್ ಥಿಯೇಟರ್’ ಅಂದರೆ ಟೆಂಟ್ ಸಿನಿಮಾ ಮಾದರಿಯಲ್ಲಿ ಸಿನಿಮಾ ಪ್ರದರ್ಶನ.
* ಕನ್ನಡದ ಸಾಧಕರಿಗೆ ‘ಸಿನಿಮಾಯಾನ’ ಮೂಲಕ ಗೌರವ
* ವಿಶ್ವದ 100ಕ್ಕೂ ಹೆಚ್ಚು ಪ್ರಸಿದ್ಧ ವಿದೇಶಿ ಚಿತ್ರಗಳು ಹಾಗೂ 30ಕ್ಕೂ ಹೆಚ್ಚು ಭಾರತೀಯ ಭಾಷಾ ಚಿತ್ರಗಳ ವೀಕ್ಷಣೆ ಲಭ್ಯ























