ನವದೆಹಲಿ/ಬೆಂಗಳೂರು, ಜ.20 www.bengaluruwire.com :ಮುಂಬರುವ ಜಿಬಿಎ (GBA) ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ, ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಚುನಾವಣಾ ತಯಾರಿಯನ್ನು ಅಧಿಕೃತವಾಗಿ ಆರಂಭಿಸಿದೆ.
ಈ ನಿಟ್ಟಿನಲ್ಲಿ ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್, ಚುನಾವಣಾ ಉಸ್ತುವಾರಿ ಹಾಗೂ ಉಪ ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ನಡೆ ಮೂಲಕ ಬಿಜೆಪಿ ಹೈಕಮಾಂಡ್, ಜಿಬಿಎ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪಕ್ಷದ ಸಂಘಟನೆಯನ್ನು ಬಲಪಡಿಸಲು ಮತ್ತು ಚುನಾವಣೆಯಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸಿದೆ ಎಂಬುದು ಸ್ಪಷ್ಟವಾಗಿದೆ.
ಹೈಕಮಾಂಡ್ ನೇರ ಉಸ್ತುವಾರಿ:

ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ರಾಜ್ಯ ಘಟಕಗಳೇ ನಿರ್ವಹಿಸುವುದು ವಾಡಿಕೆ. ಆದರೆ, ಜಿಬಿಎ ಚುನಾವಣೆ ರಾಜಕೀಯವಾಗಿ ಮಹತ್ವದ್ದಾಗಿರುವುದರಿಂದ, ಸ್ವತಃ ರಾಷ್ಟ್ರೀಯ ನಾಯಕರೇ ಅಖಾಡಕ್ಕಿಳಿದಿದ್ದಾರೆ. ನೂತನ ರಾಷ್ಟ್ರಾಧ್ಯಕ್ಷರ ಆದೇಶದನ್ವಯ, ಹಿರಿಯ ನಾಯಕರಿಗೆ ಚುನಾವಣಾ ಉಸ್ತುವಾರಿಯ ಜವಾಬ್ದಾರಿಯನ್ನು ನೀಡಲಾಗಿದ್ದು, ಅವರಿಗೆ ಸಾಥ್ ನೀಡಲು ಉಪ ಉಸ್ತುವಾರಿಗಳನ್ನೂ ನೇಮಿಸಲಾಗಿದೆ.
ಕಾರ್ಯಕರ್ತರಲ್ಲಿ ಉತ್ಸಾಹ:
ಚುನಾವಣಾ ಉಸ್ತುವಾರಿಗಳ ನೇಮಕದ ಸುದ್ದಿ ಹೊರಬೀಳುತ್ತಿದ್ದಂತೆಯೇ ಪಕ್ಷದ ವಲಯದಲ್ಲಿ ಹೊಸ ಸಂಚಲನ ಮೂಡಿದೆ. ಟಿಕೆಟ್ ಆಕಾಂಕ್ಷಿಗಳು ಹಾಗೂ ಸ್ಥಳೀಯ ಮುಖಂಡರು ಸಕ್ರಿಯರಾಗಿದ್ದು, ವರಿಷ್ಠರ ಮನ ಗೆಲ್ಲಲು ಕಸರತ್ತು ಆರಂಭಿಸಿದ್ದಾರೆ.
“ಇದು ಕೇವಲ ಉಸ್ತುವಾರಿಗಳ ನೇಮಕವಲ್ಲ, ಬದಲಿಗೆ ಜಿಬಿಎ ಚುನಾವಣೆಗೆ ನಾವು ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿದ್ದೇವೆ ಎಂಬುದರ ಸಂದೇಶ,” ಎಂದು ಪಕ್ಷದ ಮೂಲಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ ಪ್ರಚಾರದ ಭರಾಟೆ, ಸಭೆ-ಸಮಾರಂಭಗಳು ಜೋರಾಗಲಿದ್ದು, ವಿರೋಧ ಪಕ್ಷಗಳಿಗೆ ಸೆಡ್ಡು ಹೊಡೆಯಲು ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಂತಿದೆ.
ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಜಿಬಿಎ ಅಡಿಯಲ್ಲಿನ ಐದು ನಗರ ಪಾಲಿಕೆಗಳಿಗೆ ಜೂ.30 ರ ಒಳಗಾಗಿ ಪಾಲಿಕೆ ಚುನಾವಣೆ ನಡೆಸುವಂತೆ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಪಾಲಿಕೆಯಲ್ಲಿ ಮೇಯರ್ ಆಡಳಿತವಿಲ್ಲದೆ 2020ರ ಸೆಪ್ಟೆಂಬರ್ ನಿಂದ ವಾರ್ಡ್ ಗಳಿಂದ ಹಿಡಿದು ಕೇಂದ್ರ ಕಚೇರಿವರೆಗೆ ಅಧಿಕಾರಿಗಳದ್ದೇ ಕಾರುಬಾರು ಜೋರಾಗಿ ನಡೆಯುತ್ತಿದೆ. ಇನ್ನಾದರೂ ಪಾಲಿಕೆ ಚುನಾವಣೆ ನಡೆದಲ್ಲಿ ಜನಪ್ರತಿನಿಧಿಗಳ ಆಡಳಿತ ಹೊಸ ಜಿಬಿಎನಲ್ಲಿ ಕಾಣಬಹುದು.























