ಉಡುಪಿ, ಜ.18 www.bengaluruwire.com : ಭಾನುವಾರ ಬೆಳಗಿನ ಜಾವದ ಬ್ರಾಹ್ಮೀ ಮುಹೂರ್ತದಲ್ಲಿ ದ್ವೈತ ಮತ ಸಿದ್ದಾಂತದ ಪ್ರತಿಪಾದಕ ಶ್ರೀ ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನವಾದ ಉಡುಪಿ ಶ್ರೀ ಕೃಷ್ಣಮಠದಲ್ಲಿ ಐತಿಹಾಸಿಕ ಕ್ಷಣವೊಂದು ದಾಖಲಾಯಿತು.
ಶೀರೂರು ಮಠದ 31ನೇ ಯತಿಗಳಾದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ತಮ್ಮ ಪ್ರಥಮ ಪರ್ಯಾಯ ಪೂಜಾಧಿಕಾರವನ್ನು ಅಧಿಕೃತವಾಗಿ ಸ್ವೀಕರಿಸಿದರು.
ಇದು ಉಡುಪಿ ಕೃಷ್ಣಮಠದ ಇತಿಹಾಸದಲ್ಲಿ ನಡೆಯುತ್ತಿರುವ 253ನೇ ದ್ವೈವಾರ್ಷಿಕ ಪರ್ಯಾಯ ಮಹೋತ್ಸವವಾಗಿದ್ದು, ಅತ್ಯಂತ ಕಿರಿಯ ವಯಸ್ಸಿನ ಯತಿಯೊಬ್ಬರು ಸರ್ವಜ್ಞ ಪೀಠವೇರಿರುವುದು ಈ ಬಾರಿಯ ವಿಶೇಷವಾಗಿದೆ.
ಅಕ್ಷಯ ಪಾತ್ರೆ ಹಸ್ತಾಂತರ ಮತ್ತು ಪೀಠಾರೋಹಣ:


ಪರ್ಯಾಯ ಪೂಜಾಧಿಕಾರವನ್ನು ಪೂರ್ಣಗೊಳಿಸಿದ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ನೂತನ ಪರ್ಯಾಯ ಮಠಾಧೀಶರಾದ ಶೀರೂರು ಶ್ರೀಗಳನ್ನು ಕೃಷ್ಣಮಠದ ದ್ವಾರದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು. ಬೆಳಗ್ಗೆ 5:45ರ ಸುಮಾರಿಗೆ ಮಧ್ವಾಚಾರ್ಯರಿಂದ ಪರಂಪರಾಗತವಾಗಿ ಬಂದಿರುವ ‘ಅಕ್ಷಯ ಪಾತ್ರೆ’ ಹಾಗೂ ಬೆಳ್ಳಿಯ ಸಟ್ಟುಗ ಮತ್ತು ಬೀಗದ ಕೈಯನ್ನು ಹಸ್ತಾಂತರಿಸುವ ಮೂಲಕ ಅಧಿಕಾರ ಹ ವರ್ಗಾವಣೆ ಪ್ರಕ್ರಿಯೆ ನೆರವೇರಿತು. ನಂತರ ಶೀರೂರು ಶ್ರೀಗಳನ್ನು ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿ ಶುಭ ಹಾರೈಸಲಾಯಿತು. ಶ್ರೀ ವೇದವರ್ಧನ ತೀರ್ಥರು ತಾಯಿಯ ಪಾದಕ್ಕೆ ನಮಿಸಿ ಸರ್ವಜ್ಞ ಪೀಠ ಏರಿದರು.

ಬಡಗು ಮಾಳಿಗೆಯ ಅರಳು ಗದ್ದುಗೆಯನ್ನು ತೆಂಗಿನ ಮರದ ಗರಿಯಲ್ಲಿ ಸಿಂಗರಿಸಲಾಗಿತ್ತು. ಈ ಗದ್ದುಗೆಯಲ್ಲಿ ಉಡುಪಿ ಅಷ್ಟ ಮಠಾಧೀಶರಿಗೆ ಮಾಲಿಕೆ ಮಂಗಳಾರತಿ ಕೈಗೊಳ್ಳಲಾಯಿತು.

ವೈಭವದ ಪರ್ಯಾಯ ಮೆರವಣಿಗೆ:

ಇದಕ್ಕೂ ಮುನ್ನ ಬೆಳಗಿನ ಜಾವ 1:30ಕ್ಕೆ ಕಾಪು ತಾಲೂಕಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮುಗಿಸಿದ ಶೀರೂರು ಶ್ರೀಗಳು, ಜೋಡುಕಟ್ಟೆಯಿಂದ ಬೆಳಗ್ಗೆ 3 ಗಂಟೆಗೆ ಆರಂಭವಾದ ವೈಭವದ ಪರ್ಯಾಯ ಮೆರವಣಿಗೆಯಲ್ಲಿ ಪಾಲ್ಗೊಂಡರು. 90ಕ್ಕೂ ಅಧಿಕ ಸಾಂಸ್ಕೃತಿಕ ಕಲಾತಂಡಗಳು, ಆಕರ್ಷಕ ಸ್ತಬ್ಧಚಿತ್ರಗಳು, ಭಜನಾ ಮಂಡಳಿಗಳು ಮೆರವಣಿಗೆಗೆ ಮೆರುಗು ನೀಡಿದವು. ಶೀರೂರು ಶ್ರೀಗಳು ಮೇನೆಯಲ್ಲಿ (ಪಲ್ಲಕ್ಕಿ) ಕುಳಿತು ಸಾಗಿದರೆ, ಉಳಿದ ಆರು ಮಠಾಧೀಶರು ವಾಹನ ಪಲ್ಲಕ್ಕಿಯಲ್ಲಿ ಹಿಂಬಾಲಿಸಿದರು. ದಿವಂಗತ ಶೀರೂರು ಲಕ್ಷ್ಮೀವರ ತೀರ್ಥರ ಪ್ರತಿಕೃತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವ ಮೂಲಕ ಗುರುವಂದನೆ ಸಲ್ಲಿಸಲಾಯಿತು.
ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ:

ಮೆರವಣಿಗೆಯ ಮೂಲಕ ರಥಬೀದಿ ಪ್ರವೇಶಿಸಿದ ಶ್ರೀಗಳು, ಬೆಳಗ್ಗೆ 5:15ಕ್ಕೆ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀ ಕೃಷ್ಣಮಠ ಪ್ರವೇಶಿಸಿದರು.
ರಾಜಾಂಗಣದಲ್ಲಿ ಅದ್ಧೂರಿ ದರ್ಬಾರ್:

ಪೀಠಾರೋಹಣದ ಬಳಿಕ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಗ್ಗೆ 6.15ಕ್ಕೆ ಆರಂಭವಾದ ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ಅಷ್ಟಮಠಾಧೀಶರು, ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ, ಇಸ್ಕಾನ್ ಅಧ್ಯಕ್ಷ ಮಧುಪಂಡಿತ್ ದಾಸ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಮಾಜಿ ಶಾಸಕರಾದ ರಘುಪತಿ ಭಟ್, ಇನ್ನಿತರ ರಾಜಕೀಯ ಗಣ್ಯರು, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಎಸ್.ಭಟ್, ಕೆನರಾ ಬ್ಯಾಂಕ್ ಎಂಡಿ ಹರಿದೀಪ್ ಸಿಂಗ್ ಅಹ್ಲುವಾಲಿಯಾ, ಆಭರಣ ಟೈಮ್ ಲೆಸ್ ಜ್ಯುವೆಲ್ಲರಿ ಎಂಡಿ ಡಾ.ಪ್ರತಾಪ್ ಮಧುಕರ್ ಕಾಮತ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ತಿರುಪತಿ, ಮಂತ್ರಾಲಯ, ಶ್ರೀರಂಗಮ್ ಸೇರಿದಂತೆ ದೇಶದ ಪ್ರಮುಖ ದೇವಾಲಯಗಳಿಂದ ತಂದಿದ್ದ ಪ್ರಸಾದವನ್ನು ಯತಿಗಳಿಗೆ ಸಮರ್ಪಿಸಲಾಯಿತು.

ಅಷ್ಟಮಠಾಧೀಶರ ಆಶೀರ್ವಚನ ಸಾರಾಂಶ:
ಶ್ರೀ ವಿದ್ಯಾಸಾಗರ ತೀರ್ಥರು (ಕೃಷ್ಣಾಪುರ ಮಠ): “ಸ್ವಯಂ ಉದ್ಧಾರ ಎಂದರೆ ಪ್ರಚಾರದ ದಾನ-ಧರ್ಮವಲ್ಲ. ದೇವರ ಪ್ರೀತಿಗಾಗಿ ಪ್ರಚಾರವಿಲ್ಲದೆ ಮಾಡುವ ಕಾರ್ಯವೇ ನಿಜವಾದ ಸೇವೆ. ಶೀರೂರು ಶ್ರೀಗಳ ಪರ್ಯಾಯ ಅವಧಿಯಲ್ಲಿ ಧರ್ಮ ಜಾಗೃತಿಯಾಗಲಿ.”
ಶ್ರೀ ವಿದ್ಯಾಧೀಶ ತೀರ್ಥರು (ಪಲಿಮಾರು ಮಠ): “ಗೋವುಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯ. ವಾಮನ ಪರಂಪರೆಯ ಶೀರೂರು ಶ್ರೀಗಳು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿ ಹೊತ್ತಿದ್ದು, ದೇಶಕ್ಕೆ ಒಳಿತಾಗಲಿ.”
ಶ್ರೀ ವಿಶ್ವಪ್ರಸನ್ನ ತೀರ್ಥರು (ಪೇಜಾವರ ಮಠ): “ನಮ್ಮ ಗುರುಗಳು ಪರ್ಯಾಯ ಸ್ವೀಕರಿಸುವಾಗ ಇದ್ದ ವಯಸ್ಸು ಈಗಿನ ಶೀರೂರು ಶ್ರೀಗಳದ್ದು. ಪುಟ್ಟ ಕೈಗಳಲ್ಲಿ ದೊಡ್ಡ ಜವಾಬ್ದಾರಿ ಇದೆ, ಇದಕ್ಕೆ ನಾವೆಲ್ಲರೂ ಬೆಂಬಲ ನೀಡುತ್ತೇವೆ.”
ಮೈಸೂರು ಮಹಾರಾಜ ಯದುವೀರ್ ಒಡೆಯರ್: “ಮೈಸೂರು ಸಂಸ್ಥಾನ ಮತ್ತು ಉಡುಪಿ ಕೃಷ್ಣಮಠಕ್ಕೆ 200 ವರ್ಷಗಳ ಅವಿನಾಭಾವ ಸಂಬಂಧವಿದೆ. ಧಾರ್ಮಿಕ ರಕ್ಷಣೆಯ ವಿಷಯದಲ್ಲಿ ಮೈಸೂರು ಅರಮನೆ ಸದಾ ಕೃಷ್ಣಮಠದ ಜತೆಗಿರುತ್ತದೆ,” ಎಂದು ಭರವಸೆ ನೀಡಿದರು.
ಬೆಳಿಗ್ಗೆ 10:30ಕ್ಕೆ ನೂತನ ಪರ್ಯಾಯ ಯತಿಗಳಿಂದ ಶ್ರೀಕೃಷ್ಣನಿಗೆ ಪ್ರಥಮ ಮಹಾಪೂಜೆ ನೆರವೇರಿತು.























