ಬೆಂಗಳೂರು, ಜ.15 www.bengaluruwire.com : ಅದು ಬಿಡದಿಯ ತೋಟದ ಮನೆ. ಅಲ್ಲಿ ನೆರೆದಿದ್ದವರು ರಾಜಕೀಯ ನಾಯಕರು ಅಥವಾ ಕಾರ್ಯಕರ್ತರಲ್ಲ, ಬದಲಿಗೆ ಬದುಕು ಕಟ್ಟಿಕೊಂಡ ಸಂತೃಪ್ತ ಜೀವಗಳು.
ಬೆಸ್ಕಾಂ ಹಾಗೂ ಕೆಪಿಟಿಸಿಎಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ವಿಕಲಚೇತನ ನೌಕರರು ತಮ್ಮ ಕುಟುಂಬ ಸಮೇತ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸಂಕ್ರಾಂತಿ ಆಚರಿಸಿದ ಕ್ಷಣಗಳು ಭಾವನಾತ್ಮಕವಾಗಿತ್ತು.
ಕಳೆದ ಏಳು ವರ್ಷಗಳಿಂದ ತಪ್ಪದೇ ತಮ್ಮ ‘ಬದುಕು ನೀಡಿದ ನಾಯಕ’ನೊಂದಿಗೆ ಹಬ್ಬ ಆಚರಿಸುತ್ತಿರುವ ಈ ನೌಕರರು, ಬುಧವಾರ (ಜ.14) ಹೆಚ್ಡಿಕೆ ಅವರಿಗೆ ಎಳ್ಳುಬೆಲ್ಲ ತಿನ್ನಿಸಿ ಸಂಭ್ರಮಿಸಿದರು. ತಮ್ಮಿಂದಾಗಿ ಬದುಕು ಕಂಡುಕೊಂಡ ನೂರಾರು ಕುಟುಂಬಗಳನ್ನು ಒಟ್ಟಿಗೆ ಕಂಡ ಕುಮಾರಸ್ವಾಮಿ ಅವರ ಕಣ್ಣಂಚಲಿ ನೀರು ಜಾರಿತು.
ವಿಶೇಷ ಚೇತನರ ಬದುಕು ಬದಲಿಸಿದ ನಿರ್ಧಾರ:

ಈ ಬಾಂಧವ್ಯದ ಹಿಂದೆ ದೊಡ್ಡ ಕಥೆಯಿದೆ. ಮಾನವತೆಯ ದೃಷ್ಟಿಯಿದೆ. 2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಜನತಾ ದರ್ಶನಕ್ಕೆ ಬಂದಿದ್ದ ವಿಕಲಚೇತನರ ಕಷ್ಟ ಕಂಡು, 600ಕ್ಕೂ ಹೆಚ್ಚು ಜನರಿಗೆ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ನೀಡಿದ್ದರು. ಮುಂದೆ 2018ರಲ್ಲಿ ಮತ್ತೆ ಸಿಎಂ ಆದಾಗ, 2019ರ ಸಂಕ್ರಾಂತಿಯಂದೇ ಇವರೆಲ್ಲರ ಸೇವೆಯನ್ನು ಕಾಯಂ ಮಾಡಿದರು.
“ಅಂದು 3,000 ರೂ. ಇದ್ದ ನಮ್ಮ ಸಂಬಳ, ಕುಮಾರಣ್ಣನ ಕೃಪೆಯಿಂದ ಇಂದು 80 ಸಾವಿರದಿಂದ 1 ಲಕ್ಷದವರೆಗೆ ತಲುಪಿದೆ. ನಾವು ಸ್ವಂತ ಮನೆ ಕಟ್ಟಿದ್ದೇವೆ, ಕಾರು ಖರೀದಿಸಿದ್ದೇವೆ. ನಮ್ಮ ಮಕ್ಕಳ ಭವಿಷ್ಯ ರೂಪಿಸುತ್ತಿದ್ದೇವೆ. ಇದಕ್ಕೆಲ್ಲ ಕಾರಣಕರ್ತರು ಕುಮಾರಸ್ವಾಮಿಯವರು,” ಎಂದು ನೌಕರರು ಕೃತಜ್ಞತೆ ಸಲ್ಲಿಸಿದಾಗ ಸ್ಥಳದಲ್ಲಿ ಭಾವುಕ ವಾತಾವರಣ ನಿರ್ಮಾಣವಾಯಿತು.
ನಿಮ್ಮ ಪ್ರೀತಿಯೇ ಶ್ರೀರಕ್ಷೆ:
ನೌಕರರ ಮಾತು ಕೇಳಿ ಗದ್ಗರಿತರಾದ ಸಚಿವರು, “ದೇವರು ಕೊಟ್ಟ ಸಣ್ಣ ಅಧಿಕಾರದಲ್ಲಿ ನಿಮಗೆ ಸಹಾಯ ಮಾಡುವ ಅವಕಾಶ ಸಿಕ್ಕಿತು. ನಿಮ್ಮ ಬದುಕು ಹಸನಾಗಿರುವುದನ್ನು ನೋಡುವುದೇ ನನಗೆ ಸಿಕ್ಕ ದೊಡ್ಡ ಉಡುಗೊರೆ. ದೈಹಿಕವಾಗಿ ಶಕ್ತಿ ಇಲ್ಲದವರಿಗಾಗಿ ನನ್ನ ಹೃದಯ ಸದಾ ಮಿಡಿಯುತ್ತದೆ. ನಿಮ್ಮ ಈ ಪ್ರೀತಿ, ಹಾರೈಕೆಯೇ ನನಗೆ ಶ್ರೀರಕ್ಷೆ,” ಎಂದು ನುಡಿದರು. ಅಲ್ಲದೆ, ಮಕ್ಕಳನ್ನು ಚೆನ್ನಾಗಿ ಓದಿಸುವಂತೆ ಕಿವಿಮಾತು ಹೇಳಿದರು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.























