ಬೆಂಗಳೂರು, ಜ.13 www.bengaluruwire.com : ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕೇಂದ್ರ ಕಚೇರಿಯ ಆವರಣದಲ್ಲಿರುವ, ಸುಮಾರು 800 ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಶ್ರೀ ಆದಿಶಕ್ತಿ ದೇವಾಲಯವು ಸಂಪೂರ್ಣವಾಗಿ ಜೀರ್ಣೋದ್ಧಾರಗೊಂಡಿದ್ದು, ಲೋಕಾರ್ಪಣೆಗೆ ಸಜ್ಜಾಗಿದೆ.
ವಿಶೇಷವೆಂದರೆ, ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಅಯೋಧ್ಯೆಯ ರಾಮಲಲ್ಲಾನ ವಿಗ್ರಹ ಕೆತ್ತನೆಗೆ ಬಳಸಲಾದ ಶಿಲೆಯಿಂದಲೇ ನಿರ್ಮಿಸಲಾದ ಶಕ್ತಿ ದೇವತೆಗಳ ಮೂರ್ತಿಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ.
ತಿಗಳರ ಪೇಟೆಯ ವಿಶ್ವವಿಖ್ಯಾತ ಕರಗದ ಶ್ರೀ ಧರ್ಮರಾಯಸ್ವಾಮಿ ಮತ್ತು ದ್ರೌಪದಮ್ಮ ದೇವಿ ದೇವಾಲಯಗಳ ಮೂಲ ನೆಲೆ ಎಂದೇ ನಂಬಲಾಗಿರುವ ಈ ಪುರಾತನ ದೇವಾಲಯವು ಕಾಲಕ್ರಮೇಣ ಶಿಥಿಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ದೇವಾಲಯದ ನವೀಕರಣಕ್ಕೆ ಪಣತೊಟ್ಟಿತು. ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ಅವರ ನೇತೃತ್ವದಲ್ಲಿ, ಪ್ರತಿ ನೌಕರರಿಂದ ದೇಣಿಗೆ ಸಂಗ್ರಹಿಸಿ ಮತ್ತು ಸಂಘದ ವತಿಯಿಂದ ಒಟ್ಟು 1.60 ಕೋಟಿ ರೂ. ಹಾಗೂ ಬಿಬಿಎಂಪಿ ನೌಕರರ ಸಹಕಾರ ಸಂಘದಿಂದ 20 ಲಕ್ಷ ರೂ.ಗಳ ವೆಚ್ಚದಲ್ಲಿ ದೇವಾಲಯವನ್ನು ಅದ್ದೂರಿಯಾಗಿ ಜೀರ್ಣೋದ್ಧಾರ ಮಾಡಲಾಗಿದೆ.
ಅಯೋಧ್ಯೆ ಕಲ್ಲಿನ ವಿಗ್ರಹಗಳ ಆಕರ್ಷಣೆ:

ದೇವಾಲಯದ ನವೀಕರಣದ ಭಾಗವಾಗಿ, ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹಕ್ಕೆ ಬಳಸಲಾದ ವಿಶೇಷ ಕೃಷ್ಣಶಿಲೆಯಿಂದ ತಯಾರಿಸಲಾದ ಕನಕದುರ್ಗ ದೇವಿ, ಪ್ರತ್ಯಂಗಿರಾ ದೇವಿ, ಸ್ಕಂದಮಾತ ದೇವಿ, ರಾಜರಾಜೇಶ್ವರಿ ದೇವಿ, ಮಹಿಷಾಸುರ ಮರ್ದಿನಿ ಹಾಗೂ ಚಾಮುಂಡೇಶ್ವರಿ ದೇವಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿರುವುದು ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ.

ಧಾರ್ಮಿಕ ಕಾರ್ಯಕ್ರಮದ ವಿವರ:
ಜನವರಿ 21, 2026 ರಿಂದ ಜನವರಿ 23 ರವರೆಗೆ ಮೂರು ದಿನಗಳ ಕಾಲ ವಿಧಿಬದ್ಧವಾಗಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಜ.23 ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೂತನ ದೇವಾಲಯವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಸಮಾರಂಭದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಶಾಸಕರಾದ ಎನ್.ಎ. ಹ್ಯಾರಿಸ್, ರಿಜ್ವಾನ್ ಅರ್ಷದ್, ಜಿಬಿಎ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ನಾಡಿನ ಖ್ಯಾತ ಆಗಮ ಶಾಸ್ತ್ರಜ್ಞ ಡಾ.ಭಾನು ಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಗಣಹೋಮ, ನವ ಚಂಡಿಕಾಯಾಗ, ಕುಂಭಾಭಿಷೇಕ ಸೇರಿದಂತೆ ವಿವಿಧ ಹೋಮ-ಹವನಗಳು ನೆರವೇರಲಿವೆ. ಅದ್ದೂರಿ ಮೆರವಣಿಗೆಗಾಗಿ ನೊಣವಿನಕೆರೆ ಮತ್ತು ಐರಣಿ ಮಠಗಳಿಂದ ಆನೆಗಳನ್ನು ಕರೆಸಲಾಗುತ್ತಿದ್ದು, ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘವು ತಿಳಿಸಿದೆ.























