ಬೆಂಗಳೂರು, ಜ.06 www.bengaluruwire.com : ರಾಜಧಾನಿಯ ರಿಯಲ್ ಎಸ್ಟೇಟ್ ವಲಯದಲ್ಲಿ ತಲ್ಲಣ ಮೂಡಿಸುವಂತಹ ಬೃಹತ್ ಅಕ್ರಮ ನೋಂದಣಿ ಹಗರಣವೊಂದು ಬೆಳಕಿಗೆ ಬಂದಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ‘ಕಾವೇರಿ-2’ ತಂತ್ರಾಂಶದಲ್ಲಿನ ಲೋಪಗಳನ್ನು ಬಳಸಿಕೊಂಡು, ನ್ಯಾಯಾಲಯದ ಆದೇಶವಿದೆ ಎಂದು ಸುಳ್ಳು ಮಾಹಿತಿ ನೀಡಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಗಳನ್ನು ಅಕ್ರಮವಾಗಿ ನೋಂದಣಿ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಜಾಪುರ, ಬಾಣಸವಾಡಿ, ವರ್ತೂರು ಮತ್ತು ಹಲಸೂರು ಉಪನೋಂದಣಿ ಕಚೇರಿಯ ಐವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ಮುದ್ರಾಂಕಗಳ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಇನ್ಫೋಸಿಸ್ ಭೂಮಿಗೆ ಕನ್ನ? ಸರ್ಜಾಪುರದಲ್ಲಿ ಮಹಾ ಮೋಸ:
ಸರ್ಜಾಪುರ ಉಪನೋಂದಣಿ ಕಚೇರಿಯಲ್ಲಿ ನಡೆದಿರುವ ಅವ್ಯವಹಾರ ಬೆಚ್ಚಿಬೀಳಿಸುವಂತಿದೆ. ಇನ್ಫೋಸಿಸ್ ಲಿಮಿಟೆಡ್ ಕಂಪನಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ನಿಯಮಬಾಹಿರವಾಗಿ ಖಾಸಗಿ ಕಂಪನಿಯೊಂದಕ್ಕೆ ಪರಭಾರೆ ಮಾಡಲಾಗಿದೆ. ಸರ್ಜಾಪುರ ಉಪನೋಂದಣಾಧಿಕಾರಿ ರವಿ ಸಂಕನಗೌಡ ಎಸ್. ಅವರು, ಯಾವುದೇ ನೈಜ ಸಿವಿಲ್ ನ್ಯಾಯಾಲಯದ ಆದೇಶವಿಲ್ಲದಿದ್ದರೂ, ತಂತ್ರಾಂಶದಲ್ಲಿ ‘Conveyance of decree or final order of any Civil Court’ (ಸಬ್-ಆರ್ಟಿಕಲ್ 20) ಎಂಬ ಆಯ್ಕೆಯನ್ನು ಬಳಸಿಕೊಂಡು ಇನ್ಫೋಸಿಸ್ ಆಸ್ತಿಯನ್ನು ನೋಂದಣಿ ಮಾಡಿದ್ದಾರೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರದ 2014ರ ಸುತ್ತೋಲೆಯಂತೆ ಗ್ರಾಮಾಂತರ ಪ್ರದೇಶದ ಆಸ್ತಿಗಳಿಗೆ ‘ಇ-ಸ್ವತ್ತು’ ಕಡ್ಡಾಯವಾಗಿದ್ದರೂ, ಇನ್ಫೋಸಿಸ್ ಕಂಪನಿಯ ಹೆಸರಿನಲ್ಲಿದ್ದ ಆಸ್ತಿಯ ಮಾಲೀಕತ್ವದ ವಿವರಗಳನ್ನು ಭೂಮಿ ತಂತ್ರಾಂಶದಿಂದ ಆಮದು ಮಾಡಿಕೊಳ್ಳುವಾಗ ಭೌತಿಕವಾಗಿ ತಿದ್ದಲಾಗಿದೆ. ಸುಮಾರು 24ಕ್ಕೂ ಹೆಚ್ಚು ಕ್ರಯಪತ್ರಗಳನ್ನು ಈ ರೀತಿ ಅಕ್ರಮವಾಗಿ ನೋಂದಣಿ ಮಾಡಲಾಗಿದ್ದು, ರವಿ ಸಂಕನಗೌಡ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.
ತಂತ್ರಾಂಶದ ಲೋಪ ದುರ್ಬಳಕೆ ಮಾಡಿಕೊಂಡ ಆರೋಪ ಹೊತ್ತ ಅಧಿಕಾರಿಗಳು:
ಕೇವಲ ಸರ್ಜಾಪುರ ಮಾತ್ರವಲ್ಲದೆ, ನಗರದ ಇತರ ಕಚೇರಿಗಳಲ್ಲೂ ಇದೇ ಮಾದರಿಯ ಅಕ್ರಮಗಳು ನಡೆದಿವೆ. ಕಾವೇರಿ-2 ತಂತ್ರಾಂಶದಲ್ಲಿ ನ್ಯಾಯಾಲಯದ ಆದೇಶವಿದ್ದರೆ ಇ-ಸ್ವತ್ತು ಅಥವಾ ಖಾತಾ ಇಲ್ಲದಿದ್ದರೂ ನೋಂದಣಿಗೆ ಅವಕಾಶವಿರುವುದನ್ನೇ ಬಂಡವಾಳ ಮಾಡಿಕೊಂಡ ಅಧಿಕಾರಿಗಳು, ಸುಳ್ಳು ಕಾರಣಗಳನ್ನು ನಮೂದಿಸಿ ದಸ್ತಾವೇಜುಗಳನ್ನು ನೋಂದಾಯಿಸಿದ್ದಾರೆ.
ಅಮಾನತಾದ ಅಧಿಕಾರಿಗಳ ವಿವರ:
ಜಿಲ್ಲಾ ನೋಂದಣಾಧಿಕಾರಿಗಳ ತನಿಖಾ ವರದಿಯ ಅನ್ವಯ, ಈ ಕೆಳಕಂಡ ಅಧಿಕಾರಿಗಳು ಸರ್ಕಾರದ ಸುತ್ತೋಲೆಗಳನ್ನು ಗಾಳಿಗೆ ತೂರಿ ಕರ್ತವ್ಯಲೋಪ ಎಸಗಿದ್ದಾರೆ:
* ರವಿ ಸಂಕನಗೌಡ ಎಸ್. (ಉಪನೋಂದಣಾಧಿಕಾರಿ, ಸರ್ಜಾಪುರ): ಇನ್ಫೋಸಿಸ್ ಆಸ್ತಿ ಪ್ರಕರಣ ಮತ್ತು ನಕಲಿ ಕೋರ್ಟ್ ಆದೇಶ ಆಯ್ಕೆ ಬಳಕೆ.
* ಪ್ರಭಾವತಿ (ಹಿರಿಯ ಉಪನೋಂದಣಾಧಿಕಾರಿ, ಹಲಸೂರು): ಇ-ಸ್ವತ್ತು ಮಾಹಿತಿ ಇಲ್ಲದೆ 12 ದಸ್ತಾವೇಜುಗಳ ಅಕ್ರಮ ನೋಂದಣಿ.
* ಶ್ರೀಧರ್ (ಪ್ರಥಮ ದರ್ಜೆ ಸಹಾಯಕ/ ಪ್ರಭಾರ ಸಬ್-ರಿಜಿಸ್ಟ್ರಾರ್, ಬಾಣಸವಾಡಿ): 3 ದಸ್ತಾವೇಜುಗಳ ನಿಯಮಬಾಹಿರ ನೋಂದಣಿ.
* ಗಿರೀಶ್ಚಂದ್ರ (ಉಪನೋಂದಣಾಧಿಕಾರಿ, ವರ್ತೂರು): ಬಾಣಸವಾಡಿಯಲ್ಲಿ 1 ಮತ್ತು ವರ್ತೂರಿನಲ್ಲಿ 14 ಸೇರಿ ಒಟ್ಟು 15 ದಸ್ತಾವೇಜುಗಳ ಅಕ್ರಮ ನೋಂದಣಿ.
* ಸತೀಶ್ ಕುಮಾರ್ ಎನ್. (ಉಪನೋಂದಣಾಧಿಕಾರಿ, ಬಾಣಸವಾಡಿ): ಬರೋಬ್ಬರಿ 28 ದಸ್ತಾವೇಜುಗಳನ್ನು ಇ-ಸ್ವತ್ತು ಇಲ್ಲದೆ ನೋಂದಣಿ ಮಾಡಿದ ಆರೋಪ.
ಸಾಕ್ಷ್ಯ ನಾಶದ ಭೀತಿ: ಕೇಂದ್ರ ಕಚೇರಿಗೆ ಎತ್ತಂಗಡಿ:
ಈ ಅಧಿಕಾರಿಗಳನ್ನು ಅದೇ ಹುದ್ದೆಯಲ್ಲಿ ಮುಂದುವರೆಸಿದರೆ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆಯಿದೆ ಎಂದು ಪರಿಗಣಿಸಿರುವ ನೋಂದಣಿ ಮಹಾಪರಿವೀಕ್ಷಕ ಮತ್ತು ಮುದ್ರಾಂಕಗಳ ಆಯುಕ್ತ ಮುಲ್ಲೈ ಮುಹಿಲನ್, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1957ರ ನಿಯಮ 10(1)(ಡಿ) ಅನ್ವಯ ಇವರನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೆ, ಅಮಾನತು ಅವಧಿಯಲ್ಲಿ ಇವರು ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಈ ಹಗರಣವು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವುದು ಮಾತ್ರವಲ್ಲದೆ, ಕಾವೇರಿ-2 ತಂತ್ರಾಂಶದ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

























