ಬೆಂಗಳೂರು, ಜ.03 www.bengaluruwire.com : ನಗರದ ಕೆಂಗೇರಿ ಉಪನಗರದ ಐತಿಹಾಸಿಕ ಏಕ ಬಿಲ್ವ ಬಂಡೇಮಠದಲ್ಲಿ ಇಂದು (ಜ.03) ‘ಇಡ್ಲಿ ಹಬ್ಬ’ ಎಂದೇ ಖ್ಯಾತಿ ಪಡೆದಿರುವ ಬಂಡೇಶ್ವರ ಸ್ವಾಮಿಯ ಆರಿದ್ರೋತ್ಸವವು ಸಡಗರ ಸಂಭ್ರಮದಿಂದ ಆರಂಭವಾಗಿದೆ.
ಶತಮಾನಗಳ ಇತಿಹಾಸವಿರುವ ಈ ಜಾತ್ರಾ ಮಹೋತ್ಸವಕ್ಕೆ ಮಠವು ಸರ್ವ ಸನ್ನದ್ಧವಾಗಿದ್ದು, ಸಂಜೆ ನಡೆಯಲಿರುವ ವಿಜೃಂಭಣೆಯ ಉತ್ಸವದಲ್ಲಿ ಪಾಲ್ಗೊಳ್ಳಲು ಭಕ್ತಸಾಗರವೇ ಹರಿದು ಬರುತ್ತಿದೆ. ಬಂದ ಭಕ್ತರಿಗೆ ಇಡ್ಲಿ ಪ್ರಸಾದದ ವಿತರಣೆಯೂ ನಡೆಯುತ್ತಿದೆ.
ಪೌರಾಣಿಕ ಹಿನ್ನೆಲೆ ಏನು?:
ಋಷಿ ಮುನಿಗಳಿಗೆ ಹಾಗೂ ದೇವತೆಗಳಿಗೆ ಕಂಟಕಪ್ರಾಯನಾಗಿದ್ದ ಅಂಧಕಾಸುರನನ್ನು ಶಿವನು ಸಂಹರಿಸುತ್ತಾನೆ. ಈ ಸಂದರ್ಭದಲ್ಲಿ ಶಿವನ ಉಗ್ರ ಕೋಪವನ್ನು ತಣಿಸಲು ಆರಿದ್ರ ದರ್ಶನ ಮಾಡಿಸಲಾಗುತ್ತದೆ. ಈ ಪೌರಾಣಿಕ ಐತಿಹ್ಯದ ಸ್ಮರಣಾರ್ಥವಾಗಿ ಶತಮಾನಗಳಿಂದಲೂ ಇಲ್ಲಿ ಆರಿದ್ರೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇಂದು ಬಹುತೇಕ ಎಲ್ಲಾ ಶಿವಾಲಯಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಬಂಡೇಮಠದ ಬಂಡೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಲಿದೆ.

ವಿಶಿಷ್ಟ ಪ್ರಸಾದ: ಇಡ್ಲಿ ಹಬ್ಬ:
ಈ ಉತ್ಸವದ ಪ್ರಮುಖ ಆಕರ್ಷಣೆಯೇ ‘ಇಡ್ಲಿ ಪ್ರಸಾದ’. ಬೆಂಗಳೂರಿನ ನಾನಾ ಮೂಲೆಗಳಿಂದ ಆಗಮಿಸುವ ಸಹಸ್ರಾರು ಭಕ್ತರಿಗೆ ಬಿಸಿ ಬಿಸಿ ಇಡ್ಲಿಯನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ಈ ಉತ್ಸವವು ಜನಮಾನಸದಲ್ಲಿ ‘ಇಡ್ಲಿ ಹಬ್ಬ’ ಎಂದೇ ಜನಪ್ರಿಯವಾಗಿದೆ. ಉತ್ಸವದ ಪ್ರಯುಕ್ತ ದೇವಾಲಯವನ್ನು ಹೂ ಮತ್ತು ದೀಪಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ.
ಸೌಹಾರ್ದತೆಯ ಸಂಕೇತ:
ಕೆಂಗೇರಿ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಆರಿದ್ರೋತ್ಸವವು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಒಂದು ಊರ ಹಬ್ಬವಾಗಿ ಆಚರಿಸಲ್ಪಡುತ್ತದೆ. ಲಿಂಗಾಯತ ಸಮುದಾಯದೊಡಗೂಡಿ ಎಲ್ಲಾ ಧರ್ಮ ಮತ್ತು ಜಾತಿಯ ಜನರು ಒಂದಾಗಿ ಈ ಹಬ್ಬವನ್ನು ಆಚರಿಸುವುದು ಇಲ್ಲಿನ ವಿಶೇಷತೆಯಾಗಿದೆ.
ರಥೋತ್ಸವದ ಮೆರುಗು:
ಇಂದು ಸಂಜೆ ಮೂರು ಗಂಟೆಯ ನಂತರ ಮೂಲ ದೇವರು ಬಂಡೇಶ್ವರ ಸ್ವಾಮಿಗೆ ಮಹಾಪೂಜೆ ನಡೆಯಲಿದ್ದು, ತದನಂತರ ಕೆಂಗೇರಿಯವರೆಗೆ ಅದ್ಧೂರಿ ರಥೋತ್ಸವ ಸಾಗಲಿದೆ. ರಥ ಸಾಗುವ ಬೀದಿಗಳನ್ನು ಸ್ಥಳೀಯ ನಿವಾಸಿಗಳು ಸ್ವಯಂಪ್ರೇರಿತರಾಗಿ ಶುಚಿಗೊಳಿಸಿ, ರಂಗೋಲಿ ಹಾಕಿ ಸ್ವಾಗತಿಸುವುದು ಹಬ್ಬದ ಕಳೆಯನ್ನು ಹೆಚ್ಚಿಸಲಿದೆ.
“ಬಂಡೇಮಠಕ್ಕೆ ಶತಮಾನಗಳ ಇತಿಹಾಸವಿದ್ದು, ಭಕ್ತರ ಸಹಕಾರದೊಂದಿಗೆ ಆರಿದ್ರೋತ್ಸವವು ಸಾಂಗವಾಗಿ ನಡೆದುಕೊಂಡು ಬರುತ್ತಿದೆ. ವಿವಿಧ ಧರ್ಮೀಯರು ಹಾಗೂ ಜನಾಂಗದವರು ಭೇದ-ಭಾವ ಮರೆತು ಈ ಉತ್ಸವದಲ್ಲಿ ಭಾಗಿಯಾಗುವುದು ಇಲ್ಲಿನ ಸಾಮರಸ್ಯಕ್ಕೆ ಸಾಕ್ಷಿ,” ಎಂದು ಏಕ ಬಿಲ್ವ ಬಂಡೇಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಜಾತಿ, ಮತವನ್ನು ಮೀರಿದ ಧಾರ್ಮಿಕ ಆಚರಣೆಯಾಗಿ, ಮನುಷ್ಯರ ಬಾಂಧವ್ಯ ವೃದ್ಧಿಗೆ ಈ ‘ಇಡ್ಲಿ ಹಬ್ಬ’ ವೇದಿಕೆಯಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.






















