ಬಳ್ಳಾರಿ, ಜ.02 www.bengaluruwire.com : ಗಣಿನಾಡು ಬಳ್ಳಾರಿಯಲ್ಲಿ ವಾಲ್ಮೀಕಿ ಪ್ರತಿಮೆ ಅನಾವರಣದ ಬ್ಯಾನರ್ ವಿಚಾರವಾಗಿ ಗುರುವಾರ ಸಂಜೆ ನಡೆದ ಹೈಡ್ರಾಮಾ ಹಾಗೂ ಗುಂಡಿನ ದಾಳಿ (Bellary Firing Case) ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಈ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಒಟ್ಟು 11 ಪ್ರಮುಖ ನಾಯಕರ ವಿರುದ್ಧ ದೂರು ದಾಖಲಾಗಿದೆ.
ಏನಿದು ಘಟನೆ?:
ನಗರದ ಎಸ್ಪಿ ವೃತ್ತದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿದ್ದವು. ನಗರ ಶಾಸಕ ನಾರಾ ಭರತ್ ರೆಡ್ಡಿ (Nara Bharath Reddy) ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಜನವರಿ 1ರಂದು ಗುರುವಾರ ಸಂಜೆ ಸಿರುಗುಪ್ಪ ರಸ್ತೆಯಲ್ಲಿರುವ ಜನಾರ್ದನ ರೆಡ್ಡಿ ನಿವಾಸದ ಬಳಿ ಅಳವಡಿಸಿದ್ದ ಬ್ಯಾನರ್ಗಳನ್ನು ಹರಿದು ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ಉಂಟಾದ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ ಗುಂಡಿನ ದಾಳಿ ನಡೆದಿದೆ.


11 ಜನರ ವಿರುದ್ಧ ಎಫ್ಐಆರ್ ದಾಖಲು :
ಗುಂಡಿನ ದಾಳಿಯಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಅವರ ಆಪ್ತ ಹುಸೇನ್ ನಗರದ ರಾಜಶೇಖರ್ (28) ಮೃತಪಟ್ಟಿದ್ದಾರೆ. ಈ ಸಂಬಂಧ ಮೃತ ರಾಜಶೇಖರ್ ಕಡೆಯವರಾದ ಚಾನಾಳ್ ಶೇಖರ್ ಅವರು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನನ್ವಯ ಪೊಲೀಸರು ಈ ಕೆಳಗಿನ ಪ್ರಮುಖರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ:
* ಜಿ. ಜನಾರ್ದನ ರೆಡ್ಡಿ (ಗಂಗಾವತಿ ಶಾಸಕ)
* ಜಿ. ಸೋಮಶೇಖರ ರೆಡ್ಡಿ (ಮಾಜಿ ಶಾಸಕ)
* ಬಿ. ಶ್ರೀರಾಮುಲು (ಮಾಜಿ ಸಚಿವ)
* ಮೋತ್ಕರ್ ಶ್ರೀನಿವಾಸ್ (ಪಾಲಿಕೆ ಸದಸ್ಯ)
* ಅಲಿಖಾನ್ (ಜನಾರ್ದನ ರೆಡ್ಡಿ ಆಪ್ತ)
* ಪ್ರಕಾಶ್ ರೆಡ್ಡಿ
* ರಮಣ, ಪಾಲಣ್ಣ, ದಿವಾಕರ್, ಮಾರುತಿ ಪ್ರಸಾದ್ (ಬುಡಾ ಮಾಜಿ ಅಧ್ಯಕ್ಷ) ಹಾಗೂ ದಮ್ಮೂರು ಶೇಖರ್.
ಬಂದೂಕುಗಳು ಸೀಜ್: ಯಾರ ಗುಂಡು ರಾಜಶೇಖರ್ ಪ್ರಾಣ ತೆಗೆಯಿತು?:
ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಘಟನಾ ಸ್ಥಳದಲ್ಲಿ ನಡೆದ ಫೈರಿಂಗ್ಗೆ ಯಾರ ಬಂದೂಕು ಕಾರಣ ಎಂಬುದು ಇನ್ನೂ ನಿಗೂಢವಾಗಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ, ಶ್ರೀರಾಮುಲು, ಸೋಮಶೇಖರ ರೆಡ್ಡಿ ಹಾಗೂ ಶಾಸಕ ನಾರಾ ಭರತ್ ರೆಡ್ಡಿ ಅವರಿಗೆ ಸೇರಿದ ಲೈಸೆನ್ಸ್ಡ್ ಬಂದೂಕುಗಳನ್ನು (Guns Seized) ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಬಂದೂಕುಗಳನ್ನು ಬಳ್ಳಾರಿಯ ಡಿಎಆರ್ ಶಸ್ತ್ರಗಾರಕ್ಕೆ ರವಾನಿಸಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಗಾಗಿ ಕಾಯಲಾಗುತ್ತಿದೆ.
ಹಲ್ಲೆ ಮತ್ತು ಪ್ರಕ್ಷುಬ್ಧ ವಾತಾವರಣ :
ಘಟನೆಯಲ್ಲಿ ಕೇವಲ ಗುಂಡಿನ ದಾಳಿ ಮಾತ್ರವಲ್ಲದೆ, ಮಾರಣಾಂತಿಕ ಹಲ್ಲೆ ನಡೆದಿದೆ ಎಂದೂ ಆರೋಪಿಸಲಾಗಿದೆ. ಗಲಾಟೆ ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ ಅವರಿಗೂ ಗಾಯಗಳಾಗಿವೆ. ಮೃತ ರಾಜಶೇಖರ್ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆ ನಿರ್ದೇಶಕ ಡಾ.ಗಂಗಾಧರ್ ಗೌಡ ನೇತೃತ್ವದಲ್ಲಿ ಸಿದ್ಧತೆ ನಡೆದಿದ್ದು, ಎಫ್ಎಸ್ಎಲ್ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ. ನಗರದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇಂದು ಮೃತ ರಾಜಶೇಖರ ಕುಟುಂಬಕ್ಕೆ ಶಾಸಕ ಭರತರೆಡ್ಡಿ ಸ್ವಾಂತನ ಹೇಳಲಿದ್ದಾರೆ. ಘಟನೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಭರತರೆಡ್ಡಿ ಈಗಾಗಲೇ ಪ್ರಕರಣ ದಾಖಲಿಸಿದ್ದರೂ, ಜನಾರ್ದನ ರೆಡ್ಡಿ ಯಾವುದೇ ದೂರು ನೀಡಲು ಮುಂದಾಗಿಲ್ಲ. ಪ್ರಕರಣದ ಬೆಳವಣಿಯಲ್ಲಿ ಕಾದು ನೋಡುವ ತಂತ್ರ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.






















