ಬೆಂಗಳೂರು, ಡಿ.31 www.bengaluruwire.com : ಸ್ವಂತ ಸೂರು ಅಥವಾ ನಿವೇಶನ ಹೊಂದುವ ಕನಸು ಕಾಣುತ್ತಿರುವವರೇ ಎಚ್ಚರ.
ಕರ್ನಾಟಕ ಗೃಹ ಮಂಡಳಿ (KHB) ಅಭಿವೃದ್ಧಿಪಡಿಸುತ್ತಿರುವ ಪ್ರತಿಷ್ಠಿತ ‘ಸೂರ್ಯನಗರ 4ನೇ ಹಂತ’ದ ಯೋಜನೆಯಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿ ವಂಚಿಸುವ ಜಾಲವೊಂದು ಸಕ್ರಿಯವಾಗಿದ್ದು, ಈ ಬಗ್ಗೆ ಸ್ವತಃ ಗೃಹ ಮಂಡಳಿಯೇ ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ನೀಡಿದೆ.
ಗೃಹ ಮಂಡಳಿಯು ಜಂಟಿ ಸಹಭಾಗಿತ್ವದಲ್ಲಿ (50:50 ಅನುಪಾತ) ಅಭಿವೃದ್ಧಿ ಪಡಿಸುತ್ತಿರುವ ಸೂರ್ಯನಗರ 4ನೇ ಹಂತದ ಯೋಜನೆಯಲ್ಲಿ, ಭೂಮಿ ನೀಡಿದ ಮಾಲೀಕರಿಗೆ ನೀಡಲಾಗಿರುವ ‘ಸಾಂಕೇತಿಕ ನಿವೇಶನ ಆಯ್ಕೆ ಪತ್ರ’ವನ್ನೇ (Symbolic Site Selection Letter) ಮುಂದಿಟ್ಟುಕೊಂಡು ಅಕ್ರಮವಾಗಿ ಸೈಟ್ ಮಾರಾಟ ಮತ್ತು ಕರಾರು ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಏನಿದು ಪ್ರಕರಣ? :

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ, ಕಾಡುಜಕ್ಕನಹಳ್ಳಿ ಹಾಗೂ ಬಗ್ಗನದೊಡ್ಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟು 1,498 ಎಕರೆ 39 ಗುಂಟೆ ವಿಸ್ತೀರ್ಣದಲ್ಲಿ ಸೂರ್ಯನಗರ 4ನೇ ಹಂತದ ವಸತಿ ಬಡಾವಣೆ ನಿರ್ಮಾಣವಾಗುತ್ತಿದೆ. ನಿಯಮದ ಪ್ರಕಾರ ಭೂಮಿ ನೀಡಿದ ರೈತರು/ಮಾಲೀಕರಿಗೆ ಅಭಿವೃದ್ಧಿಪಡಿಸಿದ ನಿವೇಶನಗಳಲ್ಲಿ ಪಾಲು ನೀಡಲಾಗುತ್ತದೆ. ಪ್ರಸ್ತುತ ಕಾಮಗಾರಿ ಪ್ರಗತಿಯಲ್ಲಿದ್ದು, ಭೂಮಾಲೀಕರಿಗೆ ಅವರ ಪಾಲಿನ ನಿವೇಶನಗಳನ್ನು ಆಯ್ಕೆ ಮಾಡಿಕೊಳ್ಳಲು ಕೇವಲ ‘ಸಾಂಕೇತಿಕ ಪತ್ರ’ವನ್ನು ಮಾತ್ರ ನೀಡಲಾಗಿದೆ.
ಆದರೆ, ಇದನ್ನೇ ಬಂಡವಾಳವಾಗಿಸಿಕೊಂಡಿರುವ ಕೆಲ ಭೂಮಾಲೀಕರು ಮತ್ತು ಮಧ್ಯವರ್ತಿಗಳು, ಇದೇ ಅಂತಿಮ ದಾಖಲೆ ಎಂದು ಬಿಂಬಿಸಿ ಸಾರ್ವಜನಿಕರೊಂದಿಗೆ ನಿವೇಶನ ಮಾರಾಟದ ಕರಾರು ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಆಘಾತಕಾರಿ ವಿಷಯವೆಂದರೆ, ಕೆಲವರು ಈ ‘ಸಾಂಕೇತಿಕ ಆಯ್ಕೆ ಪತ್ರ’ವನ್ನೇ ನಕಲು (Forgery) ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಅಮಾಯಕರಿಗೆ ಟೋಪಿ ಹಾಕುತ್ತಿರುವುದು ಮಂಡಳಿಯ ಗಮನಕ್ಕೆ ಬಂದಿದೆ.
ಖರೀದಿದಾರರಿಗೆ ಎಚ್ಚರಿಕೆ ಏನು? :
ಈ ಬಗ್ಗೆ ಡಿಸೆಂಬರ್ 31 ರಂದು ಕಟ್ಟುನಿಟ್ಟಿನ ಪ್ರಕಟಣೆ ಹೊರಡಿಸಿರುವ ಕೆಎಚ್ಬಿ ಆಯುಕ್ತರು, “ಸಾಂಕೇತಿಕ ನಿವೇಶನ ಆಯ್ಕೆ ಪತ್ರವು ಕೇವಲ ನಿವೇಶನವನ್ನು ಕಾಯ್ದಿರಿಸುವ (Reserved) ದಾಖಲೆಯೇ ಹೊರತು, ಅದು ಹಕ್ಕುಪತ್ರವಲ್ಲ. ಇದನ್ನು ಇಟ್ಟುಕೊಂಡು ನಿವೇಶನವನ್ನು ಪರಭಾರೆ ಮಾಡಲು ಅಥವಾ ಮಾರಾಟ ಮಾಡಲು ಬರುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ಯಾವಾಗ ಖರೀದಿಸಬೇಕು?:
ಭೂಮಾಲೀಕರ ಹೆಸರಿಗೆ ಅಧಿಕೃತವಾಗಿ ‘ಹಂಚಿಕೆ ಪತ್ರ’ (Allotment Letter) ನೀಡಿ, ನಂತರ ಇ-ಖಾತಾ (E-Khata) ನೋಂದಣಿಯಾದ ಬಳಿಕವಷ್ಟೇ ಆ ನಿವೇಶನಗಳನ್ನು ಖರೀದಿಸುವುದು ಸುರಕ್ಷಿತ ಮತ್ತು ಕಾನೂನುಬದ್ಧವಾಗಿರುತ್ತದೆ. ಅಲ್ಲಿಯವರೆಗೂ ಯಾವುದೇ ರೀತಿಯ ವ್ಯವಾಹಾರ ನಡೆಸಿ ಮೋಸ ಹೋದರೆ ಅದಕ್ಕೆ ಗೃಹ ಮಂಡಳಿ ಜವಾಬ್ದಾರಿಯಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.
ಆದ್ದರಿಂದ ಸಾರ್ವಜನಿಕರು ಸೂರ್ಯನಗರ 4ನೇ ಹಂತದಲ್ಲಿ ಸೈಟ್ ಖರೀದಿಸುವ ಮುನ್ನ ದಾಖಲೆಗಳ ನೈಜತೆಯನ್ನು ಪರಿಶೀಲಿಸುವುದು ಅತ್ಯಗತ್ಯ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.























