ತಿರುಪತಿ/ಬೆಂಗಳೂರು, ಡಿ.30 www.bengaluruwire.com : ಪವಿತ್ರ ವೈಕುಂಠ ಏಕಾದಶಿಯ ಶುಭ ಸಂದರ್ಭದಲ್ಲಿ ಕಲಿಯುಗ ವೈಕುಂಠ ತಿರುಮಲ ಸೇರಿದಂತೆ ರಾಜ್ಯಾದ್ಯಂತ ವಿಷ್ಣು ದೇವಾಲಯಗಳಲ್ಲಿ ಭಕ್ತಿಯ ಪಾರಮ್ಯ ಮೇಳೈಸಿದೆ. ‘ಗೋವಿಂದಾ… ಗೋವಿಂದಾ…’ ಎನ್ನುವ ಭಕ್ತರ ಜಯಘೋಷದೊಂದಿಗೆ ಸೋಮವಾರ ಮಧ್ಯರಾತ್ರಿಯೇ ವೈಕುಂಠ ದ್ವಾರಗಳು ತೆರೆದುಕೊಂಡಿದ್ದು, ಭಕ್ತರು ಪರಮಾತ್ಮನ ದರ್ಶನ ಪಡೆದು ಪುನೀತರಾದರು.
ಇತ್ತ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ವೈಕುಂಠ ಏಕಾದಶಿ ಸಂಭ್ರಮ ಮನೆಮಾಡಿದೆ. ಬೆಂಗಳೂರಿನ ಇಸ್ಕಾನ್, ಟಿಟಿಡಿ ದೇವಸ್ಥಾನ ಹಾಗೂ ಪ್ರಮುಖ ವೆಂಕಟೇಶ್ವರ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಭಕ್ತರು ಉದ್ದನೆಯ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.
ತಿರುಮಲದಲ್ಲಿ ವೈಕುಂಠ ದ್ವಾರ ಪ್ರವೇಶ :
ತಿರುಮಲದ ಶ್ರೀವಾರಿ ದೇವಾಲಯದಲ್ಲಿ ಸೋಮವಾರ ಮಧ್ಯರಾತ್ರಿ 12.05 ಗಂಟೆಗೆ ಸಾಂಪ್ರದಾಯಿಕವಾಗಿ ವೈಕುಂಠ ದ್ವಾರವನ್ನು ತೆರೆಯಲಾಯಿತು. ಇದಕ್ಕೂ ಮುನ್ನ ಅರ್ಚಕರು ಮೂಲವಿರಾಟರಿಗೆ ಏಕಾಂತವಾಗಿ ವಿಶೇಷ ಕೈಂಕರ್ಯ ಹಾಗೂ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ನಂತರ ದೇವಸ್ಥಾನದ ಸಂಪ್ರದಾಯದಂತೆ ವೈಕುಂಠ ದ್ವಾರದ ಮೂಲಕ ಪ್ರವೇಶಕ್ಕೆ ಚಾಲನೆ ನೀಡಲಾಯಿತು.

ಬೆಳಗಿನ ಜಾವ 1.30ರ ಸುಮಾರಿಗೆ ವಿಐಪಿಗಳು ಹಾಗೂ ಪ್ರೋಟೋಕಾಲ್ ವ್ಯಾಪ್ತಿಯ ಗಣ್ಯರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ ಬೆಳಿಗ್ಗೆ 5.00 ಗಂಟೆಗೆ ಸರ್ವದರ್ಶನ ಟೋಕನ್ ಪಡೆದ ಸಾಮಾನ್ಯ ಭಕ್ತರಿಗೆ ವೈಕುಂಠ ದ್ವಾರದ ಮೂಲಕ ಪ್ರವೇಶ ನೀಡಲಾಯಿತು. ದೇವಾಲಯದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಮಾಡಲಾದ ವಿಶೇಷ ಹೂವಿನ ಅಲಂಕಾರ ಹಾಗೂ ವಿದ್ಯುತ್ ದೀಪಗಳ ಜಗಮಗ ಭಕ್ತರಿಗೆ ದೈವಿಕ ಲೋಕದ ಅನುಭೂತಿ ನೀಡಿತು.
ಪ್ರಮುಖ ಗಣ್ಯರ ದಂಡು :
ವೈಕುಂಠ ದ್ವಾರ ದರ್ಶನ ಆರಂಭವಾಗುತ್ತಿದ್ದಂತೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಅವರ ಕುಟುಂಬ, ಆಂಧ್ರದ ಸಚಿವರುಗಳಾದ ಪಯ್ಯಾವುಲ ಕೇಶವ್, ಸತ್ಯಕುಮಾರ್, ಅಚ್ಚಂ ನಾಯ್ಡು, ಕೇಂದ್ರ ಸಚಿವ ರಾಮ್ಮೋಹನ್ ನಾಯ್ಡು, ನಟ ಶಿವಾಜಿ, ಮೆಗಾಸ್ಟಾರ್ ಚಿರಂಜೀವಿ ಪತ್ನಿ ಸುರೇಖಾ, ಕ್ರಿಕೆಟಿಗ ತಿಲಕ್ ವರ್ಮಾ ಸೇರಿದಂತೆ ಹಲವು ಗಣ್ಯರು ಶ್ರೀವಾರಿ ದರ್ಶನ ಪಡೆದರು.
ಭಕ್ತರಿಗೆ ಟಿಟಿಡಿ ಪ್ರಮುಖ ಸೂಚನೆಗಳು:
ವೈಕುಂಠ ದ್ವಾರ ದರ್ಶನವು ಇಂದಿನಿಂದ (ಡಿ.30) ಆರಂಭಗೊಂಡು ಜನವರಿ 8, 2026ರವರೆಗೆ ಲಭ್ಯವಿರುತ್ತದೆ. ಆದರೆ ಭಕ್ತರು ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಗಮನಿಸಬೇಕು ಎಂದು ಟಿಟಿಡಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ 3 ದಿನ ನಿರ್ಬಂಧ: ಡಿಸೆಂಬರ್ 30, 31 ಹಾಗೂ ಜನವರಿ 1ರಂದು ಕೇವಲ ಇ-ಡಿಪ್ (Online) ಮೂಲಕ ಟೋಕನ್ ಪಡೆದ ಭಕ್ತರಿಗೆ ಮಾತ್ರ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶವಿರುತ್ತದೆ.
ಎಸ್ಎಸ್ಡಿ ಟೋಕನ್ ರದ್ದು: ಜನದಟ್ಟಣೆ ನಿಯಂತ್ರಿಸುವ ದೃಷ್ಟಿಯಿಂದ ತಿರುಪತಿಯ ಭೂದೇವಿ ಕಾಂಪ್ಲೆಕ್ಸ್ನಲ್ಲಿ ನೀಡಲಾಗುತ್ತಿದ್ದ ಎಸ್ಎಸ್ಡಿ (SSD) ಟೋಕನ್ಗಳನ್ನು ಡಿ.28ರಿಂದ ಜ.7ರವರೆಗೆ ರದ್ದುಗೊಳಿಸಲಾಗಿದೆ.
ಟೋಕನ್ ಇಲ್ಲದವರಿಗೆ ಯಾವಾಗ ದರ್ಶನ?: ಟೋಕನ್ ಹೊಂದಿಲ್ಲದ ಭಕ್ತರು ಜನವರಿ 2 ರಿಂದ ಜನವರಿ 8ರವರೆಗೆ ಸರ್ವದರ್ಶನ ಸರತಿ ಸಾಲಿನಲ್ಲಿ ವೈಕುಂಠ ದ್ವಾರ ದರ್ಶನ ಪಡೆಯಬಹುದು. (Image courtesy : TTD)
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.



























