ಬೆಂಗಳೂರು, ಡಿ.28 www.bengaluruwire.com : ರಾಜಧಾನಿಯ ಹಸಿರು ಶ್ವಾಸಕೋಶದಂತಿರುವ ಹಾಗೂ ಇತ್ತೀಚೆಗೆ ಸರ್ಕಾರದಿಂದ ‘ಸಂರಕ್ಷಿತ ಹುಲ್ಲುಗಾವಲು’ ಎಂದು ಘೋಷಿಸಲ್ಪಟ್ಟಿರುವ ಹೆಸರುಘಟ್ಟದ 5,678 ಎಕರೆ ಪ್ರದೇಶದ ನೈಜ ಸೌಂದರ್ಯವನ್ನು ಉಳಿಸಿಕೊಳ್ಳಲು ಮತ್ತು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಶನಿವಾರ ಈ ಪ್ರದೇಶಕ್ಕೆ ಭೇಟಿ ನೀಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು, ಪ್ರದೇಶದ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೀರು ಮತ್ತು ನೈರ್ಮಲ್ಯಕ್ಕೆ ಆದ್ಯತೆ :
ವರ್ಷಕ್ಕೆ ಸುಮಾರು 10 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಸಾಮರ್ಥ್ಯ ಹೊಂದಿರುವ ಐತಿಹಾಸಿಕ ಹೆಸರುಘಟ್ಟ ಕೆರೆಯ ಮಹತ್ವವನ್ನು ಸಚಿವರು ಒತ್ತಿ ಹೇಳಿದರು. “ಕೆರೆಗೆ ಯಾವುದೇ ಕಾರಣಕ್ಕೂ ಗೃಹ ತ್ಯಾಜ್ಯವಾಗಲೀ ಅಥವಾ ಕೈಗಾರಿಕಾ ತ್ಯಾಜ್ಯವಾಗಲೀ ಸೇರದಂತೆ ಎಚ್ಚರಿಕೆ ವಹಿಸಬೇಕು. ಅರ್ಕಾವತಿ ನದಿ ಪಾತ್ರ ಮಲಿನವಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು,” ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಕ್ಷಿಗಳಿಗೆ ಆಸರೆ – ದನಕರುಗಳಿಗೆ ಮುಕ್ತ ಅವಕಾಶ :
ಹೆಸರುಘಟ್ಟವು ಕೇವಲ ಹುಲ್ಲುಗಾವಲಷ್ಟೇ ಅಲ್ಲ, ಅದು ಪಕ್ಷಿಗಳ ಪಾಲಿನ ಸ್ವರ್ಗವೂ ಹೌದು. ಇಲ್ಲಿನ ಜಲಮೂಲಗಳು ಮತ್ತು ಹುಲ್ಲುಗಾವಲು ಪಕ್ಷಿಗಳ ಸಂತಾನೋತ್ಪತ್ತಿಗೆ ಪ್ರಶಸ್ತ ತಾಣವಾಗಿದೆ. ಈ ಹಿನ್ನೆಲೆಯಲ್ಲಿ, ಪಕ್ಷಿಗಳಿಗೆ ಗೂಡು ಕಟ್ಟಲು ಅನುಕೂಲವಾಗುವಂತೆ ‘ಹೊಳೆ ಮತ್ತಿ’ ಮರಗಳು ಹಾಗೂ ಆಹಾರಕ್ಕಾಗಿ ವಿವಿಧ ಸ್ಥಳೀಯ ಹಣ್ಣಿನ ಗಿಡಗಳನ್ನು ಬೆಳೆಸುವಂತೆ ಸಚಿವರು ನಿರ್ದೇಶನ ನೀಡಿದರು.
ಇದರೊಂದಿಗೆ ರೈತರ ಹಿತಾಸಕ್ತಿಯನ್ನೂ ಕಾಪಾಡಲು ಸೂಚಿಸಿದ ಸಚಿವರು, “ಸಂರಕ್ಷಣೆಯ ಜೊತೆಗೆ ಸುತ್ತಮುತ್ತಲ ಗ್ರಾಮಸ್ಥರ ದನಕರು ಮತ್ತು ಮೇಕೆಗಳು ಮೇಯಲು ಇಲ್ಲಿ ಮುಕ್ತ ಅವಕಾಶ ಕಲ್ಪಿಸಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಗಳು ಮತ್ತು ಸಾರ್ವಜನಿಕರ ವಿಶ್ವಾಸ ಮತ್ತು ಸಹಕಾರದೊಂದಿಗೆ ಸಂರಕ್ಷಣಾ ಕಾರ್ಯ ನಡೆಯಬೇಕು,” ಎಂದು ಸ್ಪಷ್ಟಪಡಿಸಿದರು.
ಸಿಎಸ್ಆರ್ ನಿಧಿ ಬಳಕೆ:
ಹೆಸರುಘಟ್ಟ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಅರಣ್ಯ ಇಲಾಖೆಯಿಂದ ಹಣ ಮೀಸಲಿಡುವ ಜೊತೆಗೆ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನಿಧಿಯನ್ನು ಬಳಸಿಕೊಳ್ಳುವಂತೆ ಸಚಿವರು ಸಲಹೆ ನೀಡಿದರು. ಸಣ್ಣ ನೀರಾವರಿ ಇಲಾಖೆ, BWSSB ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಯೋಜನೆ ರೂಪಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಅವರಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ಪರಿಶೀಲನೆ ವೇಳೆ ಎಪಿಸಿಸಿಎಫ್ ಕುಮಾರ್ ಪುಷ್ಕರ್, ಬೆಂಗಳೂರು ನಗರ ಡಿಸಿಎಫ್ ರವೀಂದ್ರ ಕುಮಾರ್ ಎನ್. ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






















