ಬೆಂಗಳೂರು, ಡಿ.25 www.bengaluruwire.com : ಆಯುರ್ವೇದ ಮತ್ತು ಯೋಗ ಕೇವಲ ಚಿಕಿತ್ಸಾ ಪದ್ಧತಿಗಳಲ್ಲ, ಅವು ರೋಗ ಬಾರದಂತೆ ತಡೆಯುವ ಹಾಗೂ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡುವ ಅತ್ಯುತ್ತಮ ಜೀವನಕ್ರಮಗಳಾಗಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪ್ರತಿಪಾದಿಸಿದರು.
ನಗರದ ಅರಮನೆ ಮೈದಾನದಲ್ಲಿ ಗುರುವಾರ (ಡಿ.25) ಹಮ್ಮಿಕೊಳ್ಳಲಾಗಿದ್ದ ‘ಆಯುರ್ವೇದ ವರ್ಲ್ಡ್ ಸಮ್ಮಿಟ್’ (Ayurveda World Summit) ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳ ಹಿಂದೆಯೇ ವೈಜ್ಞಾನಿಕ ತಳಹದಿಯ ಮೇಲೆ ಆಯುರ್ವೇದ ಮತ್ತು ಯೋಗವನ್ನು ರೂಪಿಸಲಾಗಿದೆ. ಇಂದಿನ ಆಧುನಿಕ ಯುಗದಲ್ಲಿ ನಾವು ಸಾಂಕ್ರಾಮಿಕ ರೋಗಗಳಿಗಿಂತ ಹೆಚ್ಚಾಗಿ ಅಸಾಂಕ್ರಾಮಿಕ ರೋಗಗಳಿಂದ (Non-Communicable Diseases) ಬಳಲುತ್ತಿದ್ದೇವೆ. ಬದಲಾದ ಆಹಾರ ಪದ್ಧತಿ, ವಿಪರೀತ ಒತ್ತಡದ ಜೀವನಶೈಲಿ ಮತ್ತು ದೈಹಿಕ ವ್ಯಾಯಾಮದ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ಮಾನಸಿಕ ಒತ್ತಡ ನಿರ್ವಹಣೆ ಸಮಾಜಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಆಯುರ್ವೇದವು ಆರೋಗ್ಯಕರವಾಗಿ ಬದುಕಲು ದಾರಿದೀಪವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆಯುರ್ವೇದದಲ್ಲೂ ಸ್ಪೆಷಲಿಸ್ಟ್ ಬರಬೇಕು:
ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ (Allopathy) ಕಿಡ್ನಿ ತಜ್ಞರು, ಹೃದ್ರೋಗ ತಜ್ಞರು ಎಂದು ಹೇಗೆ ವಿಭಜನೆ ಇದೆಯೋ, ಅದೇ ರೀತಿ ಆಯುರ್ವೇದದಲ್ಲೂ ನಿರ್ದಿಷ್ಟ ರೋಗಗಳಿಗೆ ಚಿಕಿತ್ಸೆ ನೀಡುವ ವಿಶೇಷ ತಜ್ಞ ವೈದ್ಯರು ಬರಬೇಕಿದೆ. ಆಧುನಿಕ ವೈದ್ಯರನ್ನು ಜನ ಸುಲಭವಾಗಿ ನಂಬುವಂತೆ, ಆಯುರ್ವೇದದಲ್ಲೂ ಸರಿಯಾದ ಮಾನದಂಡಗಳ ಮೂಲಕ ವಿಶೇಷ ತಜ್ಞರಿಗೆ ಪ್ರಮಾಣಪತ್ರ (Certification) ನೀಡುವ ಪದ್ಧತಿ ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ಆಯುರ್ವೇದ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆಗಳು ನಡೆಯುವ ಅಗತ್ಯವಿದೆ ಎಂದು ಸಚಿವರು ಸಲಹೆ ನೀಡಿದರು.
ದೇಶದ ನಾನಾ ಭಾಗಗಳಿಂದ ಆಯುರ್ವೇದ ವೈದ್ಯರು ಈ ಸಮ್ಮೇಳನದಲ್ಲಿ ಭಾಗವಹಿಸಿರುವುದು ಶ್ಲಾಘನೀಯ. ಈ ಬೃಹತ್ ಸಮ್ಮೇಳನವನ್ನು ಆಯೋಜಿಸಿರುವ ಖ್ಯಾತ ವೈದ್ಯರಾದ ಡಾ. ಗಿರಿಧರ ಕಜೆ ಅವರ ಶ್ರಮ ಸಾರ್ಥಕವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ರಾಘವೇಶ್ವರ ಭಾರತಿ ಮಹಾಸ್ವಾಮಿಗಳು, ವಚನಾನಂದ ಸ್ವಾಮೀಜಿಗಳು, ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ಟ, ಹಾಗೂ ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.























