ರಾಯಪುರ, (ಛತ್ತೀಸ್ಘಡ) ಡಿ.21 www.bengaluruwire.com : ನಗರದಲ್ಲಿ ಹೆಚ್ಚುತ್ತಿರುವ ಸೊಳ್ಳೆಗಳ ಹಾವಳಿ ಮತ್ತು ಡೆಂಗ್ಯೂ ಭೀತಿಯಿಂದ ಕಂಗೆಟ್ಟ ವ್ಯಕ್ತಿಯೊಬ್ಬರು, ತಮ್ಮನ್ನು ಕಚ್ಚಿದ ಸೊಳ್ಳೆಗಳನ್ನು ಕೊಂದು, ಅವುಗಳನ್ನು ಪ್ಲಾಸ್ಟಿಕ್ ಕವರ್ನಲ್ಲಿ ತುಂಬಿಕೊಂಡು ನೇರವಾಗಿ ಮಹಾನಗರ ಪಾಲಿಕೆ ಕಚೇರಿಗೆ ತಂದು ಪ್ರತಿಭಟಿಸಿದ ವಿಚಿತ್ರ ಘಟನೆ ಛತ್ತೀಸ್ಘಡದ ರಾಯಪುರದಲ್ಲಿ ನಡೆದಿದೆ.
ಹೌದು, ಸಿನಿಮೀಯ ರೀತಿಯಲ್ಲಿ ನಡೆದ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕನ್ನಡಿ ಹಿಡಿದಂತಿದೆ.
ವಿಪರೀತ ಸೊಳ್ಳೆ ಕಾಟ, ಡೆಂಗ್ಯೂ ಜ್ವರದ ಭೀತಿ :
ರಾಯಪುರದ ವಾಮನರಾವ್ ಲಾಖೆ ವಾರ್ಡ್ ನಿವಾಸಿಯಾದ ದೌಲಾಲ್ ಪಟೇಲ್ ಎಂಬುವವರೇ ಈ ವಿಭಿನ್ನ ಪ್ರತಿಭಟನೆ ನಡೆಸಿದವರು. ತಮ್ಮ ಪ್ರದೇಶದಲ್ಲಿ ವಿಪರೀತ ಸೊಳ್ಳೆ ಕಾಟವಿದ್ದು, ಡೆಂಗ್ಯೂ ಜ್ವರದ ಭೀತಿ ಆವರಿಸಿದೆ ಎಂದು ಅವರು ಆರೋಪಿಸಿದ್ದಾರೆ. ವೈದ್ಯರ ಸಲಹೆಯಂತೆ, ತಮಗೆ ಕಚ್ಚಿದ ಸೊಳ್ಳೆಗಳು ಡೆಂಗ್ಯೂ ವಾಹಕಗಳೇ ಅಥವಾ ಸಾಮಾನ್ಯ ಸೊಳ್ಳೆಗಳೇ ಎಂಬುದನ್ನು ಪತ್ತೆ ಹಚ್ಚಲು, ಸತ್ತ ಸೊಳ್ಳೆಗಳನ್ನು ಸಂಗ್ರಹಿಸಿ ಪಾಲಿಕೆ ಕಚೇರಿಗೆ ತಂದಿದ್ದಾರೆ.

ದೌಲಾಲ್ ಪಟೇಲ್ ಅವರಿಗೆ ಸಾಮಾಜಿಕ ಹೋರಾಟಗಾರ ವಿಜಯ್ ಸೋನಾ ಮತ್ತು ವಿರೋಧ ಪಕ್ಷದ ನಾಯಕ ಆಕಾಶ್ ತಿವಾರಿ ಸಾಥ್ ನೀಡಿದರು. ಪಾಲಿಕೆ ಕಚೇರಿಗೆ ಆಗಮಿಸಿದ ಇವರು, ಅಧಿಕಾರಿಗಳ ಮೇಜಿನ ಮೇಲೆ ಸತ್ತ ಸೊಳ್ಳೆಗಳಿದ್ದ ಕವರ್ ಇಟ್ಟು, ತಕ್ಷಣವೇ ಪರೀಕ್ಷೆ ನಡೆಸುವಂತೆ ಪಟ್ಟು ಹಿಡಿದರು.
ಪರೀಕ್ಷೆಯಲ್ಲಿ ಪತ್ತೆಯಾಗಿದ್ದೇನು?:
ಪ್ರತಿಭಟನೆಯ ತೀವ್ರತೆ ಕಂಡ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ವೈದ್ಯರನ್ನು ಕರೆಸಿ ಸೊಳ್ಳೆಗಳನ್ನು ಪರೀಕ್ಷೆಗೆ ಒಳಪಡಿಸಿದರು. ಅದೃಷ್ಟವಶಾತ್, ಪಟೇಲ್ ಅವರು ತಂದಿದ್ದ ಸೊಳ್ಳೆಗಳು ಸಾಮಾನ್ಯ ಸೊಳ್ಳೆಗಳಾಗಿದ್ದು, ಅವು ಡೆಂಗ್ಯೂ ಹರಡುವ ಈಡಿಸ್ (Aedes) ಸೊಳ್ಳೆಗಳಲ್ಲ ಎಂದು ದೃಢಪಟ್ಟಿದೆ. ಇದರಿಂದ ಆತಂಕ ಸ್ವಲ್ಪಮಟ್ಟಿಗೆ ತಣಿದಂತಾಗಿದೆ.
ಪಾಲಿಕೆ ವಿರುದ್ಧ ಆಕ್ರೋಶ:
ಈ ಸಂದರ್ಭದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆಕಾಶ್ ತಿವಾರಿ, ಪಾಲಿಕೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. “ನಗರದಲ್ಲಿ ಚರಂಡಿಗಳು ತೆರೆದಿದ್ದು, ನೀರು ನಿಂತು ಗಬ್ಬು ನಾರುತ್ತಿದೆ. ಸೊಳ್ಳೆ ನಿಯಂತ್ರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ, ಫಾಗಿಂಗ್ (Fogging) ಮತ್ತು ಲಾರ್ವಾ ನಾಶಕ ಸಿಂಪಡಣೆ ಸರಿಯಾಗಿ ನಡೆಯುತ್ತಿಲ್ಲ,” ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಅಧಿಕಾರಿಗಳು, ಬಾಧಿತ ಪ್ರದೇಶಗಳಲ್ಲಿ ಕೂಡಲೇ ಫಾಗಿಂಗ್ ಮತ್ತು ಸ್ವಚ್ಛತಾ ಕಾರ್ಯವನ್ನು ಚುರುಕುಗೊಳಿಸುವುದಾಗಿ ಭರವಸೆ ನೀಡಿದರು.
ವೈರಲ್ ಆಯ್ತು ವಿಡಿಯೋ:
ಈ ಘಟನೆಯ ವಿಡಿಯೋ ಈಗ ‘ಎಕ್ಸ್’ (ಟ್ವಿಟರ್) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಈ ಘಟನೆಯನ್ನು 1996ರ ಸೂಪರ್ ಹಿಟ್ ಹಿಂದಿ ಚಿತ್ರ ‘ಯಶ್ವಂತ್’ನ ನಾನಾ ಪಾಟೇಕರ್ ಅವರ ಪ್ರಸಿದ್ಧ “ಏಕ್ ಮಚ್ಛರ್” (ಒಂದು ಸೊಳ್ಳೆ) ಡೈಲಾಗ್ ಜತೆ ಹೋಲಿಸಿ ಟ್ರೋಲ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ಸಾರ್ವಜನಿಕರ ಆರೋಗ್ಯದ ಬಗ್ಗೆ ಪಾಲಿಕೆಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಎಂಬ ಸಂದೇಶವನ್ನು ಈ ಘಟನೆ ರವಾನಿಸಿದೆ.























