ಕೋಟ (ಉಡುಪಿ), ಡಿ.09 www.bengaluruwire.com : ಕಡಲತೀರದ ಭಾರ್ಗವ, ನಡೆದಾಡುವ ವಿಶ್ವಕೋಶ ಎಂದೇ ಪ್ರಖ್ಯಾತರಾಗಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಹೆಸರಲ್ಲಿ ಸ್ಥಾಪಿತವಾದ ಥೀಮ್ ಪಾರ್ಕಿನಲ್ಲಿ ವಾಯುಪಡೆಯ ಮಿಗ್-21 ಯುದ್ಧ ವಿಮಾನವನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಶಿವರಾಮ ಕಾರಂತರು, ಕೇವಲ ಸಾಹಿತ್ಯಕ್ಕಷ್ಟೇ ಸೀಮಿತರಾಗಿರಲಿಲ್ಲ. ಅವರು ಯಕ್ಷಗಾನ, ಪರಿಸರ ಮತ್ತು ವಿಜ್ಞಾನದ ಬಗೆಗೂ ಅಪಾರ ಕುತೂಹಲ ಹಾಗೂ ಅಧ್ಯಯನಶೀಲತೆಯನ್ನು ಹೊಂದಿದ್ದವರು. ಅಂತಹ ಮೇರು ವ್ಯಕ್ತಿತ್ವದ ಹೆಸರಿನಲ್ಲಿ ಸ್ಥಾಪನೆಯಾಗಿರುವ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ಸಾಹಿತ್ಯದ ತೂಗುಯ್ಯಾಲೆಯ ಜೊತೆಗೆ ಈಗ ದೇಶದ ರಕ್ಷಣಾ ಪಡೆಯ ಹೆಮ್ಮೆಯ ಪ್ರತೀಕವಾದ ‘ಮಿಗ್-21’ ಯುದ್ಧ ವಿಮಾನವನ್ನು ಸಾಹಿತ್ಯಾಸಕ್ತರು, ಶಾಲಾ ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಕರಾವಳಿಯ ಜನ ಕಣ್ತುಂಬಿಕೊಳ್ಳಬಹುದು.
ಭೂಮಿಗೆ ಇಳಿದ ಬಾನಾಡಿ: ಮಿಗ್ ಯುದ್ಧವಿಮಾನದ ರೋಚಕ ಪಯಣ

ವಾಯುಪಡೆಯಲ್ಲಿ 60 ವರ್ಷಗಳ ಸೇವೆಯಿಂದ ನಿವೃತ್ತಿಗೊಂಡಿರುವ ಈ ಮಿಗ್ ಯುದ್ಧವಿಮಾನವು ಇಡೀ ಕರಾವಳಿ ಭಾಗಕ್ಕೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ. ರಾಜ್ಯಸಭಾ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯವರ ಕನಸಿನ ಕೂಸಾದ ಈ ಯೋಜನೆ, ಹಲವು ವರ್ಷಗಳ ಸತತ ಪ್ರಯತ್ನದ ಫಲವಾಗಿ ಇಂದು ಸಾಕಾರಗೊಂಡಿದೆ. ಕಾರಂತರ ಹುಟ್ಟೂರಾದ ಕೋಟದಲ್ಲಿ, ಅವರ ನೆನಪಿನಂಗಳದಲ್ಲಿ ಈ ಯುದ್ಧವಿಮಾನವನ್ನು ಪ್ರದರ್ಶನಕ್ಕಾಗಿ ಸ್ಥಾಪಿಸಿರುವುದು ಸಾಹಿತ್ಯ ಮತ್ತು ವಿಜ್ಞಾನದ ಅಪರೂಪದ ಸಂಗಮದಂತಿದೆ.
ಸತತ ಪ್ರಯತ್ನದ ಹಾದಿ: ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದೇನು? :
ಈ ಕುರಿತು ಸಂತಸ ಹಂಚಿಕೊಂಡಿರುವ ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರು, “ನಮ್ಮೂರಿನ ಕಾರಂತ ಥೀಮ್ ಪಾರ್ಕ್ ಅಂಗಳಕ್ಕೆ ಮಿಗ್-21 ಯುದ್ಧವಿಮಾನ ಬಂದಿರುವುದು ನಮಗೆಲ್ಲರಿಗೂ ಅತ್ಯಂತ ಖುಷಿಯ ವಿಚಾರ. ಇಲ್ಲಿಗೆ ಬರುವ ಮಕ್ಕಳಿಗೆ ಮತ್ತು ಪ್ರವಾಸಿಗರಿಗೆ ವೀಕ್ಷಣೆಗೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದ ನಾನು ಬಹಳ ವರ್ಷಗಳಿಂದ ಈ ಪ್ರಯತ್ನದಲ್ಲಿದ್ದೆ”.
“ಮನೋಹರ್ ಪರಿಕ್ಕರ್ ರಕ್ಷಣಾ ಸಚಿವರಾಗಿದ್ದಾಗ ನಳಿನ್ ಕುಮಾರ್ ಕಟೀಲ್ ಅವರ ಮೂಲಕ ಮನವಿ ಸಲ್ಲಿಸಿದ್ದೆ. ನಂತರ ನಿರ್ಮಲಾ ಸೀತಾರಾಮನ್ ಅವರ ಬಳಿಯೂ ಪ್ರಸ್ತಾಪಿಸಿದ್ದೆ. ಇದೀಗ ರಾಜನಾಥ್ ಸಿಂಗ್ ಅವರು ರಕ್ಷಣಾ ಮಂತ್ರಿಯಾಗಿರುವಾಗ, ನಾನೇ ಸ್ವತಃ ಸಂಸದನಾಗಿ ಮನವಿ ಮಾಡಿದ ಹಿನ್ನೆಲೆಯಲ್ಲಿ, ಕಾರಂತ ಥೀಮ್ ಪಾರ್ಕ್ ಮೇಲಿನ ಪ್ರೀತಿಯಿಂದ ಅವರು ಇದನ್ನು ಮಂಜೂರು ಮಾಡಿದ್ದಾರೆ,” ಎಂದು ಅವರು ಸ್ಮರಿಸಿದರು.
ಸುಮಾರು 15 ಜನ ತಜ್ಞ ಇಂಜಿನಿಯರ್ಗಳ ತಂಡ, ಸತತ 15 ದಿನಗಳ ಕಾಲ ಶ್ರಮಿಸಿ ಈ ಯುದ್ಧವಿಮಾನವನ್ನು ಜೋಡಿಸುವ ಕಾರ್ಯವನ್ನು ಪೂರೈಸಿದ್ದಾರೆ.
“ಕರ್ನಾಟಕದಲ್ಲಿ ಶಿವಮೊಗ್ಗ ಮತ್ತು ಬೆಂಗಳೂರನ್ನು ಬಿಟ್ಟರೆ, ಗ್ರಾಮೀಣ ಭಾಗವಾದ ನಮ್ಮ ಕೋಟದಲ್ಲಿ ಇಂತಹದೊಂದು ಯುದ್ಧವಿಮಾನ ನೆಲೆಸಿರುವುದು ಹೆಮ್ಮೆಯ ಸಂಗತಿ. ಇದು ಕಾರಂತರ ಥೀಮ್ ಪಾರ್ಕ್ಗೆ ವಿಶೇಷ ಗೌರವ ತಂದಿದೆ,” ಎಂದು ಪೂಜಾರಿಯವರು ಅಭಿಪ್ರಾಯಪಟ್ಟರು.
ಥೀಮ್ ಪಾರ್ಕ್: ಸಾಹಿತ್ಯ ಲೋಕದ ದೃಶ್ಯಕಾವ್ಯ :
2011ರಲ್ಲಿ ಉದ್ಘಾಟನೆಗೊಂಡ ಈ ಥೀಮ್ ಪಾರ್ಕ್, ಕಾರಂತರ ಸಾಹಿತ್ಯ ಕೃತಿಗಳ ಪಾತ್ರಗಳಿಗೆ ಜೀವ ತುಂಬುವ ಸಾಕ್ಷಿಕಟ್ಟೆಯಾಗಿದೆ.
ಮೂಕಜ್ಜಿಯ ಕನಸುಗಳು: ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿಯ ನಾಯಕಿ ಮೂಕಜ್ಜಿಯು ಮಕ್ಕಳಿಗೆ ಕಥೆ ಹೇಳುತ್ತಿರುವ ಶಿಲ್ಪವು ಇಲ್ಲಿನ ಪ್ರಮುಖ ಆಕರ್ಷಣೆ.
ಚೋಮನ ದುಡಿ: ಚೋಮನು ಡೊಳ್ಳು ಬಾರಿಸುವ ದೃಶ್ಯವು ನೋಡುಗರ ಮನ ಕದಡುತ್ತದೆ.
ಕೂಸಣ್ಣನ ಎತ್ತಿನ ಗಾಡಿ: ಕಾರಂತರನ್ನು ಕರೆದೊಯ್ಯುತ್ತಿದ್ದ ಕೋಟ ಗ್ರಾಮದ ಕೊನೆಯ ಎತ್ತಿನ ಗಾಡಿಯಾಗಿದ್ದ ಕೂಸಣ್ಣನ ಗಾಡಿಯೂ ಇಲ್ಲಿ ಶಿಲ್ಪವಾಗಿ ಶಾಶ್ವತ ಸ್ಥಾನ ಪಡೆದಿದೆ. ಕೂಸಣ್ಣನ ಶಿಲ್ಪ ರಚಿಸುವಾಗ ಖುದ್ದು ಕೂಸಣ್ಣನೇ ಬಂದು ವೇಷ ಧರಿಸಿ ಕುಳಿತಿದ್ದು ಇತಿಹಾಸ.
ಜಟಾಯು ಮತ್ತು ರಾಧಾ-ಕೃಷ್ಣ:
ಪ್ರವೇಶ ದ್ವಾರದಲ್ಲಿ ಕಾರಂತರ ಶಿಷ್ಯ ಸಂಜೀವ್ ಪೂಜಾರಿಯವರೇ ಮಾದರಿಯಾಗಿ ನಿಂತು ರಚಿಸಲಾದ ಜಟಾಯು ಶಿಲ್ಪ ಹಾಗೂ ಕೆ.ಕೆ. ಹೆಬ್ಬಾರರ ಕಲ್ಪನೆಯ ರಾಧಾ-ಕೃಷ್ಣರ ಶಿಲ್ಪಗಳು ಉದ್ಯಾನದ ಅಂದವನ್ನು ಹೆಚ್ಚಿಸಿವೆ.
ನಡೆದಾಡುವ ವಿಶ್ವಕೋಶದ ನೆನಪು :
44 ಕಾದಂಬರಿಗಳು, 14 ನಾಟಕಗಳು, ವಿಜ್ಞಾನ ಪ್ರಪಂಚ, ಬಾಲ ಪ್ರಪಂಚದಂತಹ ವಿಶ್ವಕೋಶಗಳನ್ನು ರಚಿಸಿದ ಕಾರಂತರು ಕನ್ನಡ ಸಾರಸ್ವತ ಲೋಕದ ದಿಗ್ಗಜ. ಅವರ ಬದುಕು, ಬರಹ ಮತ್ತು ಕಲಾ ಆಸಕ್ತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಥೀಮ್ ಪಾರ್ಕ್ ಮಹತ್ವದ ಪಾತ್ರ ವಹಿಸುತ್ತಿದೆ. ಇದೀಗ ಯುದ್ಧವಿಮಾನದ ಸೇರ್ಪಡೆಯು ಥೀಮ್ ಪಾರ್ಕ್ನ ಆಕರ್ಷಣೆಯನ್ನು ಇಮ್ಮಡಿಗೊಳಿಸಿದ್ದು, ವಾರದ ಏಳೂ ದಿನಗಳ ಕಾಲ (ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ) ಪ್ರವಾಸಿಗರಿಗೆ ಮುಕ್ತವಾಗಿದೆ.






















