ಬೆಂಗಳೂರು, ಡಿ.08 www.bengaluruwire.com : ಪಾರ್ಟಿ ಮೂಡ್ನಲ್ಲಿದ್ದವರ ಕೇಕೆ, ಡಿಜೆ ಸೌಂಡ್ಗೆ ಕುಣಿದು ಕುಪ್ಪಳಿಸುತ್ತಿದ್ದ ಯುವ ಸಮೂಹ… ಕ್ಷಣಾರ್ಧದಲ್ಲಿ ಆವರಿಸಿದ ದಟ್ಟ ಹೊಗೆ, ಚೀರಾಟ! ಗೋವಾದ ನೈಟ್ ಕ್ಲಬ್ ಒಂದರಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 25 ಜನರು ಸಜೀವ ದಹನವಾಗಿದ್ದು, ಈ ಘಟನೆ ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.
ಡಿಸೆಂಬರ್ 31 ರಂದು ಬೆಂಗಳೂರಿನಲ್ಲಿ ನಡೆಯುವ ಅದ್ದೂರಿ ನ್ಯೂ ಇಯರ್ ಆಚರಣೆಗೆ ದಿನಗಣನೆ ಆರಂಭವಾಗಿದೆ. ಆದರೆ, ಗೋವಾದಲ್ಲಿ ಎಲೆಕ್ಟ್ರಿಕ್ ದೀಪ ಹೊತ್ತಿ ಉರಿದು, ಅದರಿಂದ ಉಂಟಾಗಿ ಸಂಭವಿಸಿದ ಅಗ್ನಿ ದುರಂತವು, ಕಾಸ್ಮೊಪಾಲಿಟನ್ ನಗರವಾದ ಬೆಂಗಳೂರಿನ ಸಾವಿರಾರು ಪಬ್, ಬ್ರೂವರಿ, ರೂಫ್ ಟಾಪ್ ಲಾಂಜ್ಗಳಲ್ಲಿನ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬೇಕಾಬಿಟ್ಟಿ ಪಾರ್ಟಿಗಳಿಗೆ ಬೀಳುತ್ತಾ ಬ್ರೇಕ್? :
ಐಟಿ ಸಿಟಿಯಲ್ಲಿ ವೀಕೆಂಡ್ ಬಂತೆಂದರೆ ಸಾಕು, ಪಬ್ ಸಂಸ್ಕೃತಿ ಜೋರಾಗಿರುತ್ತದೆ. ಅದರಲ್ಲೂ ಹೊಸ ವರ್ಷದ ಹಿಂದಿನ ದಿನ (ಡಿ.31) ನಗರದ ಪ್ರತಿಷ್ಠಿತ ನೈಟ್ ಕ್ಲಬ್, ಟ್ರೆಂಡಿ ಬಾರ್, ರೆಸ್ಟೋರೆಂಟ್ ಮತ್ತು ರೂಫ್ ಟಾಪ್ಗಳಲ್ಲಿ ಕಾಲಿಡಲು ಜಾಗವಿರುವುದಿಲ್ಲ. ಮಧ್ಯರಾತ್ರಿ 12 ಗಂಟೆಗೆ ಕೇಕ್ ಕತ್ತರಿಸುವಾಗ ಒಳಾಂಗಣದಲ್ಲೇ (Indoor) ಸಣ್ಣ ಸಣ್ಣ ಪಟಾಕಿ (Sparklers/Crackers) ಹಚ್ಚುವುದು, ಎಲೆಕ್ಟ್ರಿಕ್ ದೀಪಾಲಂಕಾರ ಮಾಡುವುದು ಸಾಮಾನ್ಯವಾಗಿದೆ. ಆದರೆ ಗೋವಾ ದುರಂತಕ್ಕೆ ಇದೇ ರೀತಿಯ ಪಟಾಕಿ ಅವಘಡ ಕಾರಣವಾಗಿರುವುದರಿಂದ, ಬೆಂಗಳೂರಿನ ಕ್ಲಬ್ ಮಾಲೀಕರು ಇಂತಹ ಅಪಾಯಕಾರಿ ವಸ್ತುಗಳ ಬಳಕೆಗೆ ಕಡಿವಾಣ ಹಾಕಲೇಬೇಕಾದ ಅನಿವಾರ್ಯತೆ ಎದುರಾಗಿದೆ.


ಇಲಾಖೆಗಳ ಕಣ್ಗಾವಲು ಅಗತ್ಯ:
ಅನಾಹುತ ಸಂಭವಿಸಿದ ಮೇಲೆ ಪರಿಹಾರ ಘೋಷಿಸುವುದಕ್ಕಿಂತ, ಅನಾಹುತವನ್ನು ತಡೆಯುವುದೇ ಜಾಣತನ. ಈ ನಿಟ್ಟಿನಲ್ಲಿ ನಗರ ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ಅಬಕಾರಿ ಇಲಾಖೆಗಳು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕಿದೆ. ನಿಯಮ ಮೀರಿ ಮದ್ಯ ಮಾರಾಟ ಮಾಡುವುದು, ಅಗ್ನಿ ಸುರಕ್ಷತಾ ಸಾಧನಗಳಿಲ್ಲದ ಕಟ್ಟಡಗಳಲ್ಲಿ ಪಾರ್ಟಿ ಆಯೋಜಿಸುವುದರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿದರೆ ಮಾತ್ರ ಗೋವಾ ಮಾದರಿಯ ದುರಂತಗಳನ್ನು ತಪ್ಪಿಸಲು ಸಾಧ್ಯ.

ಪ್ರಾಣಾಪಾಯಕ್ಕೆ ಕುತ್ತಾಗದಿರಲಿ ನಿರ್ಲಕ್ಷ್ಯ:
ಬೆಂಗಳೂರಿನಲ್ಲಿ ಹುಟ್ಟುಹಬ್ಬ, ಉದ್ಯೋಗದಲ್ಲಿ ಬಡ್ತಿ, ಅಥವಾ ಬ್ಯಾಚುಲರ್ಸ್ ಪಾರ್ಟಿಗಳಿಗೆ ಕೊರತೆಯಿಲ್ಲ. ದಶಕಗಳಿಂದಲೂ ದೇಶದ ಇತರ ನಗರಗಳಿಗಿಂತ ಭಿನ್ನವಾಗಿ ಮತ್ತು ಅದ್ದೂರಿಯಾಗಿ ಇಲ್ಲಿ ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಆದರೆ, ರೂಫ್ ಟಾಪ್ ಲಾಂಜ್ಗಳು ಮತ್ತು ಪಬ್ಗಳಲ್ಲಿ ಈ ಹಿಂದೆಯೂ ಸಣ್ಣಪುಟ್ಟ ಅಗ್ನಿ ಅವಘಡಗಳು ಸಂಭವಿಸಿದ ಉದಾಹರಣೆಗಳಿವೆ.
ಜೀವ ಮತ್ತು ಜೀವನ ಎರಡೂ ಮುಖ್ಯ. ಆದ್ದರಿಂದ, ಹೊಸ ವರ್ಷವನ್ನು ಸ್ವಾಗತಿಸುವ ಭರದಲ್ಲಿ ಯಾವುದೇ ಪ್ರಾಣಹಾನಿಯಾಗದಂತೆ ನೋಡಿಕೊಳ್ಳುವುದು ಪಬ್ ಮಾಲೀಕರು, ಸರ್ಕಾರ ಮತ್ತು ಮೋಜು ಮಸ್ತಿ ಮಾಡುವ ಸಾರ್ವಜನಿಕರ ಜವಾಬ್ದಾರಿಯಾಗಿದೆ. ಗೋವಾ ದುರಂತದಿಂದ ಪಾಠ ಕಲಿತು, ಮುನ್ನೆಚ್ಚರಿಕೆ ವಹಿಸೋಣ.























