ಉಡುಪಿ, ಡಿ.05 www.bengaluruwire.com : ಬೆಂಗಳೂರಿನ ಸಮಾನ ಮಾಧ್ಯಮ ಮಿತ್ರರ ವೇದಿಕೆಯಾದ ‘ವಿಕಾಸ’ ಹಾಗೂ ಉಡುಪಿ ಪುತ್ತಿಗೆ ಮಠದ ಆಧ್ಯಾತ್ಮಿಕ ಮಾಸ ಪತ್ರಿಕೆ ‘ಸುಗುಣ ಮಾಲಾ’ ಸಹಯೋಗದಲ್ಲಿ ಡಿ.06 ರ ಶನಿವಾರದಂದು ಉಡುಪಿಯ ಶ್ರೀ ಕೃಷ್ಣ ಮಠದ ಗೀತಾ ಮಂದಿರದಲ್ಲಿರುವ ಪುತ್ತಿಗೆ ನರಸಿಂಹ ಸಭಾಭವನದಲ್ಲಿ “ಕರಾವಳಿ ವಿಕಾಸ ಸಂಭ್ರಮ-2025” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವು ಬೆಳಿಗ್ಗೆ 9:30 ರಿಂದ ಸಂಜೆ 5 ರವರೆಗೆ ನಡೆಯಲಿದ್ದು, ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು ಹಾಗೂ ಕಿರಿಯ ಯತಿಗಳಾದ ಶ್ರೀ ಶ್ರೀಸುಶ್ರೀಂದ್ರತೀರ್ಥರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಖ್ಯಾತ ವೈದಿಕ ವಿಜ್ಞಾನ ಜ್ಯೋತಿಷಿ ಡಾ. ಪಂ. ಪ್ರಸನ್ನಾಚಾರ್ಯ ಎಸ್. ಕಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಗಣ್ಯರ ಉಪಸ್ಥಿತಿ ಹಾಗೂ ವಿಚಾರ ಗೋಷ್ಠಿ:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಉಡುಪಿ ಶಾಸಕ ಯಶಪಾಲ್ ಸುವರ್ಣ ಹಾಗೂ ಮಾಜಿ ಶಾಸಕರಾದ ರಘುಪತಿ ಭಟ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

‘ಸುಗುಣ ಮಾಲಾ’ ಪತ್ರಿಕೆಯ 40ನೇ ವಾರ್ಷಿಕೋತ್ಸವದ ಪ್ರಯುಕ್ತ “ಆಧ್ಯಾತ್ಮಿಕ ಮಾಸ ಪತ್ರಿಕೆ ‘ಸುಗುಣ ಮಾಲಾ’ ನಡೆದು ಬಂದ ದಾರಿ” ವಿಷಯದ ಕುರಿತು ಓಂಪ್ರಕಾಶ್ ಭಟ್ ಅವರು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ ನಡೆಯಲಿರುವ “ಮಾಧ್ಯಮ ಕ್ಷೇತ್ರದ ಸವಾಲುಗಳು” ಕುರಿತಾದ ವಿಚಾರ ಗೋಷ್ಠಿಯಲ್ಲಿ ಪ್ರೊ. ಸತ್ಯಬೋಧ ಜೋಶಿ, ಡಾ. ಆಶಾ ಕೃಷ್ಣಸ್ವಾಮಿ ಮತ್ತು ನಿತ್ಯಾನಂದ ಎಸ್ ಪಡ್ರೆ ಅವರು ವಿಷಯ ಮಂಡಿಸಲಿದ್ದು, ಶ್ರೀರಾಜ್ ಗುಡಿ ಅವರು ಗೋಷ್ಠಿಯನ್ನು ನಡೆಸಿಕೊಡಲಿದ್ದಾರೆ.
ವಿಪ್ರ ಮಾಧ್ಯಮ ಸಾಧಕರಿಗೆ ಪ್ರಶಸ್ತಿ ಪ್ರದಾನ:
ಮಾಧ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ವಿವಿಧ ಸ್ಮರಣಾರ್ಥ ಪ್ರಶಸ್ತಿಗಳನ್ನು ಈ ಕೆಳಗಿನ ಸಾಧಕರಿಗೆ ಪ್ರದಾನ ಮಾಡಲಾಗುವುದು:
* ಪಾ. ವೆಂ. ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ: ಕಿರಣ್ ಮಂಜನಬೈಲು (ಸಂಯುಕ್ತ ಕರ್ನಾಟಕ).
* ಬನ್ನಂಜೆ ಗೋವಿಂದಾಚಾರ್ಯ ಸ್ಮರಣಾರ್ಥ ಪ್ರಶಸ್ತಿ: ಡಾ.ಮಂದಾರ ರಾಜೇಶ್ ಭಟ್.
* ಬನ್ನಂಜೆ ರಾಮಾಚಾರ್ಯ ಸ್ಮರಣಾರ್ಥ ಪ್ರಶಸ್ತಿ: ಸಾಂತೂರು ಶ್ರೀನಿವಾಸ ತಂತ್ರಿ.
* ಕೊಡೆತ್ತಾರು ಅನಂತಪದ್ಮನಾಭ ಉಡುಪ ಸ್ಮರಣಾರ್ಥ ಪ್ರಶಸ್ತಿ: ಶ್ಯಾಮ್ ಹೆಬ್ಬಾರ್.ಎಸ್ (ಬೆಂಗಳೂರು ವೈರ್).
* ದಾಮೋದರ ಕಕ್ರಣ್ಣಾಯ ಸ್ಮರಣಾರ್ಥ ಪ್ರಶಸ್ತಿ: ಚಂದ್ರಶೇಖರ ಕುಳಮರ್ವ (ಉಪಯುಕ್ತ ನ್ಯೂಸ್).
* ಮಾಧವ ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ: ಆರ್. ಸಿ. ಭಟ್ ಸುಳ್ಯ (ವಿಜಯ ಕರ್ನಾಟಕ).
* ದಾಮೋದರ ಐತಾಳ ಸ್ಮರಣಾರ್ಥ ಪ್ರಶಸ್ತಿ: ಶ್ವೇತಾ ಇಂದಾಜೆ (ಆಕಾಶವಾಣಿ).
* ಸಂತೋಷ್ ಕುಮಾರ್ ಗುಲ್ವಾಡಿ ಸ್ಮರಣಾರ್ಥ ಪ್ರಶಸ್ತಿ: ವೆಂಕಟೇಶ್ ಪೈ (ಸಂಜೆ ಪ್ರಭ).
* ಈಶ್ವರಯ್ಯ ಅನಂತಪುರ ಸ್ಮರಣಾರ್ಥ ಪ್ರಶಸ್ತಿ: ಶ್ರೀಕೃಷ್ಣ ಭಟ್ ಮಾಯ್ಲೆಂಗಿ (ವೈದ್ಯ ಲೋಕ).
* ಮಂಜುನಾಥ್ ಭಟ್ ಸ್ಮರಣಾರ್ಥ ಪ್ರಶಸ್ತಿ: ಹರೀಶ್ ಕೆ. ಅರು (ಹೊಸ ದಿಗಂತ).
ಇದರೊಂದಿಗೆ, ವಿದುಷಿ ಗಾಯತ್ರಿ ಚಂದ್ರಶೇಖರ್, ಪ್ರೊ. ಬಿ.ಎಸ್. ಶಿವಕುಮಾರ್ ಹಾಗೂ ಅಗರಿ ರಾಘವೇಂದ್ರ ರಾವ್ ಅವರಿಗೆ ‘ವಿಕಾಸ ಉಡುಪಿ ಶ್ರೀಕೃಷ್ಣ ಸದ್ಭಾವನಾ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ವೈದ್ಯರಾದ ಡಾ. ಆನಂದ ಶೆಡ್ಡಾಳ ಅವರಿಗೆ ‘ವಿಕಾಸ ವೈದ್ಯ ರತ್ನ’ ಹಾಗೂ ವಿದುಷಿ ಪವನ ಬಿ. ಆಚಾರ್ ಅವರಿಗೆ ‘ವಿಕಾಸ ಸಂಗೀತ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪುಸ್ತಕ ಬಿಡುಗಡೆ ಹಾಗೂ ಹಿರಿಯರಿಗೆ ಗೌರವ:
ಸಮಾರಂಭದಲ್ಲಿ ಇಂದಿರಾ ನಾಡಿಗ್ ಅವರ ‘ಹಸಿಗನಸು’, ಆದಿತ್ಯ ಪ್ರಸಾದ್ ಅವರ ‘ಗೋಪಾಳದಿಂದ ನೇಪಾಳದೆಡೆಗೆ’ ಮತ್ತು ಉಮೇಶ್ ದತ್ ಅವರ ‘ದಿ ಅಸ್ತ್ರ ಕೋಡೆಕ್ಸ್’ ಕೃತಿಗಳು ಬಿಡುಗಡೆಗೊಳ್ಳಲಿವೆ. ಇದೇ ವೇಳೆ ‘ನಮ್ಮ ಹಿರಿಯರು-ನಮ್ಮ ಹೆಮ್ಮೆ’ ಅಭಿಯಾನದಡಿ ಕುಂದಾಪುರದ ಖ್ಯಾತ ವಕೀಲರಾದ ಎ.ಎಸ್.ಎನ್. ಹೆಬ್ಬಾರ್, ವಿಜಯ ಕುಮಾರ್ ಹೊಳ್ಳ ಸೇರಿದಂತೆ ಸಮಾಜದ ವಿವಿಧ ಗಣ್ಯ ಹಿರಿಯರನ್ನು ಗೌರವಿಸಲಾಗುವುದು.
ಈ ಸಮಾರಂಭವು ಕರಾವಳಿಯ ಸಾಂಸ್ಕೃತಿಕ ಹಾಗೂ ಬೌದ್ಧಿಕ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಬೇಕೆಂದು ವಿಕಾಸದ ಪ್ರಧಾನ ಕಾರ್ಯದರ್ಶಿ ಹನುಮೇಶ್ ಕೆ. ಯಾವಗಲ್ ಹಾಗೂ ಅಧ್ಯಕ್ಷರಾದ ಶ್ರೀನಾಥ್ ಜೋಶಿ ಪ್ರಕಟಣೆಯಲ್ಲಿ ಕೋರಿದ್ದಾರೆ.























