ಬೆಂಗಳೂರು ನ.19 www.bengaluruwire.com : ನಗರದಲ್ಲಿ ನೀರಿನ ಸೋರಿಕೆ ಮತ್ತು ಅಕ್ರಮ ಸಂಪರ್ಕಗಳಿಗೆ ಕಡಿವಾಣ ಹಾಕಲು ಬೆಂಗಳೂರು ಜಲಮಂಡಳಿ (BWSSB) ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ರೋಬೋಟಿಕ್ ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನದ ಜೊತೆಗೆ ವಿಶೇಷ ‘ಬ್ಲೂ ಫೋರ್ಸ್’ ದಳವನ್ನು ಕಾರ್ಯಾಚರಣೆಗೆ ಇಳಿಸಲಿದೆ.
ಬಿಡ್ಲ್ಯುಎಸ್ಎಸ್ ಅಧ್ಯಕ್ಷರಾದ ವಿ. ರಾಮ್ ಪ್ರಸಾತ್ ಮನೋಹರ್ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಈ ನೂತನ ಕಾರ್ಯಕ್ರಮಕ್ಕೆ ಇಂದು (ಬುಧವಾರ) ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ರೋಬೋಟಿಕ್ಸ್ ಮತ್ತು ಎಐ: ಸೋರಿಕೆ ಪತ್ತೆಗೆ ನಿಖರ ಪರಿಹಾರ :
ಈ ಯೋಜನೆಯ ಪ್ರಮುಖ ಆಕರ್ಷಣೆಯೆಂದರೆ ನೀರಿನ ಸೋರಿಕೆಗಳನ್ನು ಪತ್ತೆಹಚ್ಚಲು ಮತ್ತು ಅನಗತ್ಯವಾಗಿ ರಸ್ತೆ ಅಗೆಯುವುದನ್ನು ತಪ್ಪಿಸಲು ರೋಬೋಟಿಕ್ ಮತ್ತು ಎಐ ತಂತ್ರಜ್ಞಾನದ ಅಳವಡಿಸಲಾಗುತ್ತದೆ.


“ಸೋರಿಕೆಯ ನಿಖರ ಸ್ಥಳವನ್ನು ಪತ್ತೆಹಚ್ಚಲು ಮಂಡಳಿಯು ಪ್ರಮುಖ ರೋಬೋಟಿಕ್ ತಂತ್ರಜ್ಞಾನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರೋಬೋ ಪರೀಕ್ಷೆಯಿಂದ ದೋಷದ ಸ್ಥಳ ನಿಖರವಾಗಿ ಪತ್ತೆಯಾಗುವುದರಿಂದ, ರಸ್ತೆ ತೋಡುವಿಕೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ಇದು ದೂರು ಪರಿಹಾರ ಪ್ರಕ್ರಿಯೆಗೆ ವೇಗ ನೀಡುತ್ತದೆ,” ಎಂದು ರಾಮ್ ಪ್ರಸಾತ್ ಮನೋಹರ್ ವಿವರಿಸಿದ್ದಾರೆ.
ತಂತ್ರಜ್ಞಾನದ ಉಪಯೋಗಗಳು ಹೀಗಿವೆ:
* ಪೈಪ್ಲೈನ್ಗಳ ಒಳಭಾಗದ ನಿಖರ ಪರಿಶೀಲನೆ.
* ಎಐ ಆಧಾರಿತ ನಿಖರವಾದ ಲೀಕೇಜ್ ಸ್ಥಳ ಪತ್ತೆ.
* ದೋಷ ಪತ್ತೆಹಚ್ಚುವಿಕೆ ಮತ್ತು ಸಂಪೂರ್ಣ ಪೈಪ್ಲೈನ್ ಜಾಲದ ಡಿಜಿಟಲ್ ಮ್ಯಾಪಿಂಗ್.
ಪ್ರಸ್ತುತ ಶೇ. 28ರಷ್ಟಿರುವ ನೀರಿನ ನಷ್ಟವನ್ನು ಈ ವಿನೂತನ ಉಪಕ್ರಮದಿಂದ ಗಣನೀಯವಾಗಿ ಕಡಿತಗೊಳಿಸುವ ಗುರಿಯನ್ನು ಬಿಡ್ಲ್ಯುಎಸ್ಎಸ್ ಬಿ ಹೊಂದಿದೆ.
‘ಬ್ಲೂ ಫೋರ್ಸ್’ ವಿಶೇಷ ದಳ ಕಾರ್ಯಾಚರಣೆ :

ತಂತ್ರಜ್ಞಾನದ ಜೊತೆಗೆ, ಕಾನೂನು ಜಾರಿಗೊಳಿಸಲು ಮಂಡಳಿಯು ‘ಬ್ಲೂ ಫೋರ್ಸ್’ ಎಂಬ ವಿಶೇಷ ದಳವನ್ನು ರಚಿಸಿದೆ. ಪ್ರತಿ ಉಪವಿಭಾಗಕ್ಕೆ ತಲಾ ಮೂವರು ಸದಸ್ಯರ ತಂಡವನ್ನು (ಒಟ್ಟು 16 ತಂಡಗಳು) ನಿಯೋಜಿಸಲಾಗಿದ್ದು, ಈ ದಳವು ಈ ವಾರದಿಂದಲೇ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.
ಈ ದಳದ ಮುಖ್ಯ ಉದ್ದೇಶಗಳು:
* ಅಕ್ರಮ ನೀರು ಮತ್ತು ಒಳಚರಂಡಿ ಸಂಪರ್ಕಗಳನ್ನು ಪತ್ತೆಹಚ್ಚುವುದು.
* ಅನಧಿಕೃತವಾಗಿ ನೀರು ಸೋರುವಿಕೆ ಮತ್ತು ಬೈಪಾಸ್ ಸಂಪರ್ಕಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.
* ನೀರಿನ ನ್ಯಾಯಯುತ ವಿತರಣೆ ಖಚಿತಪಡಿಸುವುದು.
* ಮಂಡಳಿಗೆ ಆಗುತ್ತಿರುವ ಭಾರಿ ಆರ್ಥಿಕ ನಷ್ಟವನ್ನು ತಡೆಯುವುದು.
ಬಿಡ್ಲ್ಯುಎಸ್ಎಸ್ ಬಿ ಅಧ್ಯಕ್ಷರು, “ಅಕ್ರಮ ಸಂಪರ್ಕಗಳಿಂದ ಮಂಡಳಿಗೆ ಭಾರಿ ನಷ್ಟ ಉಂಟಾಗುತ್ತದೆ. ತಂತ್ರಜ್ಞಾನ ಮತ್ತು ಕಾನೂನು ಜಾರಿಗೊಂಡು ಎಲ್ಲ ಉಲ್ಲಂಘನೆಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ,” ಎಂದು ಒತ್ತಿ ಹೇಳಿದ್ದಾರೆ.























