ಬೆಂಗಳೂರು, ನ.17 www.bengaluruwire.com : ರಾಜಧಾನಿ ಬೆಂದಕಾಳೂರಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾದ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆ ನಡೆಯುವ ಬಸವನಗುಡಿ ದೇಗುಲದ ಮುಂಭಾಗ ಕಡಲೆಕಾಯಿ ವ್ಯಾಪಾರಿಗಳಿಗಿಂತ ಬಾಂಗ್ಲಾ ನುಸುಳುಕೋರರು ಬೀದಿ ವ್ಯಾಪಾರಿಗಳ ಸೋಗಿನಲ್ಲಿ ಬಳೆ, ಕಿವಿಯೋಲೆ, ಫೊಟೊ ಫ್ರೇಮ್, ಬಲೂನು ಮಾರಾಟ ಮಾಡುವವರಿಂದ ತುಂಬಿ ಹೋಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಆ ಮೂಲಕ ಮೊದಲ ದಿನವೇ ಕಡಲೆ ಕಾಯಿ ಪರಿಷೆ ಎಂಬುದಕ್ಕಿಂತ ಅಕ್ರಮ ಒಳನುಸುಳು ಕೋರರ ಪರಿಷೆ ಎಂಬುವಂತಿತ್ತು ಎಂದು ಈ ಬಾರಿ ಪರಿಷೆಗೆ ಬಂದ ಬಹುತೇಕರ ಅಭಿಪ್ರಾಯವಾಗಿತ್ತು.
ಬಸವನಗುಡಿಯಲ್ಲಿ ಸಾಮಾನ್ಯವಾಗಿ ಕಡೆ ಕಾರ್ತಿಕ ಸೋಮವಾರದಂದು ಕಡಲೆಕಾಯಿ ಪರಿಷೆ ನಡೆಯುವುದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ವಾಡಿಕೆ. ಸುಂಕ ಪಡೆದು ಅಂಗಡಿಗಳಿಗೆ ವ್ಯಾಪಾರ ಮಾಡಲು ಮುಜರಾಯಿ ಇಲಾಖೆ ಈ ಹಿಂದೆ ಅನುಮತಿ ನೀಡುತ್ತಿತ್ತು. ಯಾವಾಗ ಇದರಲ್ಲೂ ಅಕ್ರಮಗಳು ನಡೆಯುತ್ತಿದೆ ಎಂಬ ವಿಷಯ ಕೇಳಿ ಬಂದ ನಂತರ ಕಳೆದ ವರ್ಷದಿಂದ ವ್ಯಾಪಾರಿಗಳಿಗೆ ಸುಂಕರಹಿತವಾಗಿ ಬಸವನಗುಡಿ ರಸ್ತೆ ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ ತರಹೇವಾರಿ ಅಂಗಡಿಗಳನ್ನಿಡಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೇ ಬಂಡವಾಳ ಮಾಡಿಕೊಂಡ ಸ್ಥಳೀಯರಲ್ಲದ ಹಾಗೂ ಬಾಂಗ್ಲಾದೇಶದ ಒಳನುಸುಳುಕೋರರ ತಂಡವು ವ್ಯಾಪಾರಿಗಳ ಸೋಗಿನಲ್ಲಿ ದೇವಸ್ಥಾನದ ಮುಂಭಾಗ ಹಾಗೂ ಬಸವನಗುಡಿ ಪರಿಷೆ ನಡೆಯುವ ಪ್ರಮುಖ ರಸ್ತೆಗಳ ತುಂಬಾ ಅಂಗಡಿಗಳನ್ನಿಟ್ಟು, ಕಡಲೆ ಕಾಯಿ ಅಂಗಡಿಗಳನ್ನಿಡಲು ಜಾಗವಿಲ್ಲದಂತೆ ಆಕ್ರಮಿಸಿಕೊಂಡಿದ್ದಾರೆ.

ಸ್ಥಳೀಯ ವ್ಯಾಪಾರಿಗಳಿಗೆ ಇಲ್ಲ ಜಾಗ :
ಹೀಗಾಗಿ ಈ ಬಾರಿ ದೇವಸ್ಥಾನ ಮುಂಭಾಗ ಹಾಗೂ ಅಕ್ಕಪಕ್ಕ ಊರುಗಳಾದ ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಹೀಗೆ ರಾಜ್ಯದ ಹಲವು ಭಾಗಗಳಿಂದ ಮತ್ತು ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದಲೂ ಕಡಲೆಕಾಯಿಯನ್ನು ತಂದು ಮಾರಾಟ ಮಾಡುವವರ ಪ್ರಮಾಣ ಕಡಿಮೆಯಿದೆ.

ಈ ಬಗ್ಗೆ ಬೆಂಗಳೂರು ವೈರ್ ಜೊತೆ ಮಾತನಾಡಿರುವ ಬಸವನಗುಡಿ ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್, ಕಳೆದ ವರ್ಷದಿಂದ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಸುಂಕರಹಿತವಾಗಿ ರಸ್ತೆ ಹಾಗೂ ರಸ್ತೆಬದಿಯಲ್ಲಿ ಅಂಗಡಿ ಹಾಕಲು ಮುಜರಾಯಿ ಅವಕಾಶ ಕಲ್ಪಿಸಿದೆ. ಇದೇ ಹೊತ್ತಿನಲ್ಲಿ ಇಂತಹುದೇ ಜಾಗದಲ್ಲಿ ಇಂತಿಂತ ಅಂಗಡಿಗಳೇ ಬರಬೇಕು ಅಂತ ನಿಗದಿಪಡಿಸದ ಕಾರಣ ಹಾಗೂ ಸಾಂಪ್ರದಾಯದಂತೆ ಕಡಲೇ ಕಾಯಿ ಮಾರಾಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡದ ಕಾರಣ ಬಸವನಗುಡಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಕಡಲೇಕಾಯಿ ಅಂಗಡಿಗಳ ಸಂಖ್ಯೆ ಕುಸಿದಿದೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

“ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಅಕ್ರಮ ಬಾಂಗ್ಲಾ ನುಸುಳುಕೋರರು ದೇವಸ್ಥಾನದ ಮುಂಭಾಗ ಬಳೆ, ಕಿವಿಯೋಲೆ, ಬಲೂನು ಮತ್ತಿತರ ವ್ಯಾಪಾರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ದೇಶದ ಭದ್ರತೆಯ ದೃಷ್ಟಿ ಹಾಗೂ ಪರಿಷೆಯ ಸಂಸ್ಕೃತಿಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಕೂಡಲೇ ಈ ಬಗ್ಗೆ ಮುಜರಾಯಿ ಇಲಾಖೆ, ನಗರ ಪಾಲಿಕೆ, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ” ಎಂದು ಅವರು ಆಗ್ರಹಿಸಿದ್ದಾರೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವಿವಿಧ ಸಂಘಸಂಸ್ಥೆಗಳು ಹಾಗೂ ಕಾರ್ಯಕರ್ತರ ಜೊತೆಗೆ ಪ್ಲಾಸ್ಟಿಲ್ ರಹಿತ ಕಡಲೆಕಾಯಿ ಪರಿಷೆ ನಡೆಸಲು ಸರ್ವ ಪ್ರಯತ್ನ ನಡೆಸುತ್ತಿದ್ದರೂ, ಬಸವನಗುಡಿ ಮುಖ್ಯರಸ್ತೆಯ ಸುತ್ತಮುತ್ತಲ ಅಡ್ಡ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಎಲ್ಲೆಂದರಲ್ಲಿ ಉಗುಳುವ, ಮೂತ್ರ ವಿಸರ್ಜನೆ ಮಾಡಿ ಗಲೀಜು ಮಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಪಾಲಿಕೆ ಅಂತಹವರಿಗೆ ದಂಡ ವಿಧಿಸಿ, ಸ್ವಚ್ಛತೆ ಕಾಯ್ದುಕೊಳ್ಳಬೇಕಿದೆ.
“ಕಡಲೆಕಾಯಿ ವ್ಯಾಪಾರಿಗಳಿಗೆ ಅವಕಾಶ ಕೈತಪ್ಪಿದ್ದನ್ನು ಸರಿಪಡಿಸಲು ಪ್ರಯತ್ನ” :
“ಗಣೇಶನ ದೇವಸ್ಥಾನ ಮುಂದಿನ ರಸ್ತೆಯಲ್ಲಿ ಕಡಲೆಕಾಯಿ ಮಾರಾಟದ ಅಂಗಡಿಗಳಿಗೆ ನಿಗದಿಯಾಗಿದ್ದ ಸ್ಥಳ ಈಗ ಬೇರೆಯವರು ಆಕ್ರಮಿಸಿರುವುದನ್ನು ಬೆಂಗಳೂರು ವೈರ್ ತಮ್ಮ ಗಮನಕ್ಕೆ ತಂದಿದೆ. ದೇವಸ್ಥಾನ ಮುಂಭಾಗ ಇತರೆ ವ್ಯಾಪಾರಸ್ಥರನ್ನು ಬೇರೆ ಕಡೆ ವರ್ಗಾಯಿಸಿ, ಆ ಜಾಗದಲ್ಲಿ ಕಡಲೇಕಾಯಿ ವ್ಯಾಪಾರಿಗಳ ಅಂಗಡಿ ಹಾಕಲು ಪ್ರಯತ್ನಿಸುತ್ತೇವೆ. ಸ್ವಚ್ಛತೆ, ಭದ್ರತೆಗೆ ಆದ್ಯತೆ ನೀಡುತ್ತೇವೆ. ಮುಂದಿನ ಬಾರಿ ಕಡಲೇಕಾಯಿ ಅಂಗಡಿಗಳಿಗೆ ಇದೇ ಸ್ಥಳವನ್ನು ನಿಗದಿ ಮಾಡುತ್ತೇವೆ. ಬೆಂಗಳೂರು ವೈರ್ ಗಮನಕ್ಕೆ ತಂದ ಅಂಶಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ”.
– ರವಿಸುಬ್ರಮಣ್ಯ, ಬಸವನಗುಡಿ ಶಾಸಕ
ಪ್ರತಿ ವರ್ಷವೂ ಕಡೆಯ ಕಾರ್ತಿಕ ಸೋಮವಾರದ ದಿನ ನಡೆಯುವ ಈ ಕಡಲೆಕಾಯಿ ಪರಿಷೆಗೆ ಇಂದು ಬೆಳಗ್ಗೆ 10.40ಕ್ಕೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ಕೊಟ್ಟಿದ್ದಾರೆ.
ಬಸವಣ್ಣನಿಗೆ ಕಡಲೆಕಾಯಿ ಅಭಿಷೇಕ ಹಾಗೂ ತುಲಾಭಾರ ಮತ್ತು ಐದು ಎತ್ತುಗಳಿಗೆ ಕಡಲೆಕಾಯಿ ಗಿಡ ತಿನ್ನಿಸುವ ಮೂಲಕ ಚಾಲನೆ ನೀಡಲಾಯಿತು. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿಸುಬ್ರಮಣ್ಯ,ಶಾಸಕ ಉದಯ್ ಗರುಡಾಚಾರ್ ಮೊದಲಾದವರಿದ್ರು. ಇಂದಿನಿಂದ ನ.21 ರವರೆಗೆ ಈ ಪರಿಷೆ ನಡೆಯಲಿದೆ. ಇದೇ ಮೊದಲ ಬಾರಿಗೆ ಐದು ದಿನಗಳ ಕಾಲ ಪರಿಷೆ ನಡೆಸಲಾಗುತ್ತಿದೆ.
ಈ ಬಾರಿಯ ಕಡಲೆಕಾಯಿ ಪರಿಷೆಯಲ್ಲಿ ಸುಮಾರು 4-5 ಸಾವಿರ ಅಂಗಡಿಗಳಿಗೆ ಶುಲ್ಕ ರಹಿತವಾಗಿ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಮೈಸೂರಿನಂತೆ ಬಸವನಗುಡಿ ಸುತ್ತಮುತ್ತಲಿನ 7 ರಸ್ತೆಗಳಿಗೆ ಮೊದಲ ಬಾರಿಗೆ ಸಾರಿಗೆ ಮತ್ತು ಮುಜುರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರ ನಿರ್ದೇಶನದಂತೆ ಕಡಲೆಕಾಯಿ ಪರಿಷೆಯಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ.

ಅವುಗಳೆಂದರೆ ನಾರ್ತ್ ರೋಡ್ ಮುಖ್ಯರಸ್ತೆ, ಆಶ್ರಮ ಮುಖ್ಯ ರಸ್ತೆ, ಬಸವನಗುಡಿ ಮುಖ್ಯರಸ್ತೆ, ಎನ್ಆರ್ ಕಾಲೋನಿ ಮುಖ್ಯ ರಸ್ತೆ, ಕೆಆರ್ ರಸ್ತೆ, ಆರ್ ವಿ ರಸ್ತೆ ಹಾಗೂ ದೇವಸ್ಥಾನದ ಸುತ್ತಮುತ್ತಲು ಮೈಸೂರಿನ ದಸರಾದಂತೆ ವಿಶೇಷ ದೀಪಲಂಕಾರ ವಿಜೃಂಭಣೆಯ ದೀಪಾಲಂಕಾರ ಮಾಡಲಾಗಿದೆ. ಇಂದು ಸಂಜೆ 6.15ಕ್ಕೆ ಕೆಂಪಾಬುದಿ ಕೆರೆಯಲ್ಲಿ ವಿಶೇಷ ತೆಪ್ಪೋತ್ಸವ ನಡೆಯಿತು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಬಸವನಗುಡಿ ದೇಗುಲ ದರ್ಶನಕ್ಕೆ ಬರುವ ಸಾರ್ವಜನಿಕರಿಗೆ ವಿಶೇಷ ಸಾಲಿನ ದರ್ಶನ ವ್ಯವಸ್ಥೆ ಹಾಗೂ ಹಿರಿಯರಿಗೆ ವಿಶೇಷ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಅಂದ್ರೆ ಈ ಬಾರಿ ಪ್ಲಾಸ್ಟಿಕ್ ಮುಕ್ತ ಪರಿಷೆ ಮಾಡುವ ಉದ್ದೇಶದಿಂದ ಪೇಪರ್ ಬ್ಯಾಗ್ ಮತ್ತು ಹಳೆ ಬಟ್ಟೆಗಳಿಂದ ಬ್ಯಾಗ್ ಗಳನ್ನ ಸಿದ್ದಪಡಿಸಿ ಅಂಗಡಿಗಳಿಗೆ ನೀಡಲಾಗಿದೆ. ಬಸವನಗುಡಿ ವರ್ತಕರ ಸಂಘ, ಯುವಕಸಂಘ ಹಾಗೂ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಜಂಟಿಯಾಗಿ ಪರಿಷೆ ಮುಗಿಯುವ ತನಕ ಅಂದಾಜು 1 ಲಕ್ಷ ಕಾಗದದ ಕೊಟ್ಟೆಗಳನ್ನು ಪರಿಷೆಗೆ ಬರುವವರಿಗೆ ಉಚಿತವಾಗಿ ನೀಡಲಿದೆ.
ಪುಟಾಣಿಗಳನ್ನು ಆಕರ್ಷಿಸುವ ಬಣ್ಣ ಬಣ್ಣದ ಆಟಿಕೆಗಳು, ಬಲೂನುಗಳು, ಪೀಪಿಗಳ ಸದ್ದು ಜೋರಾಗಿತ್ತು. ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ಸಾಮಗ್ರಿಗಳ ವೈವಿದ್ಯಮಯ ಮಳಿಗೆಗಳು ಬಂದಿವೆ. ಬಗೆಬಗೆಯ ಚಾಟ್ಸ್, ಜೋಳ, ಕರಿದ ತಿಂಡಿ-ತಿನಿಸು ಪರಿಷೆಗೆ ಬಂದವರ ಬಾಯಿ ಚಪಲ ತಣಿಸುತ್ತಿವೆ. ಜನ ಪುಲ್ ಎಂಜಾಯ್ ಮಾಡ್ತಿದ್ದಾರೆ.
ಒಟ್ಟಿನಲ್ಲಿ ಆಧುನಿಕತೆಯ ಭರಾಟೆ ಮಧ್ಯೆ, ಕೆಲಸ, ಜೀವನದ ಜಂಜಾಟದಲ್ಲಿ ಸುಸ್ತಾಗಿದ್ದ ಸಿಟಿಮಂದಿ ಇದೀಗ ಕಡಲೆಕಾಯಿ ಪರಿಷೆಯಲ್ಲಿ ಸುತ್ತಾಡಿ ಖುಷಿಪಡುತ್ತಿದ್ದಾರೆ.























