ಬೆಂಗಳೂರು, ನ.14 www.bengaluruwire.com : ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ನವೆಂಬರ್ 13 ರಿಂದ 16ರವರೆಗೆ ನಡೆಯುತ್ತಿರುವ ಪ್ರತಿಷ್ಠಿತ ಜಿಕೆವಿಕೆ ಕೃಷಿ ಮೇಳ 2025 ಕಾರ್ಯಕ್ರಮವು, ರೈತರು ಮತ್ತು ಸಾರ್ವಜನಿಕರನ್ನು ಅತೀವವಾಗಿ ಆಕರ್ಷಿಸುತ್ತಿದೆ.
ಈ ವರ್ಷದ ಘೋಷವಾಕ್ಯ “ಸಮೃದ್ಧ ಕೃಷಿ – ವಿಕಸಿತ ಭಾರತ-ನೆಲ, ಜಲ ಮತ್ತು ಬೆಳೆ” ಎಂಬ ಧ್ಯೇಯದೊಂದಿಗೆ ಮೇಳದ ಎರಡನೇ ದಿನವಾದ ನ.14ರಂದು ಕೋಲಾರ, ಚಿತ್ರದುರ್ಗ, ರಾಮನಗರ, ಚೆನ್ನಪಟ್ಟಣ, ಮಂಡ್ಯ, ಮೈಸೂರು, ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಲಕ್ಷಾಂತರ ಜನರು ಉತ್ಸಾಹದಿಂದ ಭಾಗವಹಿಸಿದ್ದಾರೆ.
ಮೇಳದ ಪ್ರಮುಖ ಆಕರ್ಷಣೆಗಳು ಮತ್ತು ವಿಶೇಷತೆಗಳು : ನೂತನ ತಂತ್ರಜ್ಞಾನ ಹಾಗೂ ಪ್ರದರ್ಶನ ಮಳಿಗೆಗಳು
ಈ ಬಾರಿಯ ಮೇಳದಲ್ಲಿ 750ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಕೃಷಿ ಕ್ಷೇತ್ರದಲ್ಲಿನ ನೂತನ ಆವಿಷ್ಕಾರಗಳಿಗೆ ಸಾಕ್ಷಿಯಾಗಿದೆ. ಡ್ರೋನ್, ಸೆನ್ಸಾರ್ ಆಧಾರಿತ ಯಂತ್ರಗಳು ಸೇರಿದಂತೆ ಇತ್ತೀಚಿನ ಕೃಷಿ ಯಂತ್ರೋಪಕರಣಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿವೆ. ಅಲ್ಲದೆ, ಸೂರ್ಯಕಾಂತಿ, ಮೇವಿನ ಜೋಳ, ಅರಿಶಿಣ ಮತ್ತು ಹರಳುಗಳಂತಹ ಹೊಸ ಬೆಳೆಗಳ ತಳಿಗಳು ಹಾಗೂ ಬಹೂಪಯೋಗಿ ಜಾನುವಾರು, ಹೂವು, ತರಕಾರಿ ಮತ್ತು ಔಷಧೀಯ ಸಸ್ಯಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಕೀಟ ಪ್ರಪಂಚ: ವಿನೂತನ ಆಹಾರ ಪದ್ಧತಿ :

ಕೃಷಿ ಮೇಳದ ಬಹುದೊಡ್ಡ ವಿಶೇಷತೆಯೆಂದರೆ ಕೀಟ ಪ್ರಪಂಚ ವಿಭಾಗ. ಚಿಟ್ಟೆ, ಮಿಡತೆ, ಇರುವೆಗಳು ಸೇರಿದಂತೆ ಹಲವು ಜಾತಿಯ ಕೀಟಗಳನ್ನು ಸಂರಕ್ಷಿಸಿ ಆಕರ್ಷಕವಾಗಿ ಜೋಡಿಸಲಾಗಿತ್ತು. ಇದೇ ವಿಭಾಗದಲ್ಲಿ ಕೀಟಗಳನ್ನು ಬಳಸಿ ತಯಾರಿಸಿದ ವಿಶಿಷ್ಟ ಆಹಾರ ಪದಾರ್ಥಗಳ ಮಾದರಿಗಳನ್ನು ಪ್ರದರ್ಶಿಸಲಾಗಿತ್ತು:

ತಿಂಡಿಯ ಮಾದರಿಗಳು: ಮೀಲ್ವರಂ ಫ್ರೈಡ್ ರೈಸ್, ಗೆದ್ದಲಿನ ರೋಸ್ಟ್, ಬೇರು ಹುಳುವಿನ ಬಾರ್ಬಿ ಕ್ಯೂ, ಮಿಡತೆ ಕಬಾಬ್/ಫ್ರೈ, ರೇಷ್ಮೆ ಹುಳು ಕೋಶದ ಸೂಪ್, ಚಾಕಲೇಟ್, ಮಂಚೂರಿಯನ್, ಮೀಲ್ವರಂ ಕೇಕ್, ಕೆಂಪಿರುವೆಯ (ಚಿಗಳಿ) ಚಟ್ನಿ ಹಾಗೂ ಕಣಜ ಹುಳುವಿನ ಮಸಾಲ ತಿಂಡಿಗಳು ನೋಡುಗರನ್ನು ಸೆಳೆದವು.
ಮತ್ಸ್ಯ ಮೇಳ ಮತ್ತು ಪಶುಸಂಗೋಪನೆ :
ಮೇಳದ ಇನ್ನೊಂದು ಪ್ರಮುಖ ವಿಶೇಷತೆ ಮತ್ಸ್ಯ ಮೇಳವಾಗಿದ್ದು, ಸಂಪೂರ್ಣ ಮೀನಿನ ತಳಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪಶುಸಂಗೋಪನೆ ವಿಭಾಗದಲ್ಲಿ ಹಲವು ದೇಶೀಯ ಜಾತಿ ಮತ್ತು ತಳಿಯ ಎತ್ತು, ದನ, ಎಮ್ಮೆಗಳ ಪ್ರದರ್ಶನವು ಕೃಷಿಕರಿಗೆ ಪಾರಂಪರಿಕ ಜಾನುವಾರುಗಳ ಮಹತ್ವವನ್ನು ತಿಳಿಯಲು ಸಹಾಯಕವಾಯಿತು.
ಕೃಷಿ ಪ್ರವಾಸೋದ್ಯಮ ಮತ್ತು ಪರಂಪರೆ :
ಕರ್ನಾಟಕದ ಹಿಂದಿನ ಪರಂಪರೆಯ ಕೃಷಿ ಪದ್ಧತಿಗಳನ್ನು ಪರಿಚಯಿಸುವ ಕೃಷಿ ಪ್ರವಾಸೋದ್ಯಮ ವಿಭಾಗವು, ಮಣ್ಣು, ನೀರು ಮತ್ತು ಬೆಳೆ ನಿರ್ವಹಣೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿತು. ಸಾವಯವ ಸಿರಿಧಾನ್ಯ ಮತ್ತು ಬೀಜಗಳಿಂದ ಹಿಡಿದು ರೈತರ ಕೃಷಿ ಉಪಕರಣ, ಇಂಜಿನಿಯರಿಂಗ್ ಪರಿಕರಗಳು ಮತ್ತು ಸ್ವಸಹಾಯ ಗುಂಪುಗಳ ಮಳಿಗೆಗಳು ಇಲ್ಲಿ ಪ್ರದರ್ಶನಗೊಂಡಿದ್ದವು.
ರೇಷ್ಮೆ ಹುಳುವಿನ ಮೊಟ್ಟೆಯಿಂದ ಆಕರ್ಷಕ ಹಾರ :

ವಿವಿಧ ಬಗೆಯ ರೇಷ್ಮೆ ಹುಳುಗಳು, ಅವುಗಳ ಸಾಕಾಣಿಕೆ, ರೇಷ್ಮೆ ನೂಲು ತೆಗೆಯುವ, ಅವನ್ನು ಸಂಸ್ಕರಿಸುವ, ರೇಷ್ಮೆ ಹುಳು ಬೆಳೆದು ಹೊರಬಂದ ನಂತರ ಅವುಗಳ ಖಾಲಿ ಮೊಟ್ಟೆಗಳಿಂದ ತಯಾರಿಸಿದ ತರಹೇವಾರಿ ಹಾರಗಳೂ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು.
ಜಾಗೃತಿ ಮತ್ತು ಸಾರ್ವಜನಿಕ ಉಪಕ್ರಮಗಳು :ಹಾವು ಕಡಿತ ನಿರ್ವಹಣೆಯ ಬಗ್ಗೆ ಜಾಗೃತಿ

ವೈಲ್ಡ್ ವರ್ಲ್ಡ್ ಕನ್ಸರ್ವೇಷನ್ ಟ್ರಸ್ಟ್ನ ಮಳಿಗೆಯು ಮಾನವ-ಹಾವು ಸಂಘರ್ಷ ನಿಯಂತ್ರಣ ಮತ್ತು ಹಾವು ಕಡಿತ ನಿರ್ವಹಣಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ಗ್ರಾಮೀಣರನ್ನು ಸೆಳೆಯಿತು. ಭಾರತದಲ್ಲಿ ಪ್ರತಿ ವರ್ಷ 58,000ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗುವ ಹಾವು ಕಡಿತದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ಮಳಿಗೆ ಯಶಸ್ವಿಯಾಯಿತು.
ಶುಚಿರುಚಿಯ ಮುದ್ದೆ ಊಟದ ವ್ಯವಸ್ಥೆ :

ಮೇಳಕ್ಕೆ ಆಗಮಿಸಿದ ರೈತಾಪಿ ಜನತೆ ಹಾಗೂ ನಗರದ ನಾಗರಿಕರಿಗೆ ಬೆಳಿಗ್ಗೆಯೇ ₹50ಕ್ಕೆ ಶುಚಿರುಚಿಯ ಮುದ್ದೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ಸಮಯದಲ್ಲಿ ಮಾರುದ್ದದ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಜನರು ಊಟ ಸವಿದರು.
ಕೃಷಿಮೇಳದ ಯಶಸ್ಸಿನ ಸವಾಲು :
ಕೃಷಿ ಮೇಳದ ಮೊದಲ ದಿನ (ನ.13) 8.63 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದರು. ಶುಕ್ರವಾರದ ವಾರಾಂತ್ಯಕ್ಕೆ ಸೆಡ್ಡುಹೊಡೆಯುವಂತೆ ಲಕ್ಷಾಂತರ ಜನರು ಆಗಮಿಸಿದ್ದರಿಂದ ಜಿಕೆವಿಕೆ ಕ್ಯಾಂಪಸ್ನಲ್ಲಿ ವಾಹನಗಳ ಸಾಗಾಟಕ್ಕೆ ತೊಡಕಾಯಿತು. ವಿದ್ಯಾರ್ಥಿ ಕಾರ್ಯಕರ್ತರು ಮತ್ತು ಸಿಬ್ಬಂದಿ ಜನಸಂದಣಿ ಮತ್ತು ಅನಿಯಂತ್ರಿತ ಪಾರ್ಕಿಂಗ್ ಅನ್ನು ನಿಭಾಯಿಸುವಲ್ಲಿ ಬಸವಳಿದಿದ್ದರು. ಆದರೂ, ಈ ಬಾರಿಯ ಮೇಳವು ನೂತನ ಕೃಷಿ ತಂತ್ರಜ್ಞಾನ, ಕೃಷಿ ಪ್ರವಾಸೋದ್ಯಮ ಮತ್ತು ಪರಂಪರಾಗತ ಪದ್ಧತಿಗಳ ಸಮ್ಮಿಲನವಾಗಿ ಯಶಸ್ಸಿನತ್ತ ಹೆಜ್ಜೆ ಇಟ್ಟಿದೆ.






















