ಬೆಂಗಳೂರು, ನ.07 www.bengaluruwire.com : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಜಿಲ್ಲಾ ಘಟಕಗಳ ಕಾರ್ಯಕಾರಿ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತು ಸಿವಿಲ್ ನ್ಯಾಯಾಲಯದ ಆದೇಶಗಳ ಬಳಿಕ, ರಾಜ್ಯದ 20 ಜಿಲ್ಲೆಗಳಲ್ಲಿ ನಿಗದಿಯಂತೆ ನವೆಂಬರ್ 9ರ ಭಾನುವಾರದಂದು ಚುನಾವಣೆ ನಡೆಯಲಿದೆ. ಈ ಚುನಾವಣೆ ಇದೇ ಮೊದಲ ಬಾರಿಗೆ ರಾಜ್ಯದ ಗಮನ ಸೆಳೆಯುತ್ತಿರುವುದು ವಿಶೇಷ.
ನ್ಯಾಯಾಲಯದ ಮಹತ್ವದ ತೀರ್ಪು :
ತುಮಕೂರು ಮತ್ತು ಚಿತ್ರದುರ್ಗ ಜಿಲ್ಲಾ ಘಟಕಗಳ ಚುನಾವಣೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಸದಸ್ಯತ್ವ, ಮತದಾನದ ಹಕ್ಕು ಮತ್ತು ನಾಮಪತ್ರ ತಿರಸ್ಕೃತಗೊಂಡಿರುವ ಬಗ್ಗೆ ಅರ್ಜಿದಾರರು ಸಲ್ಲಿಸಿದ್ದ ರಿಟ್ ಪಿಟಿಶನ್ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ಮತದಾನಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವ ಮತ್ತು ಚುನಾವಣಾ ಪ್ರಕ್ರಿಯೆ ಅಂತಿಮ ಹಂತದಲ್ಲಿರುವ ಕಾರಣ ನೀಡಿ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಈ ಮೂಲಕ ಈ ಎರಡು ಜಿಲ್ಲೆಗಳಲ್ಲಿಯೂ ನ. 9 ರಂದು ಚುನಾವಣೆ ನಡೆಯುವುದು ಖಚಿತವಾಗಿದೆ.
ಅದೇ ರೀತಿ, ಮಂಡ್ಯ ಜಿಲ್ಲಾ ಘಟಕದ ಚುನಾವಣೆಗೆ ತಡೆಯಾಜ್ಞೆ ನೀಡಬೇಕೆಂಬ ಮನವಿಯನ್ನೂ ಸ್ಥಳೀಯ ಸಿವಿಲ್ ನ್ಯಾಯಾಲಯವು ತಿರಸ್ಕರಿಸಿದೆ.

ಬೆಂಗಳೂರು ನಗರ ಘಟಕದ ಚುನಾವಣೆ ಮುಂದಕ್ಕೆ :
ಈ ನಡುವೆ, ಕೆಯುಡಬ್ಲ್ಯುಜೆ ಬೆಂಗಳೂರು ನಗರ ಘಟಕದ ಚುನಾವಣೆಗೆ ಸಿವಿಲ್ ನ್ಯಾಯಾಲಯವು ‘ಎಕ್ಸ್ ಪಾರ್ಟಿ’ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಪರಿಣಾಮವಾಗಿ, ನವೆಂಬರ್ 9ರಂದು ಬೆಂಗಳೂರು ನಗರ ಘಟಕಕ್ಕೆ ಮತದಾನ ನಡೆಯುವುದಿಲ್ಲ.
20 ಜಿಲ್ಲೆಗಳಲ್ಲಿ ಬಿರುಸಿನ ಸ್ಪರ್ಧೆ :
ಕೆಯುಡಬ್ಲ್ಯುಜೆ ರಾಜ್ಯ ಘಟಕದ ಎಲ್ಲಾ ಪದಾಧಿಕಾರಿಗಳ ಸ್ಥಾನಗಳಿಗೆ ಹಾಲಿ ಅಧ್ಯಕ್ಷರಾದ ಶಿವಾನಂದ ತಗಡೂರು ಅವರೊಂದಿಗೆ ಅವಿರೋಧ ಆಯ್ಕೆ ನಡೆದಿದೆ. ರಾಜ್ಯದ 10 ಜಿಲ್ಲೆಗಳ ಘಟಕಗಳಿಗೆ ಸಹ ಅವಿರೋಧ ಆಯ್ಕೆ ನಡೆದಿರುವುದರಿಂದ, ಉಳಿದ 20 ಜಿಲ್ಲಾ ಘಟಕಗಳಿಗೆ ಮಾತ್ರ ನ. 9ರಂದು ಮತದಾನ ನಡೆಯಲಿದೆ. ತುಮಕೂರು, ಮಂಡ್ಯ, ಹಾಸನ, ಬಳ್ಳಾರಿ, ಮತ್ತು ಗದಗ ಜಿಲ್ಲಾ ಘಟಕಗಳಲ್ಲಿ ಅತ್ಯಂತ ಬಿರುಸಿನ ಪೈಪೋಟಿ ಏರ್ಪಟ್ಟಿದ್ದು, ಇದು ಚುನಾವಣೆ ಮೇಲೆ ತೀವ್ರ ಕುತೂಹಲ ಮೂಡಿಸಿದೆ.
ಬೀದರ್ ಜಿಲ್ಲೆಯಲ್ಲಿ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ, ಅಲ್ಲಿನ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಈ ಬಾರಿಯ ಚುನಾವಣೆಗಳಿಗೆ ಹಿರಿಯ ಪತ್ರಕರ್ತರಾದ ಎನ್. ರವಿಕುಮಾರ್ ಅವರು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರ ಹಕ್ಕುಗಳ ರಕ್ಷಣೆ ಮತ್ತು ಸಂಘಟನೆಯ ಬಲವರ್ಧನೆಯ ನಿಟ್ಟಿನಲ್ಲಿ ಈ ಚುನಾವಣೆಯ ಫಲಿತಾಂಶ ಮಹತ್ವದ್ದಾಗಿದೆ.






















