ಬೆಂಗಳೂರು,ನ.07 www.bengaluruwire.com : ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಬೆಂಗಳೂರಿನ ಬಿಡದಿಯಲ್ಲಿ ಸ್ಥಾಪಿಸಿರುವ ಮಹತ್ವಾಕಾಂಕ್ಷೆಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕವು ಪರಿಸರಕ್ಕೆ ಯಾವುದೇ ಹಾನಿ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಎಲ್ಲಾ ನಿಯಮಗಳನ್ನು ಘಟಕವು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ನಿರಂತರ ಕಣ್ಗಾವಲಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಕೆಪಿಸಿಎಲ್ ತಿಳಿಸಿದೆ.
‘ದಿ ಫ್ರೈಡೇಸ್ಫಾರ್ಫ್ಯೂಚರ್-ಕರ್ನಾಟಕ’ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿರುವ ಕೆಪಿಸಿಎಲ್, ಪರಿಸರ ನಿಯಮಗಳನ್ನು ಪಾಲಿಸುವುದರ ಜೊತೆಗೆ ಸಮರ್ಪಕ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದೆ.
ಮುಖ್ಯಾಂಶಗಳು:
ಮಾಲಿನ್ಯ ಮಂಡಳಿ ಅನುಮತಿ: ಕೆಪಿಸಿಎಲ್ ಘಟಕದ ಕಾರ್ಯಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು 2024ರ ಜುಲೈ 20ರಂದು ಅನುಮತಿ ನೀಡಿದ್ದು, ಅದರ ಬಳಿಕವೇ ಕಾರ್ಯಾಚರಣೆ ಆರಂಭಿಸಲಾಗಿದೆ.

ಆನ್ಲೈನ್ ಮೇಲ್ವಿಚಾರಣೆ: ಸ್ಥಾವರವು 2025ರ ಆಗಸ್ಟ್ 25ರಂದು ರಾಜ್ಯ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸರ್ವರ್ಗಳೊಂದಿಗೆ ಸಂಪರ್ಕ ಸಾಧಿಸಿದೆ. ಪ್ರತಿ ಕ್ಷಣದ ಪರಿಸರ ಸಂಬಂಧಿತ ಮಾಹಿತಿಯು ಮಂಡಳಿಗೆ ಆನ್ಲೈನ್ ಮೂಲಕ ಲಭ್ಯವಿದೆ.
ಕಲ್ಮಶಯುಕ್ತ ನೀರು (Leachate) ಮರುಬಳಕೆ: ಸ್ಥಾವರದಲ್ಲಿ ಉತ್ಪತ್ತಿಯಾಗುವ ಕಲ್ಮಶಯುಕ್ತ ನೀರನ್ನು (ಲೀಚೇಟ್) ಪಕ್ಕದಲ್ಲೇ ಸಂಸ್ಕರಿಸಿ, ಪರೀಕ್ಷಿಸಿ ಶುದ್ಧೀಕರಿಸಲಾಗುತ್ತದೆ. ಈ ಶುದ್ಧೀಕರಿಸಿದ ನೀರನ್ನು ಸ್ಥಾವರದಲ್ಲಿಯೇ ಮರುಬಳಕೆ ಮಾಡಲಾಗುತ್ತಿದೆಯೇ ಹೊರತು, ಪರಿಸರಕ್ಕೆ ಬಿಡುಗಡೆ ಮಾಡುತ್ತಿಲ್ಲ.
ಕಲ್ಮಶಯುಕ್ತ ನೀರನ್ನು ಸರಿಯಾದ ಮೇಲ್ವಿಚಾರಣೆಯಿಲ್ಲದೆ ಬಿಡುಗಡೆ ಮಾಡಲಾಗಿದೆ ಎಂಬ ಆರೋಪಗಳು ಸುಳ್ಳು ಎಂದು ಕೆಪಿಸಿಎಲ್ ನಿರಾಕರಿಸಿದೆ.
ಬೂದಿಯ ವೈಜ್ಞಾನಿಕ ವಿಲೇವಾರಿ: ವಿದ್ಯುತ್ ಉತ್ಪಾದನೆಯಾದ ನಂತರ ಉಳಿಯುವ ತಳ ಬೂದಿ ಮತ್ತು ಹಾರು ಬೂದಿಯನ್ನು (Bottom Ash and Fly Ash) ಪ್ರಸ್ತುತ ಬಿಬಿಎಂಪಿ ಮೂಲಕ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ.
ರಸ್ತೆ ನಿರ್ಮಾಣಕ್ಕೆ ಬೂದಿ ಬಳಕೆ:
ಬೂದಿಯ ವಿಲೇವಾರಿ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲು, ರಸ್ತೆ ನಿರ್ಮಾಣಕ್ಕೆ ಅದನ್ನು ಬಳಸುವ ಬಗ್ಗೆ ಕೆಪಿಸಿಎಲ್, ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆಗೆ (CRRI) 2025 ಜುಲೈ 1ರಂದು ಪ್ರಸ್ತಾವನೆ ಸಲ್ಲಿಸಿದೆ. ಸಂಶೋಧನೆಗಾಗಿ 44.84 ಲಕ್ಷ ರೂ. ಹಣವನ್ನು ಸಿಆರ್ಆರ್ಐಗೆ ನೀಡಲಾಗಿದೆ. ಬೂದಿಯನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಂಡರೆ ವಿಲೇವಾರಿ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಿದೆ ಎಂದು ನಿಗಮ ಭರವಸೆ ವ್ಯಕ್ತಪಡಿಸಿದೆ.
ಘಟಕದ ಸಾಮರ್ಥ್ಯ ಮತ್ತು ಪ್ರಸ್ತುತ ಸ್ಥಿತಿ:
ಪ್ರತಿನಿತ್ಯ 600 ಟನ್ ತ್ಯಾಜ್ಯ ಸಂಸ್ಕರಿಸಿ 11.50 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದ ಈ ಸ್ಥಾವರಕ್ಕೆ ಪ್ರಸ್ತುತ 200 ಟನ್ ಸಂಸ್ಕರಿಸಿದ ಒಣ ತ್ಯಾಜ್ಯ ಬರುತ್ತಿದೆ. ಈ ತಿಂಗಳ ಅಂತ್ಯದೊಳಗೆ ಈ ಪ್ರಮಾಣ 500 ಟನ್ ತಲುಪುವ ನಿರೀಕ್ಷೆ ಇದೆ ಎಂದು ಕೆಪಿಸಿಎಲ್ ತಿಳಿಸಿದೆ. ಪ್ರಸ್ತುತ ಬರುವ ತ್ಯಾಜ್ಯದಲ್ಲಿ ಸ್ವಲ್ಪ ತೇವಾಂಶವಿದ್ದರೂ, ಅದರಿಂದ ಪರಿಸರಕ್ಕೆ ಹಾನಿಯಾಗದಂತೆ ಸೂಕ್ತ ನಿರ್ವಹಣೆ ಮಾಡಲಾಗುತ್ತಿದೆ.
ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಬಿಡದಿಯ ಘಟಕವು ಪರಿಸರಕ್ಕೆ ಸಂಬಂಧಿಸಿದ ಎಲ್ಲಾ ಮಾನದಂಡಗಳನ್ನು ಪೂರೈಸುತ್ತಿದ್ದು, ವಿಷಕಾರಿ ಮಾಲಿನ್ಯಕಾರಕಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ವಿಫಲವಾಗಿದೆ ಎಂಬ ಯಾವುದೇ ಆರೋಪಗಳು ಸತ್ಯಕ್ಕೆ ದೂರವಾದುದು ಎಂದು ಕೆಪಿಸಿಎಲ್ ಪುನರುಚ್ಚರಿಸಿದೆ.























