ನವದೆಹಲಿ, ಅ.20 www.bengaluruwire.com : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ವರ್ಷದ ದೀಪಾವಳಿಯನ್ನು ಗೋವಾ ಕರಾವಳಿಯ ಸಮುದ್ರದಲ್ಲಿ ಲಂಗರು ಹಾಕಲಾಗಿದ್ದ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ನ ಮೇಲೆ ನೌಕಾದಳದ ಸಿಬ್ಬಂದಿಯೊಂದಿಗೆ ಆಚರಿಸಿದ್ದಾರೆ.
ಹಿಂದಿನ ವರ್ಷಗಳಂತೆ ಗಡಿನಾಡುಗಳಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯವನ್ನು ಮುಂದುವರೆಸಿರುವ ಪ್ರಧಾನಿಗಳು, ಈ ಬಾರಿ ಯುದ್ಧನೌಕೆಯಲ್ಲಿ ನಿನ್ನೆ ರಾತ್ರಿ ಕಳೆದಿದ್ದು ವಿಶೇಷವಾಗಿತ್ತು. ಅವರ ಭೇಟಿಯು ಯೋಧರ ಮನೋಬಲ ಹೆಚ್ಚಿಸುವ ಮಹತ್ವದ ಕ್ರಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋವಾದಿಂದ ಗೌಪ್ಯವಾಗಿ ಪ್ರಯಾಣಿಸಿದ ಪ್ರಧಾನಿಗಳು, ವಿಕ್ರಾಂತ್ನ ವಿಮಾನ ಹಾರಾಟದ ಡೆಕ್ನಲ್ಲಿ ಮಿಗ್-29ಕೆ (Mig-29K) ಯುದ್ಧ ವಿಮಾನಗಳ ಹಾರಾಟ ಮತ್ತು ಲ್ಯಾಂಡಿಂಗ್ ಪ್ರದರ್ಶನವನ್ನು ವೀಕ್ಷಿಸಿದರು. ಅಲ್ಲದೆ, ಯುದ್ಧ ವಿಮಾನ ಶಕ್ತಿ ಪ್ರದರ್ಶನಕ್ಕೂ ಅವರು ಸಾಕ್ಷಿಯಾದರು.

ಆಪರೇಷನ್ ಸಿಂಧೂರ್ಗೆ ವಿಶೇಷ ನಮನ :

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ನಾವಿಕರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಭಾರತೀಯ ಸಶಸ್ತ್ರ ಪಡೆಗಳ ಯಶಸ್ಸನ್ನು ಸಾರುವ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯನ್ನು ನೆನಪಿಸುವ ಹಾಡನ್ನು ಕೇಳಿ ಪ್ರಧಾನಿ ಮೋದಿ ಅವರು ಭಾವುಕರಾದರು ಎಂದು ಮೂಲಗಳು ತಿಳಿಸಿವೆ. ಸಂಜೆ ನೌಕಾದಳದ ಸಿಬ್ಬಂದಿಯ ಕುಟುಂಬದ ಸದಸ್ಯರೊಂದಿಗೆ ಪ್ರಧಾನಿಗಳು ಭೋಜನ ಮಾಡಿದರು.

ಇಂದು (ಅಕ್ಟೋಬರ್ 20, 2025) ಬೆಳಿಗ್ಗೆ ವಿಕ್ರಾಂತ್ನ ಡೆಕ್ ಮೇಲೆ ಯೋಗಾಸನದೊಂದಿಗೆ ದಿನ ಆರಂಭಿಸಿದ ಮೋದಿ ಅವರು, ನಂತರ ಸ್ಟೀಮ್ಪಾಸ್ಟ್ ಮತ್ತು ಫ್ಲೈಪಾಸ್ಟ್ಗೆ ಸಾಕ್ಷಿಯಾದರು. ಈ ವೇಳೆ ನೌಕಾಪಡೆ ಯೋಧರಿಗೆ ಸಿಹಿ ವಿತರಿಸಿ ಮಾತನಾಡಿದ ಅವರು,

“ಇಂದು ಅದ್ಭುತ ದಿನ. ಈ ದೃಶ್ಯ ಸ್ಮರಣೀಯ. ಇಂದು ಒಂದು ಕಡೆ ನನಗೆ ಸಾಗರವಿದೆ, ಇನ್ನೊಂದು ಕಡೆ ಭಾರತಾಂಬೆಯ ವೀರ ಯೋಧರ ಅಪಾರ ಶಕ್ತಿಯಿದೆ,” ಎಂದು ಪ್ರಧಾನಿಗಳು ಸಿಬ್ಬಂದಿಗೆ ತಿಳಿಸಿದರು.
“ನಿನ್ನೆ ರಾತ್ರಿ ಐಎನ್ಎಸ್ ವಿಕ್ರಾಂತ್ನಲ್ಲಿ ಕಳೆದ ಸಮಯವನ್ನು ವಿವರಿಸಲು ಪದಗಳಿಲ್ಲ. ನಿಮ್ಮೆಲ್ಲರಲ್ಲಿ ತುಂಬಿದ್ದ ಅಗಾಧ ಶಕ್ತಿ ಮತ್ತು ಉತ್ಸಾಹವನ್ನು ನಾನು ನೋಡಿದೆ. ನೀವು ಹಾಡಿದ ದೇಶಭಕ್ತಿ ಗೀತೆಗಳು ಮತ್ತು ‘ಆಪರೇಷನ್ ಸಿಂಧೂರ್’ ಅನ್ನು ನಿಮ್ಮ ಹಾಡಿನಲ್ಲಿ ವಿವರಿಸಿದ ರೀತಿ… ಯುದ್ಧಭೂಮಿಯಲ್ಲಿ ಒಬ್ಬ ಯೋಧನಿಗೆ ಆಗುವ ಅನುಭವವನ್ನು ಸಂಪೂರ್ಣವಾಗಿ ತಿಳಿಸಲು ಯಾವುದೇ ಮಾತುಗಳಿಗೂ ಸಾಧ್ಯವಿಲ್ಲ,” ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರ ಈ ಭೇಟಿಯು ಯೋಧರಿಗೆ ದೊಡ್ಡ ಪ್ರಮಾಣದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.






















