ಬೆಂಗಳೂರು ಅ. 17 www.bengaluruwire.com : ಕನ್ನಡ ಸಾಹಿತ್ಯದ ಪರಂಪರೆಯನ್ನು ಡಿಜಿಟಲ್ ಯುಗದಲ್ಲಿ ಪರಿಣಾಮಕಾರಿಯಾಗಿ ಯುವಜನತೆಗೆ ತಲುಪಿಸುವ ಮತ್ತು ಹೊಸ ಲೇಖಕರನ್ನು ಸೃಷ್ಟಿಸುವ ಮಹತ್ತರ ಉದ್ದೇಶದೊಂದಿಗೆ ‘ಕಥಾ ಮಂಥನ’ ಎಂಬ ವಿನೂತನ ಯೋಜನೆಯು ಶುಕ್ರವಾರ ಲೋಕಾರ್ಪಣೆಗೊಂಡಿದೆ.
ಸ್ವದೇಶಿ ತಂತ್ರಜ್ಞಾನದಲ್ಲಿ ಭಾರತೀಯ ಸಾಮಾಜಿಕ ಜಾಲತಾಣವನ್ನು ನಿರ್ಮಿಸಿರುವ ನಾಬ್ಲಿ ಕ್ರೀಮ್ (Knobly Cream) ಸಂಸ್ಥೆಯು ಈ ವೇದಿಕೆಯನ್ನು ಸಿದ್ಧಪಡಿಸಿದ್ದು, ಇದರ ಅಧಿಕೃತ ಲಾಂಛನವನ್ನು (ಲೋಗೋ) ಇಂದು ಅನಾವರಣಗೊಳಿಸಲಾಯಿತು.
ನೂತನ ಸಣ್ಣಕಥೆಗಳ ಈ ಅಭಿಯಾನವು ಕನ್ನಡ ಸಾರಸ್ವತ ಲೋಕಕ್ಕೆ ಹೊಸತನ ತರುವ ನಿರೀಕ್ಷೆಯನ್ನು ಹುಟ್ಟಿಸಿದೆ.
ಸ್ವದೇಶಿ ಪರಿಕಲ್ಪನೆಗೆ ಗಟ್ಟಿಗೊಳಿಸುವ ಹೆಜ್ಜೆ:

‘ಕಥಾ ಮಂಥನ’ದ ಲೋಗೋವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಹೆಬ್ಬಾರ್ ಅವರು ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, “ನಮ್ಮ ಸಂಸ್ಥೆಯು ಸ್ವದೇಸೀ ತಂತ್ರಜ್ಞಾನದಲ್ಲಿ ಭಾರತೀಯ ಸಾಮಾಜಿಕ ಜಾಲತಾಣವನ್ನು ಸಿದ್ಧಪಡಿಸಿದೆ. ಆ ಮೂಲಕ ನಮ್ಮ ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಪ್ರಚುರಪಡಿಸುವುದರ ಜೊತೆಗೆ ಸ್ವದೇಶಿಯ ಕಲ್ಪನೆಯನ್ನು ಗಟ್ಟಿಗೊಳಿಸುವ ಪ್ರಯತ್ನ ನಮ್ಮದಾಗಿದೆ,” ಎಂದು ತಿಳಿಸಿದರು.
“ಕನ್ನಡದ ಕಥಾ ಪರಂಪರೆಯನ್ನು ಡಿಜಿಟಲ್ ಯುಗದಲ್ಲಿ ಪರಿಣಾಮಕಾರಿಯಾಗಿ ಜನತೆಗೆ ತಲುಪಿಸುವ ಕನಸಿನೊಂದಿಗೆ ‘ಕಥಾ ಮಂಥನ’ಕ್ಕೆ ಜೀವ ನೀಡಲಾಗಿದೆ.
ನಾಬ್ಲಿ ಸಂಸ್ಥೆ ಸ್ವದೇಶಿ ತಂತ್ರಜ್ಞಾನದಲ್ಲಿ ಜಾಗತೀಕ ಮಟ್ಟದ ಸಾಧನೆ ಮಾಡುವ ದೂರದೃಷ್ಟಿತ್ವವನ್ನು ಹೊಂದಿದೆ. ಎಲ್ಲರೂ ಕಥಾ ಮಂಥನದಲ್ಲಿ ಭಾಗವಹಿಸಿ, ಕಥೆಗಳನ್ನು ಬರೆದು ಲೇಖಕರಾಗಿ ಮತ್ತು ಚರ್ಚೆಗಳಲ್ಲಿ ಭಾಗವಹಿಸಿ ಉತ್ತಮ ಓದುಗರಾಗಿ ನಮ್ಮನ್ನು ಪ್ರೋತ್ಸಾಹಿಸಿ,” ಎಂದು ಪ್ರಶಾಂತ್ ಹೆಬ್ಬಾರ್ ಅವರು ಆಶಿಸಿದರು.
ಕೇವಲ ಪ್ರಕಟಣೆಗೆ ಸೀಮಿತವಲ್ಲ: ಶ್ರೀನಾಥ್ ಜೋಶಿ :
ಕಥಾ ಮಂಥನ ಅಭಿಯಾನದ ಸಂಯೋಜಕರಾದ ಶ್ರೀನಾಥ್ ಜೋಶಿ ಅವರು ಮಾತನಾಡಿ, ಈ ವೇದಿಕೆಯು ಕೇವಲ ಪ್ರಕಟಣೆಗೆ ಸೀಮಿತವಾಗಿಲ್ಲ. ಬದಲಾಗಿ, ಪ್ರತಿ ಓದುಗರಿಗೂ ಈ ಅಭಿಯಾನದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.
“Knobly Cream ವೇದಿಕೆಯಲ್ಲಿ ಪ್ರಕಟವಾಗುವ ಕಥೆಗಳ ವಿಷಯ, ಭಾವಗಳು ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ರಾಗ-ದ್ವೇಷಗಳಿಲ್ಲದೆ ಸಮರ್ಥ ಚರ್ಚೆಗೆ ಅವಕಾಶವಿದೆ. ಇದಕ್ಕಾಗಿ ಕಾಮೆಂಟ್ ಬಾಕ್ಸ್ ನೀಡಲಾಗಿದ್ದು, ಅಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಾಕುವುದಕ್ಕೆ ಅವಕಾಶವಿದೆ,” ಎಂದು ಅವರು ಹೇಳಿದರು.
ಉತ್ತಮ, ಅರ್ಥಗರ್ಭಿತ ಮತ್ತು ಹೊಸ ಚಿಂತನೆಗೆ ಅನುವು ಮಾಡುವ ಅಭಿಪ್ರಾಯಗಳನ್ನು ಅವರ ಸ್ವ-ವಿವರಗಳೊಂದಿಗೆ ಪ್ರಕಟಿಸಲಾಗುವುದು. ಅಲ್ಲದೆ, ಕಥೆಗಳನ್ನು ಎಲ್ಲಾ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುವುದು ಎಂದು ಶ್ರೀನಾಥ್ ಜೋಶಿ ಅವರು ತಿಳಿಸಿದರು.
ಲೋಗೋ ಲೋಕಾರ್ಪಣೆ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಭಾವನಾ ಎನ್, ವ್ಯವಸ್ಥಾಪಕಾರಾದ ಪ್ರಶಾಂತ್ ರಾವ್, ತಂತ್ರಜ್ಞರಾದ ರಮಾದೇವಿ, ಶ್ರೇಯಸ್, ದರ್ಶನ್ ಹಾಗೂ ಇತರ ಸಿಬ್ಬಂದಿಗಳು ಹಾಜರಿದ್ದರು.
ಯೋಜನೆಯ ವೈಶಿಷ್ಟ್ಯಗಳು – ಸಾಹಿತ್ಯಕ ದೃಷ್ಟಿಕೋನ :
ಪ್ರಾರಂಭಿಕ ವಿಷಯ: ಕನ್ನಡದ ಪೌರಾಣಿಕ ಕಥೆಗಳಿಗೆ ಆದ್ಯತೆ. ಮುಂದಿನ ದಿನಗಳಲ್ಲಿ ಐತಿಹಾಸಿಕ, ಜನಪದ ಹಾಗೂ ಪ್ರಮುಖ ಕನ್ನಡ ಸಾಹಿತಿಗಳ ಕಥೆಗಳ ಪ್ರಸಾರ. ಕಥೆಗಳು ಚಿಕ್ಕದಾಗಿ, ಅಚ್ಚುಕಟ್ಟಾಗಿ ಮತ್ತು ವಾಸ್ತವಿಕತೆಗೆ ಧಕ್ಕೆಯಾಗದಂತೆ ನಿರೂಪಣೆ.
ಪ್ರಕಟಣಾ ವೇಳಾಪಟ್ಟಿ: ವಾರಕ್ಕೆ ಎರಡು ಕಥೆಗಳನ್ನು ಸೋಮವಾರದಿಂದ ಆರಂಭಿಸಿ, Knobly Creamನ ಪ್ರತ್ಯೇಕ ಚಾನಲ್ನ ‘ಕಥಾ ಮಂಥನ’ದಲ್ಲಿ ಪ್ರಕಟ. ಓದುಗರಿಗೆ ಚರ್ಚೆ ಮತ್ತು ಅಭಿಪ್ರಾಯ ಹಂಚಿಕೊಳ್ಳಲು ಮುಕ್ತ ಅವಕಾಶ. ಕಥೆಗಳನ್ನು ರಚಿಸಲು ವೇದಿಕೆಯು ಮುಕ್ತ ಅವಕಾಶ ನೀಡುತ್ತಿದೆ.






















