ಬೆಂಗಳೂರು, .14 www.bengaluruwire.com: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ)ಯ ಪ್ರಕ್ರಿಯೆಯು ವಿವಿಧ ಕಾರಣಗಳಿಂದಾಗಿ ಆಗಾಗ ಚರ್ಚೆಗೆ ಗ್ರಾಸವಾಗುತ್ತಲೇ ಇದೆ. ಸಮೀಕ್ಷೆಗೆ ಮಾಹಿತಿ ನೀಡಲು ಹಿಂದೇಟು ಹಾಕುವವರ ಸಂಖ್ಯೆ ಹೆಚ್ಚುತ್ತಿರುವುದರ ಹಿನ್ನೆಲೆಯಲ್ಲಿ, ಗಣತಿಯಿಂದ ದೂರ ಉಳಿಯುವವರಿಗೆ ‘ದೃಢೀಕರಣ ಪತ್ರ’ ಕಡ್ಡಾಯಗೊಳಿಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗವು (Karnataka Backward Classes Commission) ಗಂಭೀರ ಚಿಂತನೆ ನಡೆಸಿದೆ.
ದೃಢೀಕರಣ ಪತ್ರ ಕಡ್ಡಾಯದ ಹಿಂದಿನ ಉದ್ದೇಶವೇನು? :
ದಿನೇ ದಿನೇ ಜಾತಿ ಗಣತಿಯಿಂದ ದೂರ ಉಳಿಯುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಪ್ರತಿ ಮನೆಗೆ ಭೇಟಿ ನೀಡಿದ್ದರೂ ಸಮೀಕ್ಷೆ ಅಪೂರ್ಣ ಎಂಬ ಸಾಧ್ಯತೆಗಳನ್ನು ಇದು ನಿವಾರಿಸಲಿದೆ. ಈ ಹಿನ್ನೆಲೆಯಲ್ಲಿ, ಸಮೀಕ್ಷೆಗೆ ನಿರಾಕರಿಸಿದವರ ಮನೆಗೆ ಗಣತಿದಾರರು ಮತ್ತೊಂದು ಸುತ್ತು ಭೇಟಿ ನೀಡಿ, ಸಹಿಯೊಂದಿಗಿನ ದೃಢೀಕರಣ ಪತ್ರ (Confirmation Letter) ಪಡೆಯಲು ಆಯೋಗ ಮುಂದಾಗಿದೆ.
ಜಿಬಿಎ ಹೊರತುಪಡಿಸಿ ರಾಜ್ಯದಾದ್ಯಂತ ಸೆ.22 ರಿಂದ ಜಾತಿ ಗಣತಿ ಆರಂಭವಾಗಿದ್ದು ಈತನಕ ಒಟ್ಟು ಮನೆಗಳ ಗುರಿ 1,47,88,831 ಆಗಿದ್ದು, ಅ.13ರ ಮಾಹಿತಿ ಪ್ರಕಾರ ಒಟ್ಟು ಮನೆಗಳ ಸಮೀಕ್ಷೆ ಪ್ರಗತಿ 1,33,70,651 ಆಗಿದ್ದು, ಶೇಕಡಾವಾರು ಪ್ರಗತಿಯು ಶೇ.90.26 ರಷ್ಟಾಗಿದೆ.

ಈ ಮೊದಲೇ, ಮಾಹಿತಿ ನೀಡಲು ನಿರಾಕರಿಸಿದಲ್ಲಿ ಅಂತಹವರಿಂದ ಲಿಖಿತವಾಗಿ ಸ್ಪಷ್ಟೀಕರಣ ಪಡೆಯಲು ಸೂಚಿಸಲಾಗಿತ್ತಾದರೂ, ಅದು ಕಡ್ಡಾಯ ಮಾಡಿರರಲಿಲ್ಲ. ಹಾಗಾಗಿ ಹಲವು ಕಡೆಗಳಲ್ಲಿ ನಿರಾಕರಿಸುವುದರ ಜತೆಗೆ, ಬರೆದುಕೊಡಲಿಕ್ಕೂ ಆಗುವುದಿಲ್ಲ ಎಂದು ಹೇಳಿದ್ದಾರೆ.
ಸಮೀಕ್ಷೆ ಪ್ರಕ್ರಿಯೆ ಮುಗಿದ ಬಳಿಕ ಗಣತಿದಾರರಿಗೆ ನೀಡಿದ್ದ ಯುಎಚ್ಐಡಿ (UHID) ಪಟ್ಟಿಯೊಂದಿಗೆ ಗಣತಿಯನ್ನು ತಾಳೆ ಹಾಕಲಾಗುತ್ತದೆ. ಆಗ ಕೈಬಿಟ್ಟ ಮನೆಗಳಿಗೆ ಪುನಃ ಭೇಟಿ ನೀಡಿ ಮುಚ್ಚಳಿಕೆ ಅಥವಾ ದೃಢೀಕರಣ ಪತ್ರ ಪಡೆಯುವುದರಿಂದ ಸಮೀಕ್ಷೆ ನೂರಕ್ಕೆ ನೂರರಷ್ಟು ಪೂರ್ಣಗೊಂಡಂತಾಗಲಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ಕರ್ನಾಟಕ ರಾಜ್ಯದಲ್ಲಿ (ಗ್ರೇಟರ್ ಬೆಂಗಳೂರು ಹೊರತುಪಡಿಸಿ – GBA) ಸಮೀಕ್ಷೆಯ ಪ್ರಗತಿಯು ಗಮನಾರ್ಹ ಮಟ್ಟಕ್ಕೆ ತಲುಪಿದೆ. ಜಿಬಿಎ ವ್ಯಾಪ್ತಿಯಲ್ಲಿ ಗಣತಿಯ ಪ್ರಗತಿಯು ರಾಜ್ಯದ ಉಳಿದ ಭಾಗಗಳಿಗೆ ಹೋಲಿಸಿದರೆ ಬಹಳ ಕಡಿಮೆಯಿದೆ.
ಅನಧಿಕೃತ ಗೈರು ಹಾಜರಾತಿಗೆ ಅಮಾನತಿನ ಶಿಕ್ಷೆ :
ಬೆಂಗಳೂರು ನಗರದಲ್ಲಿ ಸುಮಾರು 46 ಲಕ್ಷ ಮನೆಗಳಿಗೆ ಸಮೀಕ್ಷೆ ನಡೆಸಬೇಕಿದ್ದು, ಇದಕ್ಕಾಗಿ ಸುಮಾರು 21,000 ಸಮೀಕ್ಷಾದಾರ(Enumerators)ರನ್ನು ನಿಯೋಜಿಸಲಾಗಿದೆ. ಈ ಸಮೀಕ್ಷಾದಾರರಲ್ಲಿ 18,000 ಕ್ಕೂ ಹೆಚ್ಚು ಮಂದಿ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ಆದರೆ, ಪ್ರತಿದಿನ ಪದೇ ಪದೇ ನೋಟೀಸ್ ಗಳು ಹಾಗೂ ಎಸ್ ಎಂಎಸ್ ಮೂಲಕ ಸಂದೇಶಗಳನ್ನು ನೀಡುತ್ತಿದ್ದರೂ ಕೂಡಾ ಸುಮಾರು 2,300 ಸಮೀಕ್ಷದಾರರು ಯಾವುದೇ ಕಾರಣವಿಲ್ಲದೆ ಹಾಗೂ ಅನಧಿಕೃತವಾಗಿ ಗೈರುಹಾಜರಿದ್ದಾರೆ. ಇಂತಹವರ ನಡೆ ಗಂಭೀರ ಶಿಸ್ತುಉಲ್ಲಂಘನೆಯಾಗಿದೆ. ಆದ್ದರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಅವರ ಅನಧಿಕೃತ ಗೈರುಹಾಜರಿ ಅವಧಿಯ ವೇತನವನ್ನು “ಕೆಲಸ ಮಾಡದಿದ್ದರೆ – ವೇತನವಿಲ್ಲ”(No Work – No Pay) ತತ್ವದ ಪ್ರಕಾರ ನಿರಾಕರಿಸುವಂತೆ ಆದೇಶ ಹೊರಡಿಸಿದ್ದಾರೆ.
ಅವರು ತಕ್ಷಣ ಕರ್ತವ್ಯಕ್ಕೆ ಹಾಜರಾಗಿ, ತಮಗೆ ಹಂಚಿಕೆಯಾಗಿರುವ ಮನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ, ಅನಧಿಕೃತವಾಗಿ ಗೈರಾಗಿರುವ ಸಮೀಕ್ಷಾದಾರರ ವಿರುದ್ಧ ಹಾಗೂ ಅನಧಿಕೃತವಾಗಿ ಗೈರುಹಾಜರಾಗುವುದನ್ನು ಮುಂದುವರಿಸಿದರೆ ಅಮಾನತು ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಜಾತಿ ಗಣತಿ: ಪ್ರಗತಿ ವಿವರ (ಅ. 13, 2025 ರವರೆಗೆ)
ರಾಜ್ಯದ ಪ್ರಗತಿ (GBA ಹೊರತುಪಡಿಸಿ)
ಒಟ್ಟು ಮನೆಗಳ ಗುರಿ : 1,47,88,831
ಒಟ್ಟು ಮನೆಗಳ ಸಮೀಕ್ಷೆ ಪ್ರಗತಿ : 1,33,70,651
ಶೇಕಡಾವಾರು ಪ್ರಗತಿ : 90.26%
ಒಟ್ಟು ಜನಸಂಖ್ಯೆ (ಸಮೀಕ್ಷೆ) : 4,93,49,806
GBA (ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಗತಿ)
ಒಟ್ಟು ಮನೆಗಳ ಗುರಿ : 39,82,335
ಒಟ್ಟು ಮನೆಗಳ ಸಮೀಕ್ಷೆ ಪ್ರಗತಿ : 13,17,176
ಶೇಕಡಾವಾರು ಪ್ರಗತಿ : 29.35%
ಒಟ್ಟು ಜನಸಂಖ್ಯೆ (ಸಮೀಕ್ಷೆ) : 41,31,585
ಸಮೀಕ್ಷೆಯ ಪ್ರಮುಖ ಪ್ರಶ್ನೆಗಳು ಮತ್ತು ಅಗತ್ಯ ದಾಖಲೆಗಳು :
ಜಾತಿ ಗಣತಿ ಸಮೀಕ್ಷೆಯು ಮುಖ್ಯವಾಗಿ ಈ ಮೂರು ವರ್ಗದ ಪ್ರಶ್ನೆಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ:
* ಸಾಮಾಜಿಕ ಮತ್ತು ಜಾತಿ ವಿವರ:
* ಕುಟುಂಬದ ಸದಸ್ಯರ ಹೆಸರು, ಲಿಂಗ, ವಯಸ್ಸು, ಕೌಟುಂಬಿಕ ಸಂಬಂಧ, ಮಾತೃಭಾಷೆ.
* ಜಾತಿ ಮತ್ತು ಉಪಜಾತಿ, ಧರ್ಮ, ಇತ್ಯಾದಿ.
* ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ:
* ಕುಟುಂಬದ ಸದಸ್ಯರ ಶೈಕ್ಷಣಿಕ ಮಟ್ಟ (ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ, ಇತ್ಯಾದಿ).
* ಪ್ರಸ್ತುತ ಉದ್ಯೋಗದ ಸ್ವರೂಪ (ಸರ್ಕಾರಿ, ಖಾಸಗಿ, ಸ್ವಯಂ ಉದ್ಯೋಗ, ಕೂಲಿ, ಇತ್ಯಾದಿ).
* ಆರ್ಥಿಕ ಮತ್ತು ಜೀವನ ಮಟ್ಟದ ಮಾಹಿತಿ:
* ಮಾಸಿಕ ಆದಾಯ, ಕೃಷಿ ಭೂಮಿಯ ವಿವರ.
* ಕುಟುಂಬದ ಆಸ್ತಿ, ಮನೆ ಮಾಲೀಕತ್ವ, ಕುಡಿಯುವ ನೀರಿನ ಮೂಲ, ಇತ್ಯಾದಿ.
ಸಮೀಕ್ಷೆಗೆ ತೋರಿಸಬೇಕಿರುವ ದಾಖಲೆಗಳು:
* ಆಧಾರ್ ಕಾರ್ಡ್/ಸಂಖ್ಯೆ
* ಪಡಿತರ ಚೀಟಿ (Ration Card)
* ವಿಕಲಚೇತನ ಯುಐಡಿ/ಪ್ರಮಾಣಪತ್ರ
* ಜಾತಿ ಮತ್ತು ಆದಾಯ ಪ್ರಮಾಣಪತ್ರಗಳು (ಲಭ್ಯವಿದ್ದರೆ)
* ಮತದಾರರ ಗುರುತಿನ ಚೀಟಿ
ಆನ್ಲೈನ್ ಸ್ವಯಂ ಸಮೀಕ್ಷೆಯ ಅವಕಾಶ:
ಸರ್ಕಾರವು ಗಣತಿ ಪ್ರಕ್ರಿಯೆಗೆ ಪಾರದರ್ಶಕತೆ ನೀಡುವ ಸಲುವಾಗಿ, ನಿವಾಸಿಗಳಿಗೆ ನಿರ್ದಿಷ್ಟ ಅವಧಿಗೆ ಆನ್ಲೈನ್ ಮೂಲಕವೂ ತಮ್ಮ ಮಾಹಿತಿಯನ್ನು ನಮೂದಿಸಲು ಸ್ವಯಂ-ಸಮೀಕ್ಷೆಯ (Online Self-Survey) ಅವಕಾಶವನ್ನು ನೀಡಿತ್ತು. ಇದು ಗಣತಿದಾರರ ಭೇಟಿ ಕಷ್ಟಕರವಾದವರಿಗೆ ಅನುಕೂಲ ಒದಗಿಸಿದೆ.























