ಹಂಗಾರಕಟ್ಟೆ (ಉಡುಪಿ), ಅ.13 www.bengaluruwire.com : ಉಡುಪಿಯ ಹಂಗಾರಕಟ್ಟೆ- ಕೋಡಿಬೆಂಗ್ರೆ ಊರುಗಳ ಮಧ್ಯೆ ಕೊಂಡಿಯಾಗಬೇಕಿದ್ದ, ಪ್ರವಾಸೋದ್ಯಮಕ್ಕೆ ಇಂಬು ನೀಡಬೇಕಿದ್ದ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕೋಟ್ಯಾಂತರ ರೂ. ಮೌಲ್ಯದ ಹೊಸ ಬಾರ್ಜ್ (ದೋಣಿ) ಸಚಿವ ಮಂಕಳ್ ವೈದ್ಯ ಲೋಕಾರ್ಪಣೆ ಮಾಡಿದ ದಿನವೇ ಕೆಟ್ಟುಕೂತಿದೆ.
ಸುಮಾರು 2 ಕೋಟಿ ರೂ. ಮೌಲ್ಯದ “ಕಾವೇರಿ” ಹೆಸರಿನ ಹೊಸ ಬಾರ್ಜ್ ಎಂಜಿನ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ತೊಂದರೆಯಿಂದ ಬೇಂಗ್ರೆಯಿಂದ ಹಂಗಾರಕಟ್ಟೆ ಕಿರುಬಂದರಿಗೆ ಕಡೆಗೆ ಹೊರಟಿದ್ದ ಬಾರ್ಜ್, ಅ.08ರಂದು ಸಚಿವರು ಬಾರ್ಜ್ ಸೇವೆಗೆ ಚಾಲನೆ ನೀಡಿದ ದಿನವೇ ತಾಂತ್ರಿಕ ಸಮಸ್ಯೆಯಿಂದ ಕೆಟ್ಟು ಸೀತಾನದಿ, ಸುವರ್ಣ ನದಿ ಮಧ್ಯೆದಲ್ಲೇ ತೇಲುತ್ತಾ ನಿಂತಿತ್ತು. ಕೊನೆಗೆ ದೋಣಿಯ ಸಿಬ್ಬಂದಿ ಹರಸಾಹಸ ಪಟ್ಟು ಹಂಗಾರಕಟ್ಟೆ ಬಂದಿರಿನ ಕಡೆಗೆ ತಂದು ನಿಲ್ಲಿಸಿದ್ದಾರೆ.
ಚೈನಾ ಎಂಜಿನ್ – ಗುಜರಾತ್ ನಲ್ಲಿ ನಿರ್ಮಾಣ :
ವಾಡಿಯಾ ಬೋಟ್ ಬಿಲ್ಡರ್ಸ್ ಎಂಬ ಸಂಸ್ಥೆಯು ಗುಜರಾತ್ ನಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಈ ದೋಣಿಯನ್ನು ನಿರ್ಮಿಸಿತ್ತು. ದೋಣಿಗೆ ಚೈನಾ ಮೂಲದ ವಾಯ್ಚಾಯ್ ಕಂಪನಿಯ ಎಂಜಿನ್ ಅಳವಡಿಸಲಾಗಿದೆ. ಆರು ತಿಂಗಳ ಹಿಂದೆ ಕಾರವಾರ ಬಂದರಿಗೆ ಬಂದ ದೋಣಿಯನ್ನು ಕೋಡಿಬೆಂಗ್ರೆ- ಹಂಗಾರಕಟ್ಟೆ ಬಂದರಿಗೆ ತರಲು ಭಾರೀ ಮಳೆ, ಕಡಲಿನ ಅಬ್ಬರ ಮತ್ತಿತರ ಕಾರಣಕ್ಕೆ ತರಲು ಸಾಧ್ಯವಾಗಿರಲಿಲ್ಲ. ಅ.4ರಂದು ಇಲ್ಲಿಗೆ ತಂದು ಅ.08ರಂದು ಸಚಿವ ಮಂಕಳ್ ವೈದ್ಯ ಈ ಬಾರ್ಜ್ ಅನ್ನು ಲೋಕಾರ್ಪಣೆಗೊಳಿಸಿದ್ದರು. ಆದರೆ ದುರದೃಷ್ಟವಶಾತ್ ಅಂದೇ ಬಾರ್ಜ್ ಕೆಟ್ಟು ನಿಂತು ಮೂಲೆ ಸೇರಿದೆ. ಈ ಕುರಿತಂತೆ ಸಚಿವ ಮಂಕಳ್ ವೈದ್ಯ ಅವರ ಪ್ರತಿಕ್ರಿಯೆ ಪಡೆಯಲು ಬೆಂಗಳೂರು ವೈರ್ ಪ್ರಯತ್ನಿಸಿದರೂ ಲಭ್ಯರಾಗಿಲ್ಲ.

ಕಾವೇರಿ ಬಾರ್ಜ್ ನಲ್ಲಿ ಎರಡು ಇಂಜಿನ್ ಗಳಿದ್ದು, ಅದರಲ್ಲಿ ಒಂದು ಎಂಜಿನ್ ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ಮತ್ತೊಂದು ಎಂಜಿನ್ ನಲ್ಲಿ, ನದಿನೀರಿನ ಒತ್ತಡ ಹೆಚ್ಚಿರುವ ಕಾರಣ ಎಂಜಿನ್ ಫ್ಯಾನ್ ತಿರುಗುವಲ್ಲಿ ಸಮಸ್ಯೆಯಾಗಿದೆ ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

“ನೂತನ ಬಾರ್ಜ್ ನಿರ್ಮಾಣವನ್ನು 2 ಕೋಟಿ ರೂ. ವೆಚ್ಚದಲ್ಲಿ ವಾಡಿಯಾ ಬೋಟ್ ಬಿಲ್ಡರ್ಸ್ ಗುಜರಾತಿನಲ್ಲಿ ನಿರ್ಮಿಸಿತ್ತು. ಬಾರ್ಜ್ ಇಂಜಿನ್ ಚೈನಾದ ವಾಯ್ಚಾಯ್ ಎಂಜಿನ್ ಅನ್ನು ಈ ದೋಣಿಗೆ ಅಳವಡಿಸಲಾಗಿದೆ. ಸಚಿವರು ಬಾರ್ಜ್ ಉದ್ಘಾಟಿಸಿದ ದಿನವೇ ಎಂಜಿನ್ ನಲ್ಲಿ ಕಂಡುಬಂದ ತಾಂತ್ರಿಕ ತೊಂದರೆಯಿಂದ ನಿಂತುಹೋಗಿದ್ದು, ಈ ಬಗ್ಗೆ ಬೋಟ್ ಬಿಲ್ಡರ್ಸ್ ಕಂಪನಿಗೆ ತಿಳಿಸಿದ್ದೇವೆ. ಈ ದೋಣಿಗೆ ಒಂದು ವರ್ಷ ಕಂಪನಿಯ ವ್ಯಾರಂಟಿ ಇದೆ. ಇಂಜಿನಿಯರ್ ಬಂದು ದೋಣಿ ಎಂಜಿನ್ ಪರಿಶೀಲಿಸಿ ಸರಿಪಡಿಸಬೇಕು. ಇದಕ್ಕೆ ಸಮಯ ಹಿಡಿಯಲಿದೆ” ಎಂದು ಹೊನ್ನಾವರ ಬಂದರು ಇಲಾಖೆಯ ಇನ್ಸ್ ಪೆಕ್ಟರ್ ಎಚ್.ವೈ.ಹನುಮಂತ ಬಟ್ಟಿ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಕೋಡಿಬೆಂಗ್ರೆ ಹಂಗಾರಕಟ್ಟೆ ನಡುವೆ ಬಾರ್ಜ್ನಲ್ಲಿ ಸಂಚರಿಸುವುದೇ ಒಂದು ಅಪರೂಪದ ಅನುಭವವನ್ನು ನೀಡುತ್ತದೆ. ಡೆಲ್ಟಾ ಪಾಯಿಂಟ್ ಒಂದು ಕಡೆ, ಸಾಗರ ಸೇರಲು ತವಕಿಸುವ ಸೀತಾ ಮತ್ತು ಸುವರ್ಣ ನದಿಗಳು ಮತ್ತೊಂದು ಕಡೆ. ಸೂರ್ಯಾಸ್ತಮಾನದ ಆ ಸುಂದರ ದೃಶ್ಯಗಳು ಹಂಗಾರಕಟ್ಟೆ, ಕೋಡಿಬೆಂಗ್ರೆ ಕಿರು ಬಂದರಿನ ದೃಶ್ಯ ಮನಸ್ಸಿಗೆ ಖುಷಿಕೊಡುತ್ತದೆ.
ಆರೇಳು ತಿಂಗಳಿಂದ ನಿಂತಿದ್ದ ಬಾರ್ಜ್ ಸೇವೆ :
ಹಳೆಯ ಬಾರ್ಜ್ ರ್ಯಾಂಪ್ (ಮೆಟ್ಟಿಲೇಣಿ) ಹಾಳಾಗಿ ಈ ವರ್ಷ ಮಳೆಗಾಲದ ಆರಂಭದಲ್ಲಿ ನಿಲ್ಲಿಸಲಾಗಿತ್ತು. ಸೀತಾನದಿ, ಸ್ವರ್ಣನದಿ ಸಮುದ್ರಕ್ಕೆ ಸೇರುವ ಸ್ಥಳ. ನೀರಿನ ಹರಿವು ಜಾಸ್ತಿಯಿತ್ತು. ಹಂಗಾರಕಟ್ಟೆ ಬಂದರಿನಲ್ಲಿ ಹೂಳಿನ ಸಮಸ್ಯೆಯಿದೆ. ಕಳೆದ ಆರೇಳು ತಿಂಗಳಿಂದ ಹಳೆಯ ಬಾರ್ಜ್ ರ್ಯಾಂಪ್ (ಮೆಟ್ಟಿಲೇಣಿ)ಹಾಳಾಗಿ ಸೇವೆ ಇಲ್ಲದೆ ಹಂಗಾರಕಟ್ಟೆ- ಕೋಡಿಬೆಂಗ್ರೆ ಊರುಗಳ ಜನರು, ಪ್ರವಾಸಿಗರು ಒಂದೂರಿಂದ ಇನ್ನೊಂದು ಊರಿಗೆ ತೆರಳಲು, ರಸ್ತೆಮಾರ್ಗವಾಗಿ ಸಂತೆಕಟ್ಟೆ, ಕೆಮ್ಮಣ್ಣು ಮೂಲಕವಾಗಿ ಪರಸ್ಪರ ಹೋಗಿಬರಲು ಹೆಚ್ಚಕಮ್ಮಿ 21 ಕಿ.ಮೀ ಖಾಸಗಿ ಬಸ್, ವಾಹನದ ಮೇಲೆ ಅವಲಂಬಿಸಬೇಕಿತ್ತು.
ಬಾರ್ಜ್ ಸೇವೆ ಇದ್ದಲ್ಲಿ ನಿಮಿಷಗಳಲ್ಲಿ ಗುರಿ ತಲುಪಲು ಸಾಧ್ಯ :
ನೂತನ ಬಾರ್ಜ್ ಸೇವೆ ಲಭ್ಯವಾಗಿದ್ದಲ್ಲಿ ಕೆಲವೇ ನಿಮಿಷಗಳಲ್ಲಿ ಕೋಡಿಬೆಂಗ್ರೆ- ಹಂಗಾರಕಟ್ಟೆ ಮಧ್ಯೆ ಸಾರ್ವಜನಿಕರು, ಪ್ರವಾಸಿಗರು ತಾವು ತಮ್ಮ ಕಾರು, ದ್ವಿಚಕ್ರ ವಾಹನಗಳನ್ನು ಕೊಂಡೊಯ್ಯಬಹುದಿತ್ತು.
ಬಾರ್ಜ್ ರ್ಯಾಂಪ್ ಹೆಚ್ಚು ಉದ್ದವಿಲ್ಲ. ಹಂಗಾರಕಟ್ಟೆ- ಬೇಂಗ್ರೆ ಬಂದರಿನ ಇಳಿದಾಣಕ್ಕೆ ಹೊಂದಕೊಂಡಂತೆ ಇಲ್ಲದ ಕಾರಣ ಬಾರ್ಜ್ ರ್ಯಾಂಪ್, ಇಳಿದಾಣಕ್ಕೆ ಹೊಂದಾಣಿಕೆಯಿಲ್ಲ. ಏಕೆಂದರೆ ಬಾರ್ಜ್ ರ್ಯಾಂಪ್ ಮೇಲೆಕೆತ್ತುಕೊಂಡಂತೆ ಇದ್ದಲ್ಲಿ ಕಾರು, ಬೈಕ್ ಮತ್ತಿತರ ವಾಹನ ಒಳಗೆ ಹೋಗಲು- ಸಾಧ್ಯವಿಲ್ಲ. ಈಗ ಇದೇ ಕಾರಣಕ್ಕೆ ನೂತನ ಬಾರ್ಜ್ ಎಂಜಿನ್ ತಾಂತ್ರಿಕ ಕಾರಣವೊಡ್ಡಿ ಸೇವೆ ನಿಲ್ಲಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಳೀಯರೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಶೀಘ್ರವೇ ಕಾವೇರಿ ಬಾರ್ಜ್ ಸರಿಪಡಿಸಲು ಆಗ್ರಹ :
“ಎಲ್ ಸಿಟಿ ಕಾವೇರಿ ಬಾರ್ಜ್ ಅನ್ನು ಗುಜರಾತಿನಲ್ಲಿ ನಿರ್ಮಾಣವಾಗಿ ಆರು ತಿಂಗಳ ಹಿಂದೆ ತಂದು ಕಾರವಾರದಲ್ಲಿ ನಿಲ್ಲಿಸಲಾಗಿತ್ತು. ದಸರಾ ನಂತರ ಎಂಟು ದಿನಗಳ ಹಿಂದೆ ಅ.4 ಶನಿವಾರ ಬಂತು. ಅ.08ರಂದು ಬೇಂಗ್ರೆಯಲ್ಲಿ ಉದ್ಘಾಟನೆಯಾಗಿ ಬಾಜ್ರಾ ಬೇಂಗ್ರೆಯಿಂದ ಹಂಗಾರಕಟ್ಟೆಗೆ ಬರುವಾಗ ಅರ್ಧದಲ್ಲೇ ಒಂದು ಎಂಜಿನ್ ಕೆಟ್ಟು ನಿಂತಿತು. ಹಾಗೂ ಹೀಗೂ ಶ್ರಮಪಟ್ಟು ಹಂಗಾರಕಟ್ಟೆ ಕಿರುಬಂದರಿಗೆ ತಂದು ನಿಲ್ಲಿಸಲಾಗಿದೆ. ಆದಷ್ಟು ಶೀಘ್ರವಾಗಿ ಈ ತಾಂತ್ರಿಕ ತೊಂದರೆ ಸರಿಪಡಿಸಿ ಮತ್ತೆ ಬಾರ್ಜ್ ಸೇವೆ ಆರಂಭಿಸಬೇಕಿದೆ” ಎಂದು ಸ್ಥಳೀಯರಾದ ಮಧುಕರ್ ಪೂಜಾರಿ ಆಗ್ರಹಿಸಿದ್ದಾರೆ.
ಎರಡು ಕೋಟಿ ರೂ. ಮೌಲ್ಯದ ಬಾರ್ಜ್ ಗುಣಮಟ್ಟದ ಬಗ್ಗೆಯೇ ಅನುಮಾನ :
ಮಾಡುತ್ತದೆ. ದೋಣಿಯ ಎಂಜಿನ್ ಪೂರೈಸಿದ ಕಂಪನಿಯ ನಾಲ್ಕೈದು ಡಿಸ್ಟಿಬ್ಯೂಟರ್ ಮಾತ್ರ ದೇಶದಲ್ಲಿದ್ದಾರೆ. ಗುಜರಾತಿನ ಕಂಪನಿ ತಂತ್ರಜ್ಞರು ಬಂದು ಎಂಜಿನ್ ಸಮಸ್ಯೆ, ಬಾರ್ಜ್ ರ್ಯಾಂಪ್ ನಲ್ಲಿನ ದೋಷವನ್ನು ಸರಿಪಡಿಸುವ ತನಕ ಬಾರ್ಜ್ ಕೆಲಸವಿಲ್ಲದೆ ಮೂಲೆ ಹಿಡಿದೇ ಕೂತಿರಬೇಕಾಗುತ್ತೆ. ನೂತನ ದೋಣಿ ಕಾರ್ಯಾರಂಭ ಮಾಡಿದ ದಿನವೇ ಸೇವೆ ನಿಲ್ಲಿಸಿರುವುದು, ದೋಣಿಯ ಗುಣಮಟ್ಟವನ್ನೇ ಅನುಮಾನದಿಂದ ನೋಡುವಂತಾಗಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.























