ಬೆಂಗಳೂರು, ಅ.08 www.bengaluruwire.com : ಟನಲ್ ರಸ್ತೆ ಯೋಜನೆಯಿಂದ ಐತಿಹಾಸಿಕ ಲಾಲ್ ಬಾಗ್ ಉದ್ಯಾನವನಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ (ಡಿಸಿಎಂ) ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.
ಲಾಲ್ಬಾಗ್ ವಿರೂಪಗೊಳ್ಳಲಿದೆ ಎಂಬ ಆತಂಕಗಳಿಗೆ ಪ್ರತಿಕ್ರಿಯಿಸಿದ ಅವರು, “ನಾವು ಯಾವುದೇ ರೀತಿಯಲ್ಲೂ ಲಾಲ್ ಬಾಗ್ ಅನ್ನು ವಿರೂಪಗೊಳಿಸಲು ಹೋಗುವುದಿಲ್ಲ. ಲಾಲ್ ಬಾಗ್ ಗೆ ಐತಿಹಾಸಿಕ ಮಹತ್ವವಿದೆ, ಅದು ಎಷ್ಟು ಪವಿತ್ರವಾದುದು ಎಂಬುದು ನಮಗೆ ತಿಳಿದಿದೆ,” ಎಂದರು.
ಈ ಕುರಿತು ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ ಡಿಸಿಎಂ ಅವರು, ಮುಂದಿನ ಸೋಮವಾರ ಅಧಿಕಾರಿಗಳೊಂದಿಗೆ ಲಾಲ್ ಬಾಗ್ ಅನ್ನು ಖುದ್ದಾಗಿ ವೀಕ್ಷಣೆ ಮಾಡುವುದಾಗಿ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ತಿಳಿಸಿದರು.
ಜಿಬಿಎ ಪಾಲಿಕೆಗಳಲ್ಲಿ ಶೇ.50ರಷ್ಟು ಮಹಿಳಾ ಕಾರ್ಪೊರೇಟರ್: ಡಿಸಿಎಂ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಬಿ.ಪಿಎಸಿ (B.PAC) ಸಹಯೋಗದಲ್ಲಿ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರು ಅಭಿವೃದ್ಧಿ ಮತ್ತು ಪರಿವರ್ತನೆ ಕುರಿತು ಹಲವು ಮಹತ್ವದ ವಿಷಯಗಳನ್ನು ಪ್ರಕಟಿಸಿದರು.
ಅವರು, “ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯಲ್ಲಿ ಶೇ.50ರಷ್ಟು ಟಿಕೆಟ್ ಅನ್ನು ಮಹಿಳೆಯರಿಗೆ ನೀಡಲಾಗುವುದು. ಆ ಮೂಲಕ ಮುಂದಿನ ದಿನಗಳಲ್ಲಿ ಬೆಂಗಳೂರಿನ ಪಾಲಿಕೆಗಳಲ್ಲಿ ಅರ್ಧದಷ್ಟು ಮಹಿಳಾ ಕಾರ್ಪೊರೇಟರ್ಗಳು ಇರುತ್ತಾರೆ,” ಎಂದು ಘೋಷಿಸಿದರು. ಇದು ಬೆಂಗಳೂರಿನ ಆಡಳಿತದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿದೆ.
ಬೆಂಗಳೂರು ಪ್ರಗತಿಗೆ ನಾಗರಿಕರ ಪಾಲ್ಗೊಳ್ಳುವಿಕೆ ಅತ್ಯಗತ್ಯ :
ಬೆಂಗಳೂರು ಎದುರಿಸುತ್ತಿರುವ ಸಂಚಾರ ದಟ್ಟಣೆ, ಕಸ ವಿಲೇವಾರಿ, ಮತ್ತು ಕುಡಿಯುವ ನೀರಿನಂತಹ ಪ್ರಮುಖ ಸಮಸ್ಯೆಗಳ ಕುರಿತು ಮಾತನಾಡಿದ ಡಿಸಿಎಂ, ಪರಿಣಾಮಕಾರಿ ಆಡಳಿತ, ಸೇವೆ ಮತ್ತು ಸಮನ್ವಯತೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಸ್ತಿತ್ವಕ್ಕೆ ತರಲಾಗಿದೆ ಎಂದರು.
ಅವರು ಜನರ ಸಹಕಾರದ ಮಹತ್ವವನ್ನು ಒತ್ತಿ ಹೇಳಿದರು. “ನಾಗರಿಕರು ಹಾಗೂ ಅಧಿಕಾರಿಗಳು ಪರಸ್ಪರ ಸಹಕಾರದಲ್ಲಿ ಕೆಲಸ ಮಾಡುವವರೆಗೂ ಬೆಂಗಳೂರಿನ ಪ್ರಗತಿ ಅಸಾಧ್ಯ,” ಎಂದರು. ಕಸ ನಿರ್ವಹಣೆಯಲ್ಲಿ ಜನರು ರಸ್ತೆಗಳಲ್ಲಿ ಕಸ ಎಸೆಯುವ ಪ್ರವೃತ್ತಿ ಮತ್ತು ವಾಹನ ನಿಲುಗಡೆಯ ಸಮಸ್ಯೆಗಳನ್ನು ಉಲ್ಲೇಖಿಸಿ, “ಜನರಲ್ಲಿ ನಾಗರಿಕ ಪ್ರಜ್ಞೆ ಬಹಳ ಮುಖ್ಯ,” ಎಂದು ತಿಳಿಸಿದರು. ಕಸ ಮಾಫಿಯಾ ತಮ್ಮ ಪ್ರಯತ್ನಗಳನ್ನು ತಡೆಯುತ್ತಿದೆ ಎಂದು ಕೂಡ ಅವರು ಈ ಸಂದರ್ಭದಲ್ಲಿ ಹೇಳಿದರು.
ಪಾರದರ್ಶಕತೆ, ವಿಭಜನೆ ಮತ್ತು ಟೀಕೆಗಳ ಸ್ವಾಗತ :
ಭ್ರಷ್ಟಾಚಾರ ನಿಯಂತ್ರಣ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡುವುದಾಗಿ ಹೇಳಿದ ಡಿಸಿಎಂ, 50×80 ನಿವೇಶನದಲ್ಲಿ ಮನೆ ಕಟ್ಟುವವರಿಗೆ ನಂಬಿಕೆ ನಕ್ಷೆ ಯೋಜನೆ ಜಾರಿಗೆ ತಂದಿರುವುದಾಗಿ ವಿವರಿಸಿದರು. ಉತ್ತಮ ಆಡಳಿತಕ್ಕಾಗಿ ಬೆಂಗಳೂರಿನ ಪಾಲಿಕೆಗಳನ್ನು ವಿಭಜಿಸಿ ಐದು ಪಾಲಿಕೆಗಳು ಮತ್ತು 368 ವಾರ್ಡ್ಗಳನ್ನು ರಚಿಸಲಾಗಿದೆ ಎಂದರು.
“ನಾನು ಟೀಕೆಗಳನ್ನು ಸ್ವಾಗತಿಸುತ್ತೇನೆ,” ಎಂದು ಹೇಳಿದ ಅವರು, ಟೀಕೆಗಳಿಂದಲೇ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯ. ಇಡೀ ದೇಶದಲ್ಲಿ ಯಾವುದೇ ನಗರದ ಸಚಿವರು ರಸ್ತೆ ಗುಂಡಿ, ಕಸದ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದ್ದಾರೆಯೇ? ಆ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಹೇಳಿದರು.
ಟನಲ್ ರಸ್ತೆ ಸೇರಿದಂತೆ ಹಲವು ಬೃಹತ್ ಯೋಜನೆಗಳನ್ನು ವಿರೋಧಿಸುವವರಿಗೆ ಉತ್ತರಿಸಿದ ಅವರು, “ಇದೇ ಕಾರಣಕ್ಕೆ ನಾನು ಟನಲ್ ರಸ್ತೆಗೆ ಮುಂದಾಗಿದ್ದೇನೆ,” ಎಂದು ಸಮರ್ಥಿಸಿಕೊಂಡರು.
ವಿರೋಧದ ನಡುವೆಯೂ 44 ಕಿ.ಮೀ ಡಬಲ್ ಡೆಕ್ಕರ್ ಮೇಲ್ಸೇತುವೆ, 120 ಕಿ.ಮೀ ನಷ್ಟು ಉದ್ದದ ಮೇಲ್ಸೇತುವೆಗಳು, ಮತ್ತು ರಾಜಕಾಲುವೆಗಳ ಬಫರ್ ವಲಯದಲ್ಲಿ 300 ಕಿ.ಮೀ ಹೆಚ್ಚುವರಿ ರಸ್ತೆ ನಿರ್ಮಾಣ ಯೋಜನೆಗಳನ್ನು ಉಲ್ಲೇಖಿಸಿದರು.
ಟನಲ್ ರಸ್ತೆಗೆ ಟೀಕೆಗಳು ವ್ಯಕ್ತವಾದರೂ, ಮುಂಬೈ, ಜಪಾನ್, ಲಂಡನ್ನಂತಹ ನಗರಗಳಲ್ಲಿ ಈ ಯೋಜನೆಗಳನ್ನು ಏಕೆ ಕೈಗೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು. “ನನ್ನ ಕೆಲಸಗಳು ಇಂದು ಜನರ ಕಣ್ಣಿಗೆ ಕಾಣದೇ ಇರಬಹುದು, ಆದರೆ ಮುಂದಿನ 10-15 ವರ್ಷಗಳ ನಂತರ ಬೆಂಗಳೂರಿಗೆ ನನ್ನ ಕೊಡುಗೆ ಏನು ಎಂದು ಅರ್ಥವಾಗುತ್ತದೆ. ಜನ ನನ್ನನ್ನು ಸ್ಮರಿಸುತ್ತಾರೆ,” ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.






















