ಬೆಂಗಳೂರು, ಅ.06 www.bengaluruwire.com : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಸೇವೆ ನೀಡುವ ಇಬ್ಬರು ಚಾಲಕರ ಮೇಲೆ ಅಪರಿಚಿತರು ಭಾನುವಾರ ರಾತ್ರಿ ಹಲ್ಲೆ ನಡೆಸಿದ ಪರಿಣಾಮ ಅವರು ಗಂಭೀರ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕ್ಕಜಾಲ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಜನಾರ್ಧನ್ ಹಾಗೂ ಬಸವರಾಜು ಎಂಬುವರೇ ಹಲ್ಲೆಗೊಳಗಾದವರು. ಈ ಘಟನೆ ಸಂಬಂಧ ಹೊಯ್ಸಳ ಪೊಲೀಸರು ಸ್ಥಳಕ್ಕೆ ಆಗಮಿಸಿದರೂ, ಹಲ್ಲೆ ಮಾಡಿದವರನ್ನು ಪ್ರಭಾವಿಗಳು ಎಂಬ ಕಾರಣಕ್ಕೆ ಬಿಟ್ಟು ಕಳಿಸಿದ್ದಾರೆ. ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದವರಿಂದ ಚಿಕ್ಕಜಾಲ ಪೋಲಿಸರು ಹೇಳಿಕೆ ಪಡೆದಿದ್ದರೂ ಈತನಕ ಅವರನ್ನು ಬಂಧಿಸಿಲ್ಲ ಎಂದು ಬೆಂಗಳೂರು ಓಲಾ ಊಬರ್ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದ ರಾಜ್ಯಾಧ್ಯಕ್ಷ ತನ್ವೀರ್ ಪಾಷಾ ಆರೋಪಿಸಿದ್ದಾರೆ.
ಏರ್ ಪೋರ್ಟ್ ಗೆ ಟ್ಯಾಕ್ಸಿ ಸೇವೆ ನೀಡುವ ಚಾಲಕರ ಮೇಲೆ ಹಲ್ಲೆ ನಡೆಸುವ ಪ್ರಕರಣ ಆಗಾಗ ನಡೆಯುತ್ತಿದೆಯಾದರೂ, ಭಾನುವಾರ ರಾತ್ರಿ ನಡೆದ ಹಲ್ಲೆ ಪ್ರಕರಣ ತೀವ್ರವಾಗಿದ್ದು ಇಬ್ಬರು ಚಾಲಕರು ಗಂಭೀರ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ನಡೆದ ಘಟನೆ ಸಂಬಂಧ, ಸೋಮವಾರ ಪೋಲೀಸರು ಕಾನೂನು ಕ್ರಮ ಜರುಗಿಸಿ ಆರೋಪಿಗಳನ್ನು ಅರೆಸ್ಟ್ ಮಾಡದಿದ್ದರೆ, ನಾಳೆ ಎಲ್ಲಾ ರೀತಿಯಲ್ಲೂ ಏರ್ಪೋರ್ಟ್ ಟ್ಯಾಕ್ಸಿ ಸೇವೆಗಳನ್ನು ನಿಲ್ಲಿಸಲು ಪ್ರತಿಭಟನೆಗೆ ಕರೆ ನೀಡುತ್ತೇವೆ ಎಂದು ಪಾಷಾ ಎಚ್ಚರಿಕೆ ನೀಡಿದ್ದಾರೆ.

ಹೇಗೆ ಘಟನೆ ನಡೆಯಿತು?:

ನಿನ್ನೆ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಶೆಟ್ಟಿಗೆರೆ ಬಳಿ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಇಬ್ಬರು ಚಾಲಕರು ಟೀ ಕುಡಿಯುತ್ತಿದ್ದರು. ಆಗ ಅಲ್ಲಿನ ಸ್ಥಳೀಯ ಮೂವರು ವ್ಯಕ್ತಿಗಳು ಕುಡಿದ ಮತ್ತಿನಲ್ಲಿ ವಿನಾ ಕಾರಣ ಚಾಲಕರ ಮೇಲೆ ಜಗಳ ಮಾಡಿ ಕಬ್ಬಿಣದ ರಾಡಿನಿಂದ ಇಬ್ಬರು ಚಾಲಕರ ತಲೆಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕಾರಿನ (ಟ್ಯಾಕ್ಸಿ) ಗಾಜುಗಳನ್ನು ಒಡೆದು ಕಾರನ್ನು ಜಖಂ ಗೊಳಿಸಿದ್ದಾರೆ ಎಂದು ತನ್ವೀರ್ ಪಾಷಾ ಹೇಳಿದ್ದಾರೆ.
ಪೊಲೀಸರ ನಡೆಗೆ ಆಕ್ರೋಶ :
ಅಲ್ಲೇ ಇದ್ದ ಚಾಲಕರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ನಂತರ ಸ್ಥಳಕ್ಕೆ ಬಂದ ಹೊಯ್ಸಳದಲ್ಲಿದ್ದ ಪೋಲಿಸರು, ಹಲ್ಲೆ ನೆಡೆಸಿದ ವ್ಯಕ್ತಿಗಳು ಅಲ್ಲೇ ಇದ್ದರು ಸಹ ಅವರು ಸ್ಥಳೀಯರು ಹಾಗು ಪ್ರಭಾವಿಗಳೆಂದು ವಶಕ್ಕೆ ಪಡೆಯದೆ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ ಎಂದು ಅವರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ಹಲ್ಲೆ ಪ್ರಕರಣದ ಬಗ್ಗೆ ವಿಷಯ ತಿಳಿದ ನಂತರ ಹಲ್ಲೆಗೆ ಒಳಗಾದ ಚಾಲಕರನ್ನು ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಭೇಟಿಯಾಗಿ ಸಂಪೂರ್ಣ ಮಾಹಿತಿ ಪಡೆದು ನಂತರ
ಸ್ಥಳೀಯ ಚಿಕ್ಕಜಾಲ ಪೋಲಿಸ್ ಠಾಣೆಗೆ ಭೇಟಿ ನೀಡಿ ಈ ಕೃತ್ಯ ಎಸಗಿದವರ ವಿರುಧ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರೂ, ಠಾಣೆಯಲ್ಲಿದ್ದ ಪೊಲೀಸರು ಈ ಬಗ್ಗೆ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ವರ್ತಿಸಿದರು” ಎಂದು ತನ್ವೀರ್ ಪಾಷಾ ದೂರಿದ್ದಾರೆ.
ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ :
ಸೋಮವಾರ ಬೆಳಗ್ಗೆ ಈ ಬಗ್ಗೆ ಮಾಧ್ಯಮದವರು ಈಶಾನ್ಯ ವಿಭಾಗದ ಡಿಸಿಪಿಯವರ ಜೊತೆ ಮಾತನಾಡಿಘಟನೆ ಸಂಬಂಧ ಪ್ರಶ್ನಿಸಿದಾಗ, ಇಬ್ಬರು ಚಾಲಕರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿದೆ ಎಂದು ಡಿಸಿಪಿಯವರು ಹೇಳಿಕೆ ನೀಡಿದ್ದಾಗಿ ತಿಳಿದು ಬಂತು. ತಾವೂ ಕೂಡ ಈಗ ಪುನಃ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತೇವೆ. ಒಂದೊಮ್ಮೆ ಇಂದು ಚಾಲಕರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ನಾಳೆ ಏರ್ ಪೋರ್ಟ್ ಕಡೆಗೆ ಸಂಪೂರ್ಣವಾಗಿ ಟ್ಯಾಕ್ಸಿ ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ತನ್ವೀರ್ ಪಾಷಾ ಎಚ್ಚರಿಸಿದ್ದಾರೆ.
ಈ ಗೂಂಡಾಗಿರಿ ಹಾಗೂ ರೌಡಿಸಂ ನಿಲ್ಲಬೇಕಾಗಿದೆ.. ನಮ್ಮ ಚಾಲಕರಿಗೆ ಆದ ಅನ್ಯಾಯಕ್ಕೆ ನ್ಯಾಯ ಬೇಕಾಗಿದೆ ಎಂದು ಅವರು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.






















