ಬೆಳಗಾವಿ, ಅ.05 www.bengaluruwire.com : ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ಸುಸಜ್ಜಿತ ನಗರ ಸಾರಿಗೆ ಬಸ್ ನಿಲ್ದಾಣವನ್ನು ಇಂದು ಮುಖ್ಯಮಂತ್ರಿಗಳು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ವಾಯವ್ಯ ಸಾರಿಗೆ ಸಂಸ್ಥೆಗೆ (NWKRTC) 700 ಹೊಸ ಬಸ್ಸುಗಳು ಮತ್ತು ವಿಶೇಷವಾಗಿ ಬೆಳಗಾವಿ ನಗರ ಸಾರಿಗೆಗಾಗಿ 100 ಎಲೆಕ್ಟ್ರಿಕ್ ಬಸ್ಸುಗಳ ಸೇರ್ಪಡೆಯ ಮಹತ್ವದ ಘೋಷಣೆ ಮಾಡಿದರು.
₹49.20 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ :
ಬೆಳಗಾವಿಯ ಕೇಂದ್ರ ಭಾಗದಲ್ಲಿ 02 ಎಕರೆ 19 ಗುಂಟೆ ವಿಸ್ತೀರ್ಣದಲ್ಲಿ ₹49.20 ಕೋಟಿ ವೆಚ್ಚದಲ್ಲಿ ಈ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ (50:50 ಅನುಪಾತದಲ್ಲಿ) ಅನುದಾನ ನೀಡಿವೆ. ಈ ನೂತನ ನಿಲ್ದಾಣವು ತಳಮಹಡಿ ಮತ್ತು ಐದು (5) ಮಹಡಿಗಳನ್ನು ಒಳಗೊಂಡಿದ್ದು, ಪ್ರಯಾಣಿಕರಿಗೆ ಆಧುನಿಕ ಸೌಕರ್ಯಗಳನ್ನು ಒದಗಿಸಿದೆ.


ಬಸ್ ನಿಲ್ದಾಣದಲ್ಲಿ ಒದಗಿಸಲಾದ ಪ್ರಮುಖ ಸೌಲಭ್ಯಗಳು:
* 28 ಬಸ್ ಅಂಕಣಗಳು ಮತ್ತು 1365 ಸಾರಿಗೆ ಸರತಿಗಳ ನಿರ್ಗಮನ ಸೌಲಭ್ಯ.
* ನಗರದ 87 ಸ್ಥಳಗಳು ಸೇರಿದಂತೆ ಒಟ್ಟು 143 ಸ್ಥಳಗಳಿಗೆ (21 ಕಿಮೀ ವ್ಯಾಪ್ತಿಯಲ್ಲಿ) ಬಸ್ ಸೌಲಭ್ಯ ಕಲ್ಪನೆ.
* ಪ್ರತಿ ದಿನ ಸುಮಾರು 96 ಸಾವಿರ ಜನ ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆ.
* ಪಾರ್ಕಿಂಗ್ ವ್ಯವಸ್ಥೆ, ವಾಣಿಜ್ಯ ಮಳಿಗೆಗಳು, ಶುದ್ಧ ಕುಡಿಯುವ ನೀರು, ಮತ್ತು ಸುಸಜ್ಜಿತ ಶೌಚಾಲಯಗಳು.
* ಶಿಶುಗಳಿಗೆ ಹಾಲುಣಿಸುವ ಪ್ರತ್ಯೇಕ ಕೊಠಡಿ ಮತ್ತು ವಿಕಲಚೇತನರಿಗಾಗಿ ಪ್ರತ್ಯೇಕ ರಾಂಪ್ ವ್ಯವಸ್ಥೆ.
* ಪೊಲೀಸ್ ಚೌಕಿ, ವಿಭಾಗೀಯ ಕಚೇರಿ, ಸಬ್-ವೇ ಸಂಪರ್ಕ, ಜೊತೆಗೆ ಲಿಫ್ಟ್ ಮತ್ತು ಎಸ್ಕಲೇಟರ್ ಸೌಲಭ್ಯಗಳನ್ನು ಒದಗಿಸಲಾಗಿದೆ.
ಬೆಳಗಾವಿಯಲ್ಲಿ 5 ಎಕರೆ 5 ಗುಂಟೆ ವಿಸ್ತೀರ್ಣದಲ್ಲಿ ₹24 ಕೋಟಿ ವೆಚ್ಚದಲ್ಲಿ ಎಲೆಕ್ಟ್ರಿಕ್ ಬಸ್ ಘಟಕವನ್ನು ಸಹ ಸ್ಥಾಪಿಸಲಾಗುತ್ತಿದ್ದು, ಇದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಶೇ.50 ರಷ್ಟು ಅನುದಾನ ಸಿಗಲಿದೆ.
‘ಶಕ್ತಿ’ ಯೋಜನೆಗೆ ಎರಡು ವಿಶ್ವ ದಾಖಲೆ :
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆಯ ಯಶಸ್ಸನ್ನು ಕೊಂಡಾಡಿದರು. ಕಳೆದ ಎರಡುವರೆ ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 10,000 ಹೊಸ ನೇಮಕಾತಿ ಮಾಡಲಾಗಿದೆ ಹಾಗೂ ಸಂಸ್ಥೆಗಳಿಗೆ 215ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ ಎಂದು ತಿಳಿಸಿದರು.
ಶಕ್ತಿ ಯೋಜನೆ ಯಶಸ್ವಿಯಾಗಿ ಮುಂದುವರೆಯುತ್ತಿದ್ದು, ಇಲ್ಲಿಯವರೆಗೆ ಒಟ್ಟು 565.48 ಕೋಟಿ ಮಹಿಳಾ ಟಿಕೆಟ್ಗಳನ್ನು ವಿತರಿಸಲಾಗಿದ್ದು, ಈ ಪ್ರಯಾಣಕ್ಕಾಗಿ ₹14,456 ಕೋಟಿ ವೆಚ್ಚವಾಗಿದೆ. ಶಕ್ತಿ ಯೋಜನೆಯು ತನ್ನ ಯಶಸ್ಸಿಗಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (Golden Book of World Records) ಮತ್ತು ಇಂಟರ್ ನ್ಯಾಶನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (International Book of World Records) ಗಳಲ್ಲಿ ಸೇರ್ಪಡೆಯಾಗಿರುವುದು ಈ ಯೋಜನೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿಗಳು ಹೆಮ್ಮೆಯಿಂದ ನುಡಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಲೋಕೋಪಯೋಗಿ ಸಚಿವರಾದ ಎಚ್.ಸಿ.ಮಹದೇವಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಫ್ರಕಾಶ್ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರು ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.






















