ಬೆಂಗಳೂರು, ಸೆ.26 www.bengaluruwire.com : ಏಷ್ಯಾದಲ್ಲೇ ಮೊದಲ ಬಾರಿಗೆ ಹೈಟೆಕ್ ಪಾರ್ಕಿಂಗ್ ನಿಲ್ದಾಣ ನಿರ್ಮಾಣ ಮಾಡುವ ಹೆಸರಿನಲ್ಲಿ ಕೃಷ್ಣರಾಜ ಮಾರ್ಕೆಟ್ (SKR Market) ನಲ್ಲಿ ಕರೆದಿರುವ ಹೊಸ ಟೆಂಡರ್ ಗುತ್ತಿಗೆಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಹೊಸದಾಗಿ ಸ್ಥಾಪಿಸಲಾದ ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಕೋಟ್ಯಾಂತರ ರೂ. ಆದಾಯ ನಷ್ಟವಾಗಲಿದೆ ಎನ್ನುತ್ತಾರೆ ಕೆ.ಆರ್.ಮಾರ್ಕೇಟ್ ವರ್ತಕರ ಕ್ಷೇಮಾಭಿವೃದ್ಧಿ ಸಂಘ.
ಜನಸಾಮಾನ್ಯರು ಓಡಾಡುವ, ಹಳ್ಳಿಗಳಿಂದ ಹಣ್ಣು,ಹೂವು, ತರಕಾರಿ ಹಾಕಿಕೊಂಡುವ ಬರುವ ರೈತರಿಗೆ ಕೃಷ್ಣ ರಾಜೇಂದ್ರ ಮಾರುಕಟ್ಟೆ ಸಂಕೀರ್ಣದಲ್ಲಿ ವಾಹನ ಪಾರ್ಕಿಂಗ್ ಶುಲ್ಕ ಮುಂದೆ ಗಗನಮುಖಿಯಾಗಲಿದೆ. ಟೆಂಡರ್ ನೀಡಿಕೆ ಅವಧಿ ಹಿಂದಿನ 3 ವರ್ಷದಿಂದ ಈಗ ಹೊಸ ಟೆಂಡರ್ ನಲ್ಲಿ 10 ವರ್ಷಕ್ಕೆ ಹೆಚ್ಚಳವಾಗಿದ್ದು, ಹಿಂದಿನ ಟೆಂಡರ್ ಗೆ ಹೋಲಿಸಿದಲ್ಲಿ ಪಾಲಿಕೆಗೆ ಈ ಹೊಸ ಟೆಂಡರ್ ಗುತ್ತಿಗೆಯು ಕೇಂದ್ರ ನಗರ ಪಾಲಿಕೆಗೆ ನಾಲ್ಕು ಪಟ್ಟು ಕಡಿಮೆ ಆದಾಯ ತರಲಿದ್ದು, ಜೊತೆಗೆ ಸಾರ್ವಜನಿಕರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಮೂರು ಪಟ್ಟು ಹೆಚ್ಚು ಹೊರೆಯಾಗಲಿದೆ ಎಂದು ಮಾರ್ಕೆಟ್ನ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕೋಟಿಗಟ್ಟಲೆ ನಷ್ಟ, ದುಬಾರಿ ಶುಲ್ಕ:
ಹಿಂದಿನ ಬಿಬಿಎಂಪಿ ಬದಲಿಗೆ ಈಗ ಜಾರಿಗೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಸ್ವಾತಂತ್ರ್ಯ ಉದ್ಯಾನವನದ ಬಳಿ ಪ್ರಾರಂಭಿಸಿರುವ ಮಲ್ಟಿ ಲೆವೆಲ್ ಪಾರ್ಕಿಂಗ್ ಮಾದರಿಯಲ್ಲಿ ಸುಮಾರು ₹4.37 ಕೋಟಿ ವೆಚ್ಚದಲ್ಲಿ ಹೈಟೆಕ್ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು 10 ವರ್ಷಗಳ ಅವಧಿಗೆ ಟೆಂಡರ್ ಕರೆದಿದೆ. ಆದರೆ, ಈ ಹೊಸ ಪಾರ್ಕಿಂಗ್ ಗುತ್ತಿಗೆ ಲೆಕ್ಕಾಚಾರವು ವರ್ತಕರಲ್ಲಿ ಅಸಮಾಧಾನ ಮೂಡಿಸಿದೆ. ಈ ಟೆಂಡರ್ ಪಡೆದುಕೊಳ್ಳುವಲ್ಲಿ ಕೋಟ್ಯಾಂತರ ರೂ. ಹಣ ಕೈಬದಲಾಗಿದೆ ಎಂದು ಎಸ್.ಕೆ.ಆರ್.ಮಾರ್ಕೇಟ್ ವರ್ತಕರ ಕ್ಷೇಮಾಭಿವೃದ್ಧಿ ಸಂಘ ಗಂಭೀರ ಆರೋಪ ಮಾಡಿದೆ.


ಗಾಂಧಿ ಬಜಾರ್ ಪಾರ್ಕಿಂಗ್ ಹಾಗೂ ಕೆ.ಆರ್.ಮಾರ್ಕೆಟ್ ವಾಹನ ನಿಲ್ದಾಣ ಎರಡೂ ಗುತ್ತಿಗೆ ಪ್ರಿನ್ಸ್ ರಾಯಲ್ ಪಾರ್ಕಿಂಗ್ ಕಂಪನಿಗೆ ಲಭಿಸಿದೆ. ಕಂಪ್ಯೂಟರ್, ಸಿಸಿಟಿವಿ ಕ್ಯಾಮರಾ, ಬ್ಯಾರಿಕೇಡಿಂಗ್ ಮತ್ತಿತರ ಉಪಕರಣ ಬಳಸಿ ಹೈಟೆಕ್ ಆಗಿ ವಾಹನಗಳ ಪಾರ್ಕಿಂಗ್ ನಿರ್ವಹಣೆ ಮಾಡಲಾಗುತ್ತದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ಖಚಿತಪಡಿಸಿದ್ದಾರೆ.
ಈ ಹೊಸ ಪಾರ್ಕಿಂಗ್ ದರಗಳು, ಮಾಲ್ ಮತ್ತು ಇತರೆ ಐಷಾರಾಮಿ ಸ್ಥಳಗಳಲ್ಲಿ ಖಾಸಗಿ ಗುತ್ತಿಗೆದಾರರು ವಿಧಿಸುವ ದರಗಳಿಗೆ ಸರಿಸಮವಾಗಿದ್ದು, ಇಲ್ಲಿನ ಸಣ್ಣ ಮತ್ತು ಬಡ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಹೊರೆಯಾಗಲಿವೆ ಎಂದು ವರ್ತಕರ ಸಂಘದ ಅಧ್ಯಕ್ಷ ದಿವಾಕರ್ ಅವರು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ ರಾವ್ ಅವರಿಗೆ ನೀಡಿದ ಮನವಿ ಪತ್ರದಲ್ಲಿ ಆಕ್ಷೇಪಿಸಿದ್ದಾರೆ.
ಅನಗತ್ಯ ಕಾಮಗಾರಿಯ ಆಕ್ಷೇಪ:
ಕೆ.ಆರ್.ಮಾರ್ಕೇಟ್ ಕಟ್ಟದ ನೆಲಮಹಡಿಯಲ್ಲಿನ ಪಾರ್ಕಿಂಗ್ ಪ್ರದೇಶದ ನವೀಕರಣಕ್ಕಾಗಿ ₹4.37 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಕ ಭಾಗವಾಗಿ ಕಳೆದ ಸೆ.16 ರಿಂದಲೇ ವಾಹನ ನಿಲ್ದಾಣಕ್ಕೆ ಅವಕಾಶವಿಲ್ಲ. ಈಗಾಗಲೇ ಮಾರ್ಕೆಟ್ನ ಹೆಚ್ಚಿನ ನವೀಕರಣ ಕಾಮಗಾರಿಗಳು ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಡೆದಿರುವಾಗ, ಮತ್ತೊಮ್ಮೆ ಇಷ್ಟು ದೊಡ್ಡ ಮೊತ್ತದ ಹಣವನ್ನು ಅನಗತ್ಯವಾಗಿ ಖರ್ಚು ಮಾಡಲಾಗುತ್ತಿದೆ ಎಂದು ವರ್ತಕರು ಆರೋಪಿಸಿದ್ದಾರೆ.
ತಕ್ಷಣವೇ ಈ ಟೆಂಡರ್ ಅನ್ನು ರದ್ದುಗೊಳಿಸಬೇಕು, ಪಾರ್ಕಿಂಗ್ ಶುಲ್ಕವನ್ನು ಕಡಿಮೆಗೊಳಿಸಬೇಕು. ಹಾಗೂ ಗುತ್ತಿಗೆ ಅವಧಿಯನ್ನು 10 ವರ್ಷಗಳಿಂದ 3 ವರ್ಷಕ್ಕಿಂತ ಕಡಿಮೆ ಅವಧಿಗೆ ನಿಗದಿಪಡಿಸಬೇಕು. ಈಗ ಹೊಸದಾಗಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಎರಡು- ಮೂರು ಸಮಯ ಹಿಡಿಯಲಿದೆ ಎಂದು ಜಿಬಿಎ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ :
ತಕ್ಷಣವೇ ಈ ಅವೈಜ್ಞಾನಿಕ ಟೆಂಡರ್ ಗುತ್ತಿಗೆಯನ್ನು ರದ್ದುಪಡಿಸಬೇಕು. ಕಾಮಗಾರಿ ಕಾರಣವೊಡ್ಡಿ ಪಾರ್ಕಿಂಗ್ ನಿಷೇಧ ಮುಂದುವರೆಸಿದರೆ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಎಸ್.ಕೆ.ಆರ್.ಮಾರ್ಕೇಟ್ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದಿವಾಕರ್ ಕೇಂದ್ರ ನಗರ ಪಾಲಿಕೆಗೆ ಎಚ್ಚರಿಕೆ ನೀಡಿದ್ದಾರೆ.
ದಸರಾ ಹಬ್ಬದ ವೇಳೆ ವ್ಯಾಪಾರಕ್ಕೆ ಹೊಡೆತ:

ಸದ್ಯ ನವೀಕರಣದ ಕಾರಣ ನೀಡಿ, ದಸರಾ ಹಬ್ಬದ ಸಂದರ್ಭದಲ್ಲಿ ಕೆಳ ಮಹಡಿಯ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಪಾರ್ಕಿಂಗ್ ನಿಷೇಧದಿಂದಾಗಿ ಗ್ರಾಹಕರು ಮಾರ್ಕೆಟ್ಗೆ ಬರಲು ಹಿಂದೇಟು ಹಾಕುತ್ತಿದ್ದು, ದಸರಾ ಹಬ್ಬದ ಸಮಯದಲ್ಲಿ ತುಂಬಿ ತುಳುಕಬೇಕಿದ್ದ ಮಳಿಗೆಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ಇದರಿಂದ ವ್ಯಾಪಾರಿಗಳಿಗೆ ಭಾರೀ ನಷ್ಟ ಉಂಟಾಗುತ್ತಿದೆ ಎಂದು ಸಂಘದ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಪಾರ್ಕಿಂಗ್ ನಿಷೇಧವನ್ನು ತಕ್ಷಣವೇ ತೆರವುಗೊಳಿಸಿ, ವಾಹನ ನಿಲುಗಡೆಗೆ ಅವಕಾಶ ನೀಡುವಂತೆ ಅವರು ಆಗ್ರಹಿಸಿದ್ದಾರೆ.
ಇತರೆ ಮೂಲಭೂತ ಸೌಕರ್ಯಗಳ ಕೊರತೆ:
ಪಾರ್ಕಿಂಗ್ ಒಂದೇ ಅಲ್ಲದೆ, ಮಾರ್ಕೆಟ್ ಸಂಕೀರ್ಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯೂ ಎದ್ದುಕಾಣುತ್ತಿದೆ. ಸ್ಮಾರ್ಟ್ ಸಿಟಿ ನವೀಕರಣದ ಹೊರತಾಗಿಯೂ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಲಿಫ್ಟ್ಗಳಂತಹ ಮೂಲಸೌಕರ್ಯಗಳನ್ನು ಒದಗಿಸಿಲ್ಲ ಎಂದು ವರ್ತಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜಿಬಿಎಗೆ ವರ್ತಕರ ಸಲಹೆಗಳು :
ಕೆ.ಆರ್.ಮಾರ್ಕೆಟ್ ನೆಲಮಹಡಿಯಲ್ಲಿ ಈಗಾಗಲೇ 80,000 ಚದರಡಿ ವಿಸ್ತೀರ್ಣದ ಜಾಗದ ಪಾರ್ಕಿಂಗ್ ನಿಲ್ದಾಣವಿದೆ. ಇದರ ಜೊತೆಗೆ, ಮಾರುಕಟ್ಟೆಯಲ್ಲಿ ನಿಷ್ಕ್ರಿಯಗೊಂಡಿರುವ ಶೀತಲ ಸಂಗ್ರಹಣಾ ಘಟಕವನ್ನು (cold storage) ತೆಗೆದು ಹಾಕಿದರೆ ಹೆಚ್ಚುವರಿ 20,000 ಚದರ ಅಡಿ ಪಾರ್ಕಿಂಗ್ ಜಾಗ ಲಭ್ಯವಾಗಲಿದೆ. ಹಾಗೆಯೇ, ಪೋಲೀಸರು ವಶಪಡಿಸಿಕೊಂಡ ವಾಹನಗಳನ್ನು ತೆರವುಗೊಳಿಸುವುದು, ಲೋಡಿಂಗ್-ಅನ್ಲೋಡಿಂಗ್ ಪ್ರದೇಶ ನಿಗದಿಪಡಿಸುವುದು, ಮತ್ತು ಜನರೇಟರ್ ಸೌಲಭ್ಯ ಒದಗಿಸುವ ಮೂಲಕ ಪಾರ್ಕಿಂಗ್ ಪ್ರದೇಶವನ್ನು ಸುಧಾರಿಸುವಂತೆ ಸಲಹೆ ನೀಡಲಾಗಿದೆ.
ಖಾಲಿ ಇರುವ ಮಹಡಿಗಳ ಬಳಕೆಗೆ ಆಗ್ರಹ:
ಮಾರ್ಕೆಟ್ ಸಂಕೀರ್ಣದ ಮೊದಲ ಮತ್ತು ಎರಡನೇ ಮಹಡಿಗಳು ಕಳೆದ 28 ವರ್ಷಗಳಿಂದ ಖಾಲಿ ಇವೆ. ಸುಮಾರು 1 ಲಕ್ಷ ಚದರ ಅಡಿ ಖಾಲಿ ಜಾಗವನ್ನು ಅಂಗಡಿಗಳು/ಗೋದಾಮುಗಳಿಗೆ ಹಂಚಿಕೆ ಮಾಡಿದರೆ ಬಿಬಿಎಂಪಿಗೆ ಹೆಚ್ಚಿನ ಆದಾಯ ಬರಲಿದೆ ಎಂದು ವರ್ತಕರು ಸಲಹೆ ನೀಡಿದ್ದಾರೆ.
ಇಲ್ಲಿದೆ ಬಾಡಿಗೆ ಸಮಸ್ಯೆ:
ಹೆಚ್ಚಿದ ಬಾಡಿಗೆಯ ಕಾರಣದಿಂದಾಗಿ, ಕೆಳ ಮಹಡಿಯಲ್ಲಿ 30% ಕ್ಕಿಂತ ಹೆಚ್ಚು ಮತ್ತು ಮೇಲಿನ ಮಹಡಿಯಲ್ಲಿ 50% ರಷ್ಟು ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಿದ್ದಾರೆ. ಬಾಕಿ ಇರುವ ಬಾಡಿಗೆ ಪಾವತಿಸಲು ಅನುಕೂಲವಾಗುವಂತೆ ಜಿಬಿಎ ಪುನರ್ ನವೀಕರಣ ದರಗಳ (renewal rates) ಪತ್ರವನ್ನು ನೀಡಬೇಕು ಎಂದು ವರ್ತಕರು ಕೋರಿದ್ದಾರೆ.
ಕೋರ್ಟ್ ಆದೇಶ ಪಾಲನೆಗೆ ಒತ್ತಾಯ:
ಮತ್ತೊಂದು ಪತ್ರದಲ್ಲಿ, ಹೂವಿನ ವರ್ತಕರ ಸಂಘವು ಮಾರುಕಟ್ಟೆಯಲ್ಲಿನ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಒತ್ತಾಯಿಸಿದೆ. ಅನಧಿಕೃತ ಕಟ್ಟಡಗಳನ್ನು ತೆಗೆದುಹಾಕುವಂತೆ 2017ರಲ್ಲಿ ಪಿಐಎಲ್ ದಾಖಲಿಸಲಾಗಿದ್ದರೂ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ನ್ಯಾಯಾಲಯದ ನಿಂದನೆಯಾಗಿದ್ದು, ಹೈಕೋರ್ಟ್ನ ಆದೇಶವನ್ನು (ದಿನಾಂಕ 14.09.2022) ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದೆ.
ಪ್ರಿನ್ಸ್ ರಾಯಲ್ ಪಾರ್ಕಿಂಗ್ ಕಂಪನಿಗೆ ಪಾರ್ಕಿಂಗ್ ಗುತ್ತಿಗೆ :
ಕೆ.ಆರ್.ಮಾರ್ಕೆಟ್ ನೆಲಮಹಡಿಯ ವಾಹನ ನಿಲ್ದಾಣ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಹಿಂದಿನ ಬಿಬಿಎಂಪಿ ಕರೆದ ಟೆಂಡರ್ ನಲ್ಲಿ ಮೂರು ಕಂಪನಿಗಳು ಭಾಗವಹಿಸಿದ್ದವು. ಆ ಪೈಕಿ ಪ್ರಿನ್ಸ್ ರಾಯಲ್ ಪಾರ್ಕಿಂಗ್ ಕಂಪನಿ ಯಶಸ್ವಿಯಾಗಿ ಗುತ್ತಿಗೆ ಪಡೆದುಕೊಂಡಿತ್ತು.
ಸಾರ್ವಜನಿಕರ ಮೂತ್ರ ವಿಸರ್ಜನಾ ತಾಣವಾಗಿದ್ದ ಸ್ಥಳವೀಗ ಸ್ವಚ್ಛತೆಯತ್ತ :

ಕೆ.ಆರ್.ಮಾರ್ಕೆಟ್ ನೆಲಮಹಡಿಯ ವಾಹನ ನಿಲ್ದಾಣ ನವೀಕರಣ ಹಾಗೂ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಹೆಚ್ಚಿನ ಪಾರ್ಕಿಂಗ್ ಶುಲ್ಕದ ಬಗ್ಗೆ ಕಂಪನಿಯ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಜೊತೆ ಮಾತನಾಡಿ, “ಈ ಪ್ರದೇಶದಲ್ಲಿ ನವೀಕರಣ ಮಾಡುವ ಮುನ್ನ ಕಾಮಗಾರಿ ಆರಂಭಿಸಿದಾಗ ಅಲ್ಲಿನ ಅದೆಷ್ಟು ಕೊಳಕಾಗಿತ್ತು ಎಂದರೆ, ಪಾರಿವಾಳ, ಇಲಿಗಳು ಅಲ್ಲಿನ ನೀರು ಕುಡಿದರೆ ಸಾಯುತ್ತಿದ್ದೆವು. 17 ಕಾರು, 13 ಆಟೋಗಳು, 180 ಬೈಕ್ ಗಳು ಎಂಟು ವರ್ಷಗಳಿಂದ ಅನಾಥವಾಗಿ ಬಿದ್ದಿದ್ದೆವು. ಅವುಗಳನ್ನು ಹೊರ ತೆಗೆದು ನಗರ ಸಂಚಾರ ಪೊಲೀಸರ ವಶಕ್ಕೆ ಕೊಟ್ಟಿದ್ದೇವೆ”.
“ಎಲ್ಲೆಂದರಲ್ಲಿ ಜನರು ಮೂತ್ರ ವಿಸರ್ಜನೆ ಮಾಡುತ್ತಿದ್ದಿದ್ದರಿಂದ ಅಲ್ಲಿನ ವಾತಾವರಣ ಸಂಪೂರ್ಣವಾಗಿ ಹಾಳಾಗಿತ್ತು. ಅದೆಲ್ಲವನ್ನು ನಮ್ಮ ಕಂಪನಿ ಸಂಪೂರ್ಣ ಸ್ವಂತ ಕರ್ಚಿನಲ್ಲಿ ವೆಚ್ಚ ಮಾಡಿ ಸ್ವಚ್ಛಗೊಳಿಸುತ್ತಿದ್ದೇವೆ”.
40 ದಿನಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಕಾಮಗಾರಿ ಪೂರ್ಣ :
“ಇಲ್ಲಿ ಸ್ಮಾರ್ಟ್ ಪಾರ್ಕಿಂಗ್ ಗೆ ಅಗತ್ಯವಿರುವಂತೆ ನವೀಕರಣ ಮಾಡಿ, ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಸಿ ಆನ್ ಲೈನ್ ನಲ್ಲಿ ಪಾರ್ಕಿಂಗ್ ಫೀಸ್ ಸಂಗ್ರಹ ಮಾಡಲಾಗುತ್ತದೆ. ಆರ್ ಒ ಶುದ್ಧ ಕುಡಿಯುವ ನೀರು, ವೈಫೈ, ಮಹಿಳೆಯರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. 80 ದಿನಗಳಲ್ಲಿ ಕಾಮಗಾರಿ ಮುಗಿಸಲು ಸಮಯಾವಕಾಶ ನೀಡಲಾಗಿತ್ತು, ಹೆಚ್ಚಿನ ಜನ ಕೆ.ಆರ್.ಮಾರ್ಕೆಟ್ ಗೆ ಬಂದು ಹೋಗುವ ಕಾರಣಕ್ಕೆ ಜನರಿಗೆ ತೊಂದರೆಯಾಗದಂತೆ ಕೇವಲ 40 ದಿನದಲ್ಲಿ ಹಗಲು ರಾತ್ರಿ ಕೆಲಸ ಮಾಡಿ ಕಾಮಗಾರಿ ಮುಗಿಸಿ ಸ್ಮಾರ್ಟ್ ಪಾರ್ಕಿಂಗ್ ಪ್ರಾರಂಭಿಸುತ್ತೇವೆ. ಈ ಕಾಮಗಾರಿ ಗುತ್ತಿಗೆಯನ್ನು ಕಾನೂನಾತ್ಮಕವಾಗಿ ಪಡೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸುತ್ತೇನೆ”.
“ಪಾಲಿಕೆ ಟೆಂಡರ್ ನಲ್ಲಿ ನಿಗದಿಪಡಿಸಿದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತೇವೆ. ಅಲ್ಲಿನ ವರ್ತಕರಿಗೆ ₹50 ರೂ.ಗೆ ಒಂದು ದಿನದ ಪಾಸ್ ನೀಡಲಾಗುತ್ತದೆ. ಆ ಪಾಸಿನಲ್ಲಿ ಎಷ್ಟು ಸಲ ಬೇಕಾದರೂ ಮಾರ್ಕೆಟ್ ನಿಲ್ದಾಣಕ್ಕೆ ಬಂದು ಹೋಗಬಹುದು” ಎನ್ನುತ್ತಾರೆ ಅವರು.
ಒಟ್ಟಾರೆ ಸಾರ್ವಜನಿಕರಿಗಾಗಿ ಸ್ಮಾರ್ಟ್ ಪಾರ್ಕಿಂಗ್ ಕಲ್ಪಿಸುತ್ತಿರುವ ಸ್ಥಳೀಯಾಡಳಿತ ಕ್ರಮವೇನೊ ಸ್ವಾಗತಾರ್ಹ. ಆದರೆ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಕಟ್ಟಡವನ್ನು ನವೀಕರಣ ಕಾಮಗಾರಿ ಕೈಗೊಂಡಾಗ ನೆಲಮಹಡಿಯ ಪಾರ್ಕಿಂಗ್ ಸ್ಥಳದ ಅಭಿವೃದ್ಧಿ ಅಥವಾ ನವೀಕರಣ ಯಾಕೆ ಕೈಗೊಂಡಿಲ್ಲ? ಅಥವಾ ಕಾಮಗಾರಿಗೆ ನಿಗದಿಪಡಿಸಿದ ಹಣ ಇಡೀ ಕಟ್ಟಡ ನವೀಕರಣ ಗುತ್ತಿಗೆ ಪಡೆದವರ ಪಾಲಾಯಿತಾ? ಕಾಮಗಾರಿ ಹೆಸರಿನಲ್ಲಿ ಎರಡು ಬಾರಿ ಬಿಲ್ ಆಗಿದ್ಯಾ? ಆಗುತ್ತಾ? ಹಾಗೂ ಪಾರ್ಕಿಂಗ್ ಶುಲ್ಕ ಇಳಿಕೆ ಮಾಡುವ ಬಗ್ಗೆ ಜಿಬಿಎ, ಪಾಲಿಕೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ವರ್ತಕರು ಹಾಗೂ ಜನಸಾಮಾನ್ಯರ ಬೇಡಿಕೆ ಸ್ಪಂದಿಸುತ್ತಾರಾ ಎಂದು ಕಾದುನೋಡಬೇಕು.























