ಮೈಸೂರು, ಸೆ.22 www.bengaluruwire.com : ವಿಶ್ವವಿಖ್ಯಾತ ಮೈಸೂರು ದಸರಾ 2025ಕ್ಕೆ, ಈ ಬಾರಿ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಅವರು ಚಾಲನೆ ನೀಡಿದರು.
ಸೋಮವಾರ ಚಾಮುಂಡಿ ಬೆಟ್ಟದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, “ನಮ್ಮ ಸಂಸ್ಕೃತಿ ನಮ್ಮ ಬೇರು, ಸೌಹಾರ್ಧ ನಮ್ಮ ಶಕ್ತಿ. ನಮ್ಮ ಯುವ ಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ ಹೊಸ ಸಮಾಜವನ್ನು ಕಟ್ಟೋಣ. ಅದರಲ್ಲಿ ಎಲ್ಲರಿಗೂ ಸಮಪಾಲು, ಸಮಬಾಳು ಇರಲಿ” ಎಂದು ಕರೆ ನೀಡಿದರು.
ಬಾನು ಮುಷ್ತಾಕ್ ಅವರು, “ಚಾಮುಂಡೇಶ್ವರಿ ಎಂದರೆ ಹೆಣ್ಣಿನಲ್ಲಿರುವ ಅಪಾರ ಶಕ್ತಿ. ಸ್ತ್ರೀತ್ವ ಕೇವಲ ಮೃದುತ್ವವಲ್ಲ, ಅದು ಗಟ್ಟಿ ಬದುಕಿನ ಹೋರಾಟ” ಎಂದು ಹೇಳಿದರು.
ಮೈಸೂರು ರಾಜಮನೆತನವು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಔದಾರ್ಯಕ್ಕೆ ಮಾದರಿಯಾಗಿತ್ತು. ಸಂಪತ್ತನ್ನು ಹಂಚಿಕೊಂಡಾಗ ವೃದ್ಧಿಸುತ್ತದೆ, ಶಕ್ತಿ ಹಂಚಿಕೊಂಡಾಗ ಮಾತ್ರ ದೀರ್ಘಕಾಲ ಬಾಳುತ್ತದೆ ಎಂಬುದನ್ನು ಅವರು ನೆನಪಿಸಿದರು. ತಮ್ಮ ಕವನದ ಮೂಲಕ ಹಿಂದೂ-ಮುಸ್ಲಿಂ ಬಾಂಧವ್ಯದ ಸೌಂದರ್ಯವನ್ನು ಅನಾವರಣಗೊಳಿಸಿದರು. “ನನ್ನ ಬದುಕು-ಬರಹ” ಪುಸ್ತಕದಲ್ಲಿ ಹಿಂದೂ ಧರ್ಮದೊಂದಿಗಿನ ತಮ್ಮ ಸಂಬಂಧದ ಬಗ್ಗೆ ಬರೆದಿರುವುದಾಗಿ ತಿಳಿಸಿದರು.


ತಮ್ಮ ಕವನ ‘ಬಾಗಿನ’ ವಾಚಿಸುವಾಗ, ಒಬ್ಬ ಮುಸ್ಲಿಂ ಹೆಣ್ಣುಮಗಳು ಬಾಗಿನ ಪಡೆದಾಗ ಮನಸ್ಸಿನಲ್ಲಿ ಉತ್ಪನ್ನವಾಗುವ ಭಾವನೆಗಳನ್ನು ತೆರೆದಿಟ್ಟರು. ದ್ವೇಷದ ಭಾಷೆಗಳನ್ನು ಮೀರಿ ಪ್ರೀತಿಯ ಅಲೆಗಳು ಸದಾ ಹರಿಯುತ್ತವೆ ಎಂದು ಕವನದ ಮೂಲಕ ಸಾರಿದರು.
ತಮ್ಮ ಜೀವನದ ಅತ್ಯಂತ ಗೌರವದ ಕ್ಷಣ ಇದಾಗಿದೆ ಎಂದ ಬಾನು ಮುಷ್ತಾಕ್, ಇದು ತಾಯಿ ಚಾಮುಂಡಿಯೇ ತಮ್ಮನ್ನು ಕರೆಸಿಕೊಂಡಿರುವುದಾಗಿ ಭಾವಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮನ್ನು ಆಹ್ವಾನಿಸಿ, ನೈತಿಕ ಬೆಂಬಲ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ದಸರಾ ಶಾಂತಿ ಮತ್ತು ಸರ್ವಜನಾಂಗದ ಸಾಮರಸ್ಯದ ಹಬ್ಬ.
ಮೈಸೂರು ಅರಸರು ಮುಸ್ಲಿಮರ ಬಗ್ಗೆ ಇಟ್ಟಿದ್ದ ನಂಬಿಕೆ ಹಾಗೂ ವಿಶ್ವಾಸಕ್ಕೆ ತಮ್ಮ ಸಂಬಂಧಿಯೊಬ್ಬರು ಮೈಸೂರು ಮಹಾರಾಜರ ಅಂಗರಕ್ಷಕ ಪಡೆಯಲ್ಲಿದ್ದ ಉದಾಹರಣೆಯನ್ನು ನೀಡಿದರು. ದ್ವೇಷ ಮತ್ತು ಅಸಹಿಷ್ಣುತೆಯನ್ನು ನಾಶ ಮಾಡುವ ಶಕ್ತಿ ತಾಯಿ ಚಾಮುಂಡಿಗೆ ಇದೆ ಎಂದರು.
ದಸರಾ ಆರ್ಥಿಕ ಮತ್ತು ಶೈಕ್ಷಣಿಕತೆಯ ಹಬ್ಬವಾಗಲಿ: ಸಿಎಂ ಸಿದ್ದರಾಮಯ್ಯ
ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಬಾನು ಮುಷ್ತಾಕ್ ಅವರು ಬೂಕರ್ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡ ಸಾಹಿತಿ ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಅವರ ನೇತೃತ್ವದಲ್ಲಿ ದಸರಾ ಉದ್ಘಾಟಿಸಿರುವುದು ಸಮಾನತೆಯ ಸಂದೇಶ ಸಾರುತ್ತದೆ” ಎಂದು ಹೇಳಿದರು.
ದಸರಾ ಕೇವಲ ಸಾಂಸ್ಕೃತಿಕ ಹಬ್ಬವಲ್ಲ, ಅದು ಆರ್ಥಿಕ ಮತ್ತು ಶೈಕ್ಷಣಿಕ ಬೆಳವಣಿಗೆಯ ಹಬ್ಬವಾಗಬೇಕು. ಈ ವರ್ಷದ ದಸರಾ ಸಮೃದ್ಧಿ, ಸೌಹಾರ್ದತೆ ಮತ್ತು ಪ್ರಗತಿಯ ಸಂಕೇತವಾಗಲಿ ಎಂದು ಸಿಎಂ ಸಿದ್ದರಾಮಯ್ಯ ಆಶಿಸಿದರು. ಕರ್ನಾಟಕದ ಸರ್ಕಾರವು ಸರ್ವ ಜನಾಂಗದ ಶಾಂತಿಯ ತೋಟವನ್ನು ಬಲಪಡಿಸಲು ಶ್ರಮಿಸುತ್ತದೆ. ಎಲ್ಲ ವರ್ಗದ ಜನರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಅಭಿವೃದ್ಧಿಯ ಪಥದಲ್ಲಿ ಸಾಗುವುದೇ ಸರ್ಕಾರದ ಮುಖ್ಯ ಉದ್ದೇಶ ಎಂದು ಪ್ರತಿಪಾದಿಸಿದರು.
ದಸರಾ ಹಬ್ಬದ ಮೂಲಕ ಮೈಸೂರಿನ ಸಾಂಸ್ಕೃತಿಕ ವೈಭವ ಮತ್ತು ಪ್ರವಾಸೋದ್ಯಮ ಹೆಚ್ಚಳಕ್ಕೆ ಮತ್ತಷ್ಟು ಉತ್ತೇಜನ ನೀಡಲಾಗುವುದು. ಈ ಬಾರಿಯ ದಸರಾ, ಕೋವಿಡ್ ನಂತರ ರಾಜ್ಯಕ್ಕೆ ಹೊಸ ಚೈತನ್ಯ ತುಂಬುವಂತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರವಾಸೋದ್ಯಮ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು, ರಾಜ್ಯದ ಯುವಜನರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಕೊಳ್ಳಲು ಪ್ರೇರೇಪಿಸಬೇಕು. ಈ ವರ್ಷದ ದಸರಾ ಹಬ್ಬವು ಕರ್ನಾಟಕದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆಯಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಇದೇ ವೇಳೆ, ದಸರಾ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಇತರ ಸಚಿವರುಗಳು ಭಾಗವಹಿಸಿದ್ದರು.






















